ಮನುಷ್ಯನ ಬದುಕು ಕೂಡ ಸಮುದ್ರ ತೀರದಂತೆ ಎಂಬ ಕಥೆಯುಳ್ಳ ‘ಕಾವೇರಿ ತೀರದಲ್ಲಿ’ ಚಿತ್ರ ಇತ್ತೀಚೆಗಷ್ಟೇ ಸೆಟ್ಟೇರಿದೆ. ಆರ್.ಕೆ.ಗಾಂಧಿ ಈ ಚಿತ್ರದ ನಿರ್ದೇಶಕ. ಅವರು ಈ ಹಿಂದೆ ತೆಲುಗಿನಲ್ಲಿ ‘ಪ್ರೇಮ ಭಿಕ್ಷ’, ಕನ್ನಡದಲ್ಲಿ ‘ಮುಗಿಲ ಮಲ್ಲಿಗೆ’ ಚಿತ್ರಗಳನ್ನು ನಿರ್ದೇಶಿಸಿದ್ದರು.
‘ಜೀವನ ಸಮುದ್ರ ತೀರದಂತೆ. ಅದು ಕೆಲವೊಮ್ಮೆ ಪ್ರಶಾಂತವಾಗಿ ಸಾಗುತ್ತಿದ್ದರೆ, ಮತ್ತೆ ಕೆಲವೊಮ್ಮೆ ಬೋರ್ಗೆರೆಯುವ ಅಲೆಗಳಂತೆ ಇರುತ್ತದೆ. ಯಾವಾಗ ಪ್ರಶಾಂತವಾಗಿ ಸಾಗುತ್ತದೆ, ಯಾವಾಗ ತನ್ನ ದಿಕ್ಕನ್ನು ಬದಲಿಸಿಕೊಂಡು ಬಿಡುತ್ತದೆ ಎಂಬುದನ್ನು ಯಾರಿಂದಲೂ ಊಹಿಸಲು ಸಾಧ್ಯವಾಗುವುದಿಲ್ಲ. ಅದೇ ಎಳೆಯನ್ನು ಹೊಂದಿರುವ ಚಿತ್ರವಿದು. ಏಪ್ರಿಲ್ 25 ರಿಂದ ಚಿತ್ರೀಕರಣ ಪ್ರಾರಂಭವಾಗಲಿದೆ. ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ, ಹೊಸಪೇಟೆ, ಬಾಗಲಕೋಟೆ ಹಾಗೂ ವಿಜಯಪುರ ಸುತ್ತಮುತ್ತ ಚಿತ್ರೀಕರಣ ನಡೆಸುವ ಯೋಜನೆಯಿದೆ’ ಎಂದರು ನಿರ್ದೇಶಕರು.
ಹೊಸ ನಟ ಉದಯ್ ನಾಯಕ. ಈ ಹಿಂದೆ ‘ಮಗಳೇ’, ‘ಅಸುರರು’ ಚಿತ್ರಗಳಲ್ಲಿ ನಟಿಸಿದ್ದ ಸುಪ್ರಿತಾ ರಾಜ್ ಈ ಚಿತ್ರದಲ್ಲಿ ನಾಯಕಿ. ಸ್ನೇಹಾಲಯಂ ಕ್ರಿಯೇಷನ್ಸ್ ಲಾಂಛನದಲ್ಲಿ ನವೀನ್ ಕುಮಾರ್ ಗೌಡ, ಗೋಪಾಲ್ ಸ್ವಾಮಿ, ವಸಂತ ನಾಯಕ್ ಬಂಡವಾಳವನ್ನು ಹೂಡುತ್ತಿದ್ದಾರೆ.
ಮಮತಾ, ಹೊಸಪೇಟೆ ರಾಘವೇಂದ್ರ, ಶೋಭರಾಜ್, ಪುಷ್ಪಾ ಗೌಡ ಮುಂತಾದವರು ಚಿತ್ರದಲ್ಲಿದ್ದಾರೆ. ಗಂಧರ್ವ ರಾಯ್ ರಾವುತ ಸಂಗೀತ, ನಾಗೇಂದ್ರ ಕುಮಾರ್ ಎಂ ಛಾಯಾಚಿತ್ರಗ್ರಹಣ, ವಿನಯ್ ಜಿ. ಆಲೂರು ಸಂಕಲನ ಈ ಚಿತ್ರಕ್ಕಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.