2012ರಲ್ಲಿ ತೆರೆಕಂಡ ನಟ ಉಪೇಂದ್ರ ನಾಯಕರಾಗಿದ್ದ ‘ಕಲ್ಪನ’ ಸಿನಿಮಾವೇ ನಟಿ ಲಕ್ಷ್ಮಿ ರೈ ಅವರು ಕನ್ನಡದಲ್ಲಿ ನಟಿಸಿದ ಕೊನೆಯ ಚಿತ್ರ. ಹಿಂದಿ, ತೆಲುಗು ಮತ್ತು ತಮಿಳು ಭಾಷೆಯಲ್ಲಿ ಬ್ಯುಸಿಯಾಗಿದ್ದ ಅವರು ‘ಝಾನ್ಸಿ’ ಚಿತ್ರದ ಮೂಲಕ ಮತ್ತೆ ಕನ್ನಡಕ್ಕೆ ಮರಳಿದ್ದಾರೆ. ಇದು ಅವರ ಮೊದಲ ಆ್ಯಕ್ಷನ್ ಸಿನಿಮಾವೂ ಹೌದು. ಇದರಲ್ಲಿ ಸಸ್ಪೆನ್ಸ್, ಆ್ಯಕ್ಷನ್ ಜತೆಗೆ ಒಂದು ಸಣ್ಣ ಪ್ರೇಮ ಕಥನವೂ ಇದೆಯಂತೆ.
ಆ್ಯಕ್ಷನ್ ಸಿನಿಮಾ ಮಾಡಲು ಸಾಕಷ್ಟು ಸಿದ್ಧತೆ ಮಾಡಿಕೊಳ್ಳಬೇಕು. ಅದರಲ್ಲೂ ಹೆಣ್ಣುಮಗಳೊಬ್ಬಳು ಪೂರ್ವ ಸಿದ್ಧತೆ ಇಲ್ಲದೆ ಆ್ಯಕ್ಷನ್ ಸಿನಿಮಾ ಮಾಡಿದರೆ ಕಾಮಿಡಿ ಆಗಿಬಿಡುತ್ತದೆ ಎನ್ನುತ್ತಾರೆ ಲಕ್ಷ್ಮಿ ರೈ. ಹಾಗಾಗಿಯೇ, ಅಗತ್ಯ ಸಿದ್ಧತೆ ಮಾಡಿಕೊಂಡೇ ಅವರು ‘ಝಾನ್ಸಿ’ಯ ಪಾತ್ರಕ್ಕೆ ಜೀವ ತುಂಬಿದ್ದಾರಂತೆ. ನಾಯಕಿ ಪ್ರಧಾನ ಚಿತ್ರ ಮಾಡುವಾಗ ಮುಂಜಾಗ್ರತೆವಹಿಸಬೇಕು ಎನ್ನುವುದು ಅವರ ಅನುಭವದ ಮಾತು. ಚಿತ್ರದಲ್ಲಿ ಅವರದು ಖಡಕ್ ಪೊಲೀಸ್ ಅಧಿಕಾರಿಯ ಪಾತ್ರ. ಈ ಚಿತ್ರಕ್ಕಾಗಿ ಅವರು ಮಾರ್ಷಲ್ ಆರ್ಟ್ ಕೂಡ ಕಲಿತಿದ್ದಾರಂತೆ.
‘ಮರ್ಯಾದ ರಾಮಣ್ಣ’ ಚಿತ್ರ ನಿರ್ದೇಶಿಸಿದ್ದಪಿ.ವಿ.ಎಸ್. ಗುರುಪ್ರಸಾದ್ ಅವರೇ ಈ ಸಿನಿಮಾಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಕಥೆ, ಚಿತ್ರಕಥೆ ಮತ್ತು ಸಂಭಾಷಣೆಯ ನೊಗ ಹೊತ್ತಿದ್ದಾರೆ.‘ಝಾನ್ಸಿ’ ಸಿನಿಮಾ ಶೂಟಿಂಗ್ ಪೂರ್ಣ ಪೂರ್ಣಗೊಳಿಸಿ ಈಗ ಮಾತಿನ ಮನೆಗೆ ತೆರಲಿದೆ. ಮಾದಕ ವಸ್ತು, ಲ್ಯಾಂಡ್ ಮಾಫಿಯಾದ ಸುತ್ತ ಚಿತ್ರದ ಕಥೆ ಹೆಣೆಯಲಾಗಿದೆ. ಇದು ಮಾಸ್ ಹಾಗೂ ಕುಟುಂಬ ಸಮೇತ ನೋಡುವ ಚಿತ್ರ ಎನ್ನುವುದು ನಿರ್ದೇಶಕರ ವಿವರಣೆ.
ಮುಂಬೈ ಮೂಲದ ರಾಜೇಶ್ ಕುಮಾರ್ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ನಾಲ್ಕು ಹಾಡುಗಳಿಗೆ ಎಂ.ಎನ್. ಕೃಪಾಕರ್ ಸಂಗೀತ ಸಂಯೋಜಿಸಿದ್ದಾರೆ. ಛಾಯಾಗ್ರಹಣ ವೀರೇಶ್ ಅವರದ್ದು. ಬಸವರಾಜ್ ಸಂಕಲನ ಕಾರ್ಯ ನಿರ್ವಹಿಸಿದ್ದಾರೆ.ಒಂದು ಹಾಡಿಗೆ ನೃತ್ಯ ನಿರ್ದೇಶಕ ಧನ್ ಕುಮಾರ್ ಕೂಡ ಹೆಜ್ಜೆ ಹಾಕಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.