ADVERTISEMENT

ಆತ್ಮದ ಚಮತ್ಕಾರ ಕಥೆ

​ಪ್ರಜಾವಾಣಿ ವಾರ್ತೆ
Published 23 ಜನವರಿ 2020, 19:30 IST
Last Updated 23 ಜನವರಿ 2020, 19:30 IST
ಸಿಂಧೂ ಲೋಕನಾಥ್‌
ಸಿಂಧೂ ಲೋಕನಾಥ್‌   

ನಿರ್ದೇಶಕ ರಾಜ್‌ ಪತ್ತಿಪಾಟಿ ಮತ್ತು ವಿಕಾಸ್‌ ಕಾಂಬಿನೇಷನ್‌ನಡಿ ನಿರ್ಮಾಣವಾಗಿರುವ ‘ಕಾಣದಂತೆ ಮಾಯವಾದನು’ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಕೊಲೆಯಾದ ನಾಯಕನ ಆತ್ಮ ದುಷ್ಕರ್ಮಿಗಳ ವಿರುದ್ಧ ಹೇಗೆಲ್ಲಾ ಸೆಣಸಾಟ ನಡೆಸುತ್ತದೆ ಎಂಬುದೇ ಇದರ ಕಥಾಹಂದರ. ರಾಜ್‌ ಪತ್ತಿಪಾಟಿ ಅವರೇ ಕಥೆ, ಚಿತ್ರಕಥೆ ಮತ್ತು ಸಂಭಾಷಣೆ ಬರೆದಿದ್ದಾರೆ.

ಸಿನಿಮಾ ಬಗ್ಗೆ ಮಾಹಿತಿ ಹಂಚಿಕೊಳ್ಳಲು ಚಿತ್ರತಂಡ ಸುದ್ದಿಗೋಷ್ಠಿ ಕರೆದಿತ್ತು. ‘ಜಯಮ್ಮನ ಮಗ’ ಚಿತ್ರಕ್ಕೆ ಆ್ಯಕ್ಷನ್‌ ಕಟ್‌ ಹೇಳಿದ್ದ ವಿಕಾಸ್‌ ಮೊದಲ ಬಾರಿಗೆ ನಾಯಕನಾಗಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ‘ಚಿತ್ರದ ಆರಂಭದಲ್ಲಿಯೇ ನಾಯಕನ ಕೊಲೆಯಾಗುತ್ತದೆ. ಆತನ ಆತ್ಮ ತನ್ನನ್ನು ಕೊಂದವರ ವಿರುದ್ಧ ಹೇಗೆ ಸೇಡು ತೀರಿಸಿಕೊಳ್ಳುತ್ತದೆ ಎನ್ನುವುದೇ ಚಿತ್ರದ ಸಾರಾಂಶ. ಇದೊಂದು ಫ್ಯಾಂಟಸಿ ಕಥನ’ ಎಂದು ಮಾಹಿತಿ ನೀಡಿದರು ವಿಕಾಸ್‌.

ಸಿಂಧೂ ಲೋಕನಾಥ್‌ ಇದರ ನಾಯಕಿ. ಅವರದು ಎನ್‌ಜಿಒವೊಂದರಲ್ಲಿ ಕೆಲಸ. ನಿರ್ಗತಿಕರಿಗೆ ಸೇವೆ ಸಲ್ಲಿಸುವ ಪಾತ್ರದಲ್ಲಿ ಕಾಣಿಸಿ ಕೊಂಡಿದ್ದಾರಂತೆ. ‘ಮಾಸ್ತಿಗುಡಿ’ ಚಿತ್ರದ ಶೂಟಿಂಗ್‌ ವೇಳೆ ಆಕಸ್ಮಿಕವಾಗಿ ಮೃತಪಟ್ಟ ಉದಯ್‌ ಅವರು ಈ ಚಿತ್ರದ ಮೊದಲಾರ್ಧದವರೆಗೆ ನಟಿಸಿದ್ದಾರೆ. ಅವರ ಪಾತ್ರದ ಉಳಿದ ಭಾಗವನ್ನು ‘ಭಜರಂಗಿ’ ಲೋಕಿ ಪೂರ್ಣಗೊಳಿಸಿರುವುದು ಈ ಚಿತ್ರದ ವಿಶೇಷ.

ADVERTISEMENT

ಹಾಸ್ಯನಟ ಧರ್ಮಣ್ಣ, ‘ಚಿತ್ರದಲ್ಲಿ ನಾನು ಟ್ರಕ್‌ ಚಾಲಕ. ಆಕಸ್ಮಿಕವಾಗಿ ಹಣ ಸಿಗುತ್ತದೆ. ಅದರ ಹಿನ್ನೆಲೆ ಹುಡುಕಲು ಹೊರಟಾಗ ಕಷ್ಟಕ್ಕೆ ಸಿಲುಕುವುದೇ ನನ್ನ ಪಾತ್ರ’ ಎಂದು ಹೇಳಿದರು.

ಸುಜ್ಞಾನ್ ಅವರ ಛಾಯಾಗ್ರಹಣವಿದೆ. ವಿಜಯ್ ಗುಮೆನೇನಿ ಸಂಗೀತ ಸಂಯೋಜಿಸಿದ್ದಾರೆ. ಚಂದ್ರಶೇಖರ್ ನಾಯ್ಡು, ಸೋಮ್ ಸಿಂಗ್ ಹಾಗೂ ಪುಷ್ಪಾ ಸೋಮ್ ಸಿಂಗ್ ಆರ್ಥಿಕ ಇಂಧನ ಒದಗಿಸಿದ್ದಾರೆ. ಜ. 31ರಂದು ಬಿಡುಗಡೆಯಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.