ಡೆಹ್ರಾಡೂನ್:ಹಿಂದೂ ಪರ ಸಂಘಟನೆಗಳ ಪ್ರತಿಭಟನೆ ಹಿನ್ನೆಲೆಯಲ್ಲಿ, ಉತ್ತರಾಖಂಡ್ನ ಏಳು ಜಿಲ್ಲೆಗಳಲ್ಲಿ ‘ಕೇದಾರನಾಥ’ ಚಿತ್ರ ಪ್ರದರ್ಶನಕ್ಕೆ ಜಿಲ್ಲಾ ಮ್ಯಾಜಿಸ್ಟ್ರೇಟ್ ನಿಷೇಧ ವಿಧಿಸಿದ್ದಾರೆ ಎಂದು ಶುಕ್ರವಾರ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಸುಶಾಂತ್ ಸಿಂಗ್ ರಜಪೂತ್ – ಸಾರಾ ಅಲಿಖಾನ್ ನಟಿಸಿರುವ ಈ ಚಿತ್ರ, 2013ರಲ್ಲಿ ಸಂಭವಿಸಿದ ಪ್ರವಾಹ ಪರಿಸ್ಥಿತಿಯನ್ನು ಕಥೆಯನ್ನಾಗಿ ಹೊಂದಿದೆ. ಹಿಂದೂ ಹುಡುಗಿಯೊಬ್ಬಳು ಮುಸ್ಲಿಂ ಯುವಕನನ್ನು ಪ್ರೀತಿಸುವ ಕಥೆ ಇದಾಗಿದ್ದು, ಉಭಯ ಕೋಮುಗಳ ನಡುವೆ ಗಲಾಟೆಯಾಗುವ ಸಂಭವ ಇರುವುದರಿಂದ ಡೆಹ್ರಾಡೂನ್, ಹರಿದ್ವಾರ, ನೈನಿತಾಲ್, ಉದ್ಧಂಸಿಂಗ್ ನಗರ, ಪೌರಿ, ತೆಹ್ರಿ ಮತ್ತು ಅಲ್ಮೊರಾ ಜಿಲ್ಲೆಗಳಲ್ಲಿ ನಿಷೇಧ ವಿಧಿಸಲಾಗಿದೆ ಎಂದು ಸೆನ್ಸಾರ್ ಮಂಡಳಿಯ ಹಿರಿಯ ಅಧಿಕಾರಿ ತಿಳಿಸಿದ್ದಾರೆ.
ಈ ಜಿಲ್ಲೆಗಳನ್ನು ಹೊರತುಪಡಿಸಿ, ದೇಶದಾದ್ಯಂತ ಚಿತ್ರ ತೆರೆ ಕಂಡಿದ್ದು, ಉತ್ತರಾಖಂಡ್ನ ಉಳಿದ 6 ಜಿಲ್ಲೆಗಳಲ್ಲಿಯೂ ‘ಕೇದಾರನಾಥ’ ಪ್ರದರ್ಶನಕ್ಕೆ ಯಾವುದೇ ಅಡ್ಡಿ ಉಂಟಾಗಿಲ್ಲ.
ಈ ಚಿತ್ರವನ್ನು ನಿಷೇಧಿಸಬೇಕು ಎಂದು ಒತ್ತಾಯಿಸಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಜಾಗೊಳಿಸಿದ್ದ ಉತ್ತರಾಖಂಡ್ ಹೈಕೋರ್ಟ್, ಈ ವಿಷಯವನ್ನು ರಾಜ್ಯಸರ್ಕಾರ ಮತ್ತು ಜಿಲ್ಲಾಡಳಿತ ವಿವೇಚನೆಗೆ ಬಿಡಲಾಗಿದೆ ಎಂದು ಹೇಳಿತ್ತು.
* ಬಹುಸಂಖ್ಯಾತರ ನಂಬಿಕೆಗಳಿಗೆ ಘಾಸಿ ಉಂಟು ಮಾಡುವಂತಹ ದೃಶ್ಯಗಳನ್ನು ಸಿನಿಮಾದಲ್ಲಿ ತೋರಿಸಿ ವಿವಾದ ಸೃಷ್ಟಿಸುವಂತಹ ಕೆಲಸವನ್ನು ಚಿತ್ರನಿರ್ದೇಶಕರು ಮಾಡಬಾರದು
-ಸತ್ಪಾಲ್ ಮಹಾರಾಜ್,ಉತ್ತರಾಖಂಡ ಪ್ರವಾಸೋದ್ಯಮ ಸಚಿವ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.