‘ಅಡಚಣೆಗಾಗಿ ಕ್ಷಮಿಸಿ’ ಚಿತ್ರದ ಲಿರಿಕಲ್ ವಿಡಿಯೊ ಬಿಡುಗಡೆಯಾಗಿದೆ. ಭೂಮಿಕಾ ಪ್ರೊಡಕ್ಷನ್ಸ್ ಲಾಂಛನದಲ್ಲಿ ಸದ್ಗುಣ ಮೂರ್ತಿ ನಿರ್ಮಿಸಿರುವ ಚಿತ್ರ ‘ಅಡಚಣೆಗಾಗಿ ಕ್ಷಮಿಸಿ’. ಇದರಲ್ಲಿನ ‘ತಯಾರಿ ಜರೂರಿ’ ಹಾಡಿನ ಲಿರಿಕಲ್ ವಿಡಿಯೊ ಇದೀಗ ಬಿಡುಗಡೆಯಾಗಿದೆ. ಭರತ್ ಎಸ್. ನಾವುಂದ ಬರೆದಿರುವ ಹಾಡು ಇದಾಗಿದೆ.
ಈ ಹಾಡಿನ ಲಿರಿಕಲ್ ವಿಡಿಯೊ, ಆಲ್ಬಂ ಸಾಂಗ್ ರೀತಿಯಲ್ಲಿ ಮೂಡಿಬಂದಿದೆ. ಇದಕ್ಕಾಗಿ ಪಾಂಡಿಚೆರಿಯಲ್ಲಿ ವಿಶೇಷವಾದ ಚಿತ್ರೀಕರಣ ನಡೆಸಲಾಗಿದ್ದು, ಛಾಯಾಗ್ರಹಣ ಸುಶೀಲ್ ನಂಬಿಯಾರ್ ಅವರದು. ಚೇತನ್ ಗಂಧರ್ವ ಹಾಗೂ ಲಕ್ಷ್ಮೀ ವಿಜಯ್ ಹಾಡಿದ್ದಾರೆ. ಪ್ರದೀಪ್ ವರ್ಮ ಅಭಿನಯವಿರುವ ಈ ವಿಡಿಯೊವನ್ನುಝೇಂಕಾರ್ ಮ್ಯೂಸಿಕ್ ಯೂಟ್ಯೂಬ್ಗೆ ಬಿಡುಗಡೆ ಮಾಡಿದೆ.
‘ಸಾಮಾನ್ಯವಾಗಿ ಲಿರಿಕಲ್ ವಿಡಿಯೊ ಚಿತ್ರೀಕರಣಕ್ಕೆ ಛಾಯಾಚಿತ್ರಗಳನ್ನು ಹಾಗೂ ಚಿತ್ರದ ಮೇಕಿಂಗ್ ಅನ್ನು ಬಳಸುತ್ತಾರೆ. ಆದರೆ ನಾವು ಲಿರಿಕಲ್ ವಿಡಿಯೋವನ್ನು ಆಲ್ಬಂ ಸಾಂಗ್ ರೀತಿಯಲ್ಲಿ ಮಾಡಿದ್ದೇವೆ. ನನಗೆ ತಿಳಿದ ಹಾಗೆ ಕನ್ನಡಲ್ಲಿ ಇದು ಮೊದಲ ಪ್ರಯತ್ನ’ ಎನ್ನುತ್ತಾರೆ, ಚಿತ್ರದ ಸಂಗೀತ ನಿರ್ದೇಶಕ ಹಾಗೂ ನಟ ಎಸ್.ಪ್ರದೀಪ್ ವರ್ಮ.
ಹನ್ನೆರಡು ವರ್ಷಗಳಿಂದ ಎಸ್.ಮಹೇಂದರ್, ಪಿ.ಎನ್.ಸತ್ಯ ಮುಂತಾದವರ ಜೊತೆ ಕೆಲಸ ಮಾಡಿ ಅನುಭವವಿರುವ ಭರತ್ ಎಸ್. ನಾವುಂದ್ ಈ ಚಿತ್ರದ ನಿರ್ದೇಶಕರು. ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು, ಗೀತರಚನೆ ಮಾಡಿರುವ ಭರತ್ ಸಾಹಸ ನಿರ್ದೇಶನವನ್ನೂ ಮಾಡಿದ್ದಾರೆ. ಸೈಕಲಾಜಿಕಲ್ ಥ್ರಿಲ್ಲರ್ ಕಥಾ ಹಂದರ ಹೊಂದಿರುವ ಈ ಚಿತ್ರ ಸದ್ಯದಲ್ಲೇ ತೆರೆಗೆ ಬರಲಿದೆ. ಶಿವಮಂಜು, ಕೆ.ಎಸ್.ಶ್ರೀಧರ್, ಶ್ರೀನಿವಾಸಪ್ರಭು, ವಿದ್ಯಾ ಕುಲಕರ್ಣಿ, ಪ್ರೀತು ಪೂಜಾ, ಸುಶೀಲ್ ಕುಮಾರ್, ಮಾಸ್ಟರ್ ಕಾರ್ತಿಕ್ ಪ್ರಮುಖ ತಾರಾಬಳಗದಲ್ಲಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.