
ಸುಷ್ಮಿತಾ
ಗುರುದತ್ ಗಾಣಿಗ ನಿರ್ದೇಶನದ ‘ಕರಾವಳಿ’ ಸಿನಿಮಾ ಬಿಡುಗಡೆಗೆ ಸಜ್ಜಾಗುತ್ತಿದೆ. ಪ್ರಜ್ವಲ್ ದೇವರಾಜ್ ಮುಖ್ಯಭೂಮಿಕೆಯಲ್ಲಿರುವ ಈ ಸಿನಿಮಾದಲ್ಲಿ ರಾಜ್ ಬಿ.ಶೆಟ್ಟಿ, ರಮೇಶ್ ಇಂದಿರಾ, ಮಿತ್ರ, ಸಂಪದಾ ಸೇರಿದಂತೆ ದೊಡ್ಡ ತಾರಾಬಳಗವೇ ಇದೆ. ಇದಕ್ಕೆ ಹೊಸ ಸೇರ್ಪಡೆ ಸುಷ್ಮಿತಾ ಭಟ್.
ರೀಲ್ಸ್ ಲೋಕದಲ್ಲಿ ಮಿಂಚಿ, ಬಳಿಕ ತೆಲುಗಿನ ‘ಲವ್ ಮ್ಯಾರೇಜ್’ ಹಾಗೂ ಮಮ್ಮುಟ್ಟಿ ನಟನೆಯ ‘ಡಾಮಿನಿಕ್’ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದ ಸುಷ್ಮಿತಾ ಇದೀಗ ‘ಭೂಮಿ’ ಎಂಬ ಪಾತ್ರದಲ್ಲಿ ‘ಕರಾವಳಿ’ ಪ್ರವೇಶಿಸಿದ್ದಾರೆ. ಚಿತ್ರತಂಡ ಅವರ ಪಾತ್ರದ ಪೋಸ್ಟರ್ ರಿಲೀಸ್ ಮಾಡಿದ್ದು, ರಾಜ್ ಬಿ.ಶೆಟ್ಟಿ ಜೊತೆಯಾಗಿ ಸುಷ್ಮಿತಾ ಭಟ್ ಅಭಿನಯ ಮಾಡಲಿದ್ದಾರೆ ಎಂದು ಚಿತ್ರತಂಡ ತಿಳಿಸಿದೆ. ಪಕ್ಕಾ ಮಂಗಳೂರಿನ ಹುಡುಗಿಯಾಗಿ ಸುಷ್ಮಿತಾ ತೆರೆ ಮೇಲೆ ಕಾಣಿಸಿಕೊಳ್ಳಲಿದ್ದಾರೆ.
‘ಕರಾವಳಿ ಸಿನಿಮಾದಲ್ಲಿನ ಪಾತ್ರ ಒಪ್ಪಿಕೊಳ್ಳಲು ಮೊದಲ ಕಾರಣ ರಾಜ್ ಬಿ. ಶೆಟ್ಟಿ ಅವರು. ರಾಜ್ ಅವರಿಂದ ನಟನೆಯ ಬಗ್ಗೆ ತುಂಬಾ ಕಲಿಯಬಹುದು ಎನ್ನುವ ಉದ್ದೇಶದಿಂದಲೇ ಈ ಸಿನಿಮಾ ಒಪ್ಪಿಕೊಂಡೆ. ಚಿತ್ರೀಕರಣ ಮಾಡಿದ್ದು ಕಡಿಮೆ ದಿನಗಳಾದರೂ ಸಾಕಷ್ಟು ಕಲಿತಿದ್ದೇನೆ. ರಾಜ್ ಅವರು ಪವರ್ ಹೌಸ್ ಇದ್ದ ಹಾಗೆ. ಸೆಟ್ನಲ್ಲಿ ಅವರು ಸದಾ ಚುರುಕಿನಿಂದ ಕೆಲಸ ಮಾಡುತ್ತಿರುತ್ತಾರೆ’ ಎಂದಿದ್ದಾರೆ ಸುಷ್ಮಿತಾ.
ನಿರ್ದೇಶಕ ಗುರುದತ್ ಗಾಣಿಗ ನಿರ್ದೇಶನದ ಜೊತೆಗೆ ವಿಕೆ ಫಿಲ್ಮಂ ಸಹಯೋಗದಲ್ಲಿ ಗಾಣಿಗ ಫಿಲ್ಮ್ಸ್ ಮೂಲಕ ಈ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಕರಾವಳಿ ಮನುಷ್ಯ ಹಾಗೂ ಪ್ರಾಣಿ ಮಧ್ಯೆ ನಡೆಯುವ ಸಂಘರ್ಷದ ಕಥೆ ಹೊಂದಿದ್ದು, ಹಳ್ಳಿ ಬ್ಯಾಕ್ ಡ್ರಾಪ್ನಲ್ಲಿ ಸಿನಿಮಾ ಮೂಡಿಬರಲಿದೆ. ಚಿತ್ರಕ್ಕೆ ಸಚಿನ್ ಬಸ್ರೂರು ಸಂಗೀತ ಸಂಯೋಜನೆ, ಅಭಿಮನ್ಯು ಸದಾನಂದನ್ ಛಾಯಾಚಿತ್ರಗ್ರಹಣವಿದೆ.
ಚಿತ್ರದ ಪೋಸ್ಟರ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.