ಬೆಂಗಳೂರು:‘ನಿರ್ದೇಶಕರು ಡ್ರಿಂಕ್, ಡಿನ್ನರ್ಗೆ ಕರೆದಾಗ ಬರಲಿಲ್ಲ ಎಂಬ ಕಾರಣಕ್ಕೆ ನನ್ನನ್ನು ಸಿನಿಮಾದಿಂದ ತೆಗೆದು ಹಾಕಲಾಗಿದೆ’ ಎಂದು ಯುವನಟಿ ಜಯಶ್ರೀ ಆರೋಪಿಸಿದ್ದಾರೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಅವರು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಮಂಗಳವಾರ ದೂರನ್ನೂ ಸಲ್ಲಿಸಿದ್ದಾರೆ.
ಮಂಜು ಹೆಬ್ಬೂರ್ ನಿರ್ದೇಶನದ ‘ನಟ ನಟಿಯರು’ ಎಂಬ ಸಿನಿಮಾದಲ್ಲಿ ಜಯಶ್ರೀ ಅವರು ನಟಿಸುತ್ತಿದ್ದರು. ಜುಲೈ ತಿಂಗಳಲ್ಲಿ ಎರಡು ದಿನ ಚಿತ್ರೀಕರಣದಲ್ಲಿಯೂ ಭಾಗವಹಿಸಿದ್ದರು. ‘ಈಗ ಇದ್ದಕ್ಕಿಂದ್ದಂತೆಯೇ ನಾಯಕಿಯನ್ನು ಬದಲಾಯಿಸಿ ಚಿತ್ರೀಕರಣ ಆರಂಭಿಸಿದ್ದಾರೆ. ನನಗೆ ಈ ಬಗ್ಗೆ ಮಾಹಿತಿಯನ್ನೂ ನೀಡಿಲ್ಲ. ನಾನು ವಿಚಾರಿಸಿದಾಗಲೂ ಸಮಂಜಸ ಉತ್ತರ ನೀಡಿಲ್ಲ’ ಎಂದು ಅಳಲು ತೋಡಿಕೊಂಡರು.
‘ಈಗ ಫರ್ಪಾರ್ಮೆನ್ಸ್ ವಿಡಿಯೊ ಕಳಿಸಲಿಲ್ಲ ಎಂಬ ನೆಪ ಹೇಳುತ್ತಿದ್ದಾರೆ. ಆದರೆ ಸಿನಿಮಾಕ್ಕೆ ಆಯ್ಕೆ ಮಾಡುವ ಮೊದಲೇ ಫರ್ಪಾರ್ಮೆನ್ಸ್ ಪರಿಶೀಲನೆ ಮಾಡಬೇಕಲ್ಲವೇ. ಇದು ನೆಪ ಅಷ್ಟೆ, ಅವರ ಜತೆ ಕುಡಿತಕ್ಕೆ– ಊಟಕ್ಕೆ ಬರಲಿಲ್ಲ ಎಂಬ ಕಾರಣಕ್ಕೆ ಸಿನಿಮಾದಿಂದ ನನ್ನನ್ನು ಹೊರಹಾಕಿದ್ದಾರೆ’ ಎಂದು ಪ್ರಜಾವಾಣಿ ಜತೆ ಮಾತನಾಡಿದ ಜಯಶ್ರೀ ಆರೋಪಿಸಿದರು.
ಜಯಶ್ರೀ ‘ಉಪ್ಪು ಹುಳಿ ಖಾರ’ ಚಿತ್ರದಲ್ಲಿ ನಟಿಸಿದ್ದರು. ಬಿಗ್ಬಾಸ್ ರಿಯಾಲಿಟಿ ಷೋದ ಮೂರನೇ ಆವೃತ್ತಿಯಲ್ಲಿಯೂ ಭಾಗವಹಿಸಿದ್ದರು. ಮಂಜು ಹೆಬ್ಬೂರ್ ’ಗ್ಯಾಪಲ್ ಒಂದು ಸಿನಿಮಾ’ ಎಂಬ ಸಿನಿಮಾ ನಿರ್ದೇಶಿಸಿದ್ದಾರೆ. ಜಯಶ್ರೀ ಅವರ ಆರೋಪದ ಕುರಿತು ಪ್ರತಿಕ್ರಿಯೆಗಾಗಿ ಮಂಜು ಹೆಬ್ಬೂರ್ ಅವರನ್ನು ಸಂಪರ್ಕಿಸಿದಾಗ ದೂರವಾಣಿ ಕರೆ ಸ್ವೀಕರಿಸಲಿಲ್ಲ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.