ADVERTISEMENT

ಚಂದನವನದಲ್ಲಿ ಹುಬ್ಬಳ್ಳಿಯ ಬಾಡಿಬಿಲ್ಡರ್ ಕೃಷ್ಣ

ಕೃಷ್ಣಿ ಶಿರೂರ
Published 14 ಮಾರ್ಚ್ 2021, 19:30 IST
Last Updated 14 ಮಾರ್ಚ್ 2021, 19:30 IST
ಹುಬ್ಬಳ್ಳಿಯ ಪ್ರತಿಭೆ ಕೃಷ್ಣ ಆರ್‌.ಸಿ
ಹುಬ್ಬಳ್ಳಿಯ ಪ್ರತಿಭೆ ಕೃಷ್ಣ ಆರ್‌.ಸಿ   

ಹುಬ್ಬಳ್ಳಿ: ಇತ್ತೀಚೆಗೆ ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನ ಕಾಣುತ್ತಿರುವ ₹31 ಕೋಟಿ ಬಜೆಟ್‌ ಸಿನಿಮಾ ’ಪೊಗರು‘ದಲ್ಲಿ ಹುಬ್ಬಳ್ಳಿಯ ಪ್ರತಿಭೆ ಕೃಷ್ಣ ಆರ್‌.ಸಿ ಮಿಂಚಿದ್ದಾರೆ. ಈ ಸಿನಿಮಾದಲ್ಲಿ ಕೃಷ್ಣ ಅವರದ್ದು ಖಳನಾಯಕನ ಬಲಗೈಬಂಟನ ಪಾತ್ರ. ಹುಬ್ಬಳ್ಳಿ ಸಮೇತ ಉತ್ತರ ಕರ್ನಾಟಕದಲ್ಲಿ ಈ ಪೊಗರು ಸಿನಿಮಾ ಉತ್ತಮವಾಗಿ ಪ್ರದರ್ಶನ ಕಾಣುತ್ತಿದೆ.

ಬಾಡಿ ಬಿಲ್ಡರ್‌ ಆಗಿ ಹೆಸರು ಮಾಡಿರುವ ಕೃಷ್ಣ ಮಿಸ್ಟರ್‌ ಇಂಡಿಯಾ ಬಾಡಿಬಿಲ್ಡರ್‌ ಪ್ರದರ್ಶನದಲ್ಲಿ ಹೆಸರು ಮಾಡಿದವರು. ಬಾಡಿಬಿಲ್ಡರ್‌ ಆಗಿರುವ ಕಾರಣಕ್ಕೆ ಇಂದು ಅವರಿಗೆ ಸಿನಿಮಾ ರಂಗದಲ್ಲಿ ಹೆಚ್ಚು ಅವಕಾಶಗಳು ಬರುತ್ತಿವೆ. ಪೊಗರು ಸಿನಿಮಾ ಪ್ರದರ್ಶನ ನಂತರ ಇನ್ನಷ್ಟು ಹೆಚ್ಚು ಅವಕಾಶಗಳು ಅರಸಿ ಬರುತ್ತಿವೆ ಎನ್ನುತ್ತಾರೆ ಕೃಷ್ಣ.

ಈವರೆಗೆ 30 ಸಿನಿಮಾದಲ್ಲಿ ಕೃಷ್ಣ ಅಭಿನಯಿಸಿದ್ದಾರೆ. ಹೆಚ್ಚಿನವು ವಿಲನ್‌ ಪಾತ್ರಗಳು. ಕೆಜಿಎಫ್‌–1, ಇನ್‌ಸ್ಪೆಕ್ಟರ್‌ ವಿಕ್ರಂ, ಬುಲೆಟ್‌ ಬಸ್ಯಾ, ಪರದೇಶಿ ಕೇರ್‌ ಆಫ್‌ ಲಂಡನ್‌, ಕೋಟೆ, ನಂದೀಶ, ಮರ್ಯಾದೆ ರಾಮಣ್ಣ ಮೊದಲಾದ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಕರ್ನಾಟಕ ರೈತ ರಾಜ್ಯ ಸಿನಿಮಾದಲ್ಲಿ ಪೈಲ್ವಾನ್‌ ಆಗಿ ಮಿಂಚಿದ್ದಾರೆ. ಪುನಿತ್‌ರಾಜ್‌ಕುಮಾರ ಅಭಿನಯದ ಯುವರತ್ನ, ಚೋಟಾ ಮುಂಬೈ, ತಮಿಳು ಸಿನಿಮಾ ಮಾಲ್ಗೆ ಬಿಡುಗಡೆಯಾಬೇಕಿರುವ ಚಿತ್ರಗಳು.

ADVERTISEMENT

ಸದ್ಯ ಆಯೆಷಾ ಅಭಿನಯದ ರಿವೆಂಜ್‌ ಸಿನಿಮಾದಲ್ಲಿ ಪ್ರಮುಖ ಪಾತ್ರವೊಂದರಲ್ಲಿ ಅಭಿನಯಿಸುತ್ತಿದ್ದಾರೆ. ಕಾಲೇಜು ದಿನಗಳಲ್ಲಿ ಬಾಡಿ ಬಿಲ್ಡರ್‌ ಆಗುವ ಕನಸು ಹೊಂದಿದ್ದ ಕೃಷ್ಣ ಅದರಲ್ಲಿ ಸಾಕಷ್ಟು ಸಾಧನೆ ಮಾಡಿದ್ದಾರೆ. ಕರ್ನಾಟಕ ಯುನಿವರ್ಸಿಟಿ ಬ್ಲೂ ಆಗಿ ಮೂರು ವರ್ಷ ಮಿಂಚಿದ್ದಾರೆ. ಜಿಲ್ಲಾ ಮಟ್ಟ, ರಾಜ್ಯ ಮಟ್ಟ, ದಸರಾ ಉತ್ಸವ, ರಾಷ್ಟ್ರೀಯ ಮಟ್ಟದಲ್ಲೂ ಹಲವಾರು ಪ್ರಶಸ್ತಿಗಳನ್ನು ಗೆದ್ದಿದ್ದಾರೆ.

‘ಆರಂಭದಲ್ಲಿ ಸಣ್ಣ,ಪುಟ್ಟ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದೆ. ಆದರೆ ಇತ್ತೀಚೆಗೆ ಪ್ರಸಿದ್ಧ ನಾಯಕರ ಸಿನಿಮಾಗಳಲ್ಲಿ ಪ್ರಮುಖ ವಿಲನ್‌ ಪಾತ್ರಗಳಲ್ಲಿ ಅಭಿನಯಿಸುತ್ತಿರುವುದು ಖುಷಿ ಕೊಟ್ಟಿದೆ. ಪೊಗರು ಸಿನಿಮಾ ಬಿಡುಗಡೆಯ ನಂತರ ಹೆಚ್ಚಿನ ಅವಕಾಶಗಳು ಬರುತ್ತಿವೆ. ಥ್ರಿಲ್ಲರ್‌ ಮಂಜು ಅವರೂ ತಮ್ಮ ಸಿನಿಮಾದಲ್ಲಿ ಪಾತ್ರವೊಂದಕ್ಕೆ ನನ್ನನ್ನು ಆಯ್ಕೆ ಮಾಡಿದ್ದಾರೆ. ಸಿನಿಮಾ ಕ್ಷೇತ್ರದಲ್ಲಿ ನನ್ನ ಈ ಬೆಳವಣಿಗೆ ಖುಷಿ ಕೊಟ್ಟಿದೆ’ ಎನ್ನುತ್ತಾರೆ ಕೃಷ್ಣ. ‘ಪೊಗರು ಸಿನಿಮಾ ಬಿಡುಗಡೆ ನಂತರ ನನ್ನ ಅಭಿಮಾನಿ ಗೆಳೆಯರ ಬಳಗವೂ ದೊಡ್ಡದಾಗಿದೆ. ಹುಬ್ಬಳ್ಳಿಯಲ್ಲಿ ಪೊಗರು ಪ್ರದರ್ಶನ ವೇಳೆ ಚಿತ್ರದ ನಾಯಕ ನಟ ಧ್ರುವ ಸರ್ಜಾ ಅಭಿಮಾನಿ ಬಳಗದವರು ಪೌರಕಾರ್ಮಿಕರಿಗೆ ಸನ್ಮಾನಿಸಿದ್ದಾರೆ. ಹುಬ್ಬಳ್ಳಿ ಮಂದಿ ನನ್ನ ನಟನೆಯನ್ನೂ ಒಪ್ಪಿಕೊಂಡಿದ್ದಾರೆ’ ಎಂದು ಸಂತಸ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.