ಕಬೀರ್ ದುಹಾನ್ ಸಿಂಗ್ ಎಂದಾಕ್ಷಣ ಸಿನಿಪ್ರಿಯರಿಗೆ ನಟ ಸುದೀಪ್ ನಟನೆಯ ‘ಪೈಲ್ವಾನ್’ ಚಿತ್ರದ ಟೋನಿ ಪಾತ್ರ ನೆನಪಾಗುತ್ತದೆ. ಕಳೆದ ವರ್ಷ ತೆರೆಕಂಡ ಈ ಚಿತ್ರದಲ್ಲಿ ಬಾಕ್ಸಿಂಗ್ ಪಟುವಾಗಿ ಮಿಂಚಿದ್ದ ಕಬೀರ್ ಕನ್ನಡದ ಪ್ರೇಕ್ಷಕರಿಗೆ ಚಿರಪರಿಚಿತ. ಇದಕ್ಕೂ ಮೊದಲೇ ಸುದೀಪ್ ನಟನೆಯ ‘ಹೆಬ್ಬುಲಿ’ ಚಿತ್ರದಲ್ಲೂ ಅವರು ನಟಿಸಿದ್ದರು. ‘ಅತಿರಥ’ ಮತ್ತು ‘ಉದ್ಘರ್ಷ’ ಸಿನಿಮಾಗಳಲ್ಲೂ ಕಬೀರ್ ಖಳನಟನ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ.
ಕಳೆದ ವರ್ಷ ಗಾಯಕಿ ಡಾಲಿ ಸಿಧು ಜೊತೆಗೆ ಕಬೀರ್ ದುಹಾನ್ ಸಿಂಗ್ ಅವರ ನಿಶ್ಚಿತಾರ್ಥ ನೆರವೇರಿಸಿತ್ತು. ಈ ಜೋಡಿ ಡಿಸೆಂಬರ್ನಲ್ಲಿ ಹಸೆಮಣೆ ಏರಲು ಸಿದ್ಧತೆ ನಡೆಸಿದೆ. ಡಾಲಿ ಸಿಧು ಪಂಜಾಬಿ ಚಿತ್ರರಂಗದ ಪ್ರಸಿದ್ಧ ಗಾಯಕಿಯಾಗಿದ್ದಾರೆ.ಖಾಸಗಿಯಾಗಿ ನಡೆಯಲಿರುವ ಈ ಮದುವೆ ಕಾರ್ಯಕ್ರಮದಲ್ಲಿ ಕಬೀರ್ ಸ್ನೇಹಿತರು ಮತ್ತು ಕುಟುಂಬದ ಸದಸ್ಯರು ಮಾತ್ರ ಪಾಲ್ಗೊಳ್ಳಲಿದ್ದಾರಂತೆ.
ಈ ವರ್ಷದ ಆರಂಭದಲ್ಲಿಯೇ ಇಬ್ಬರು ಸಪ್ತಪದಿ ತುಳಿಯಲು ಸಿದ್ಧತೆ ನಡೆಸಿದ್ದರು. ಆದರೆ, ಕೋವಿಡ್–19ನಿಂದಾಗಿ ಮದುವೆ ಕಾರ್ಯಕ್ರಮ ಮುಂದೂಡಿಕೆಯಾಗಿತ್ತು.
ಇಬ್ಬರೂ ಕಳೆದ ಐದು ವರ್ಷಗಳಿಂದಲೂ ಸ್ನೇಹಿತರಂತೆ. ಈ ಸ್ನೇಹವೇ ಪ್ರೀತಿಗೆ ತಿರುಗಿತ್ತು. ಮುಂಬೈನಲ್ಲಿ ಮದುವೆ ನಡೆಯಲಿದ್ದು, ದೆಹಲಿಯಲ್ಲಿ ಆರತಕ್ಷತೆಗೆ ಕಬೀರ್ ನಿರ್ಧರಿಸಿದ್ದಾರೆ. 2015ರಲ್ಲಿ ತೆರೆಕಂಡ ಅಜಿತ್ ನಟನೆಯ ತಮಿಳಿನ ‘ವೇದಾಲಂ’ ಸಿನಿಮಾದ ಯಶಸ್ಸಿನ ಬಳಿಕ ಕಬೀರ್ಗೆ ದಕ್ಷಿಣ ಭಾರತದಲ್ಲಿಯೂ ಅಭಿಮಾನಿಗಳ ಬಳಗ ದೊಡ್ಡದಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.