ಕರುನಾಡು ದೀಪಾವಳಿ ಹಬ್ಬದ ಸಂಭ್ರಮದಲ್ಲಿ ಮಿಂದೆದ್ದಿದೆ. ಎಲ್ಲೆಡೆ ಪಟಾಕಿ ಸದ್ದು ಜೋರಾಗಿಯೇ ಕೇಳಿಬರುತ್ತಿದೆ. ಚಂದನವನದ ತಾರೆಯರು ಕೂಡ ಬೆಳಕಿನ ಹಬ್ಬದ ಸಂಭ್ರಮದಲ್ಲಿದ್ದಾರೆ. ಜೊತೆಗೆ, ನಾಡಿನ ಜನತೆಗೆ ಟ್ವಿಟರ್ ಮೂಲಕ ಹಬ್ಬದ ಶುಭಾಶಯ ಕೋರಿದ್ದಾರೆ.
‘ಹ್ಯಾಟ್ರಿಕ್ ಹೀರೊ’ ಶಿವರಾಜ್ಕುಮಾರ್, ‘ಎಲ್ಲರ ಬದುಕಿನಲ್ಲಿ ದೀಪಾವಳಿ ಹಬ್ಬ ಬೆಳಕನ್ನು ಜಾಸ್ತಿ ಕೊಡಲಿ. ವೃತ್ತಿಯಲ್ಲಿ ಯಶಸ್ಸು ಸಿಗಲಿ. ಎಲ್ಲರೂ ಹಬ್ಬವನ್ನು ಎಂಜಾಯ್ ಮಾಡಿ. ಪರಿಸರ ಸ್ನೇಹಿಯಾಗಿ ಪಟಾಕಿ ಹಚ್ಚಬೇಕು. ನಿಸರ್ಗಕ್ಕೆ ಹಾನಿಯಾಗದಂತೆ ಹಬ್ಬ ಆಚರಿಸಬೇಕು’ ಎಂದು ಸಲಹೆ ನೀಡಿದ್ದಾರೆ.
ನಟಿ ಹರಿಪ್ರಿಯಾ ಅವರು ನಾಲ್ಕೈದು ವರ್ಷದಿಂದ ಒಂದು ಪಟಾಕಿಯನ್ನೂ ಹಚ್ಚಿಲ್ಲವಂತೆ. ಈ ಕುರಿತು ಟ್ವೀಟ್ ಮಾಡಿರುವ ಅವರು, ‘ದೀಪಾವಳಿ ಹಬ್ಬ ಎಲ್ಲರಿಗೂ ಒಳ್ಳೆಯದನ್ನು ಮಾಡಲಿ. ಎಲ್ಲರೂ ಚೆನ್ನಾಗಿ ಸ್ವೀಟ್ ತಿನ್ನಿ. ಪಟಾಕಿ ಬದಲಿಗೆ ದೀಪಗಳನ್ನು ಹಚ್ಚಿ ದೀಪಾವಳಿ ಆಚರಿಸಿ. ಪಟಾಕಿಯ ಸದ್ದಿನಿಂದ ಪರಿಸರ ಮಾಲಿನ್ಯ, ಶಬ್ದ ಮಾಲಿನ್ಯವಾಗುತ್ತದೆ. ಪ್ರಾಣಿ, ಪಕ್ಷಿಗಳಿಗೂ ತೊಂದರೆಯಾಗುತ್ತದೆ. ಹಾಗಾಗಿ, ಪಟಾಕಿ ಸಿಡಿಸಬೇಡಿ’ ಎಂದು ಕೋರಿದ್ದಾರೆ.
ನಟರಾದ ಕಿಚ್ಚ ಸುದೀಪ್, ‘ಪವರ್ ಸ್ಟಾರ್’ ಪುನೀತ್ರಾಜ್ಕುಮಾರ್, ‘ಚಾಲೆಂಜಿಂಗ್ ಸ್ಟಾರ್’ ದರ್ಶನ್, ಶರಣ್, ನಟಿ ರಶ್ಮಿಕಾ ಮಂದಣ್ಣ ಜನರಿಗೆ ದೀಪಾವಳಿ ಹಬ್ಬದ ಶುಭಾಶಯ ಕೋರಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.