ADVERTISEMENT

ಕೆಜಿಎಫ್ ಸಿನಿಮಾ ಹಾಡಿಗೆ ಕಿನ್ನಾಳದ ರಾಜ ಸಾಹಿತ್ಯ

ತಾಯಿ ಪ್ರೀತಿ ಬಿಂಬಿಸುವ ಹಾಡಿಗೆ ಧ್ವನಿಯಾದ ಸ್ಥಳೀಯ ಪ್ರತಿಭೆ

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2018, 11:26 IST
Last Updated 18 ಡಿಸೆಂಬರ್ 2018, 11:26 IST
ಚಿತ್ರನಟ ಯಶ್‌ ಜೊತೆ ಕೊಪ್ಪಳ ತಾಲ್ಲೂಕಿನ ಕಿನ್ನಾಳ ಗ್ರಾಮದ ರಾಜ ಕಿನ್ನಾಳ
ಚಿತ್ರನಟ ಯಶ್‌ ಜೊತೆ ಕೊಪ್ಪಳ ತಾಲ್ಲೂಕಿನ ಕಿನ್ನಾಳ ಗ್ರಾಮದ ರಾಜ ಕಿನ್ನಾಳ   

ಕೊಪ್ಪಳ: ಚಲನಚಿತ್ರ ನಟ ಯಶ್ ಅಭಿನಯದ ಕೆಜಿಎಫ್ ಚಲನಚಿತ್ರದ ಹಾಡೊಂದಕ್ಕೆ ಸಾಹಿತ್ಯ ಬರೆದ ತಾಲ್ಲೂಕಿನ ಕಿನ್ನಾಳ ಗ್ರಾಮದ ರಾಜ ಕಿನ್ನಾಳ ಅವರ ಗೀತೆ ಎಲ್ಲೆಡೆ ವೈರಲ್ ಆಗಿದ್ದು, ಸ್ಥಳೀಯ ಪ್ರತಿಭೆಗೆ ಸಂದ ಗೌರವವಾಗಿದೆ.

ಕನ್ನಡದ ಕೆಜಿಎಫ್ ಚಿತ್ರದ ಟ್ರೈಲರ್ ಹಾಗೂ ಹಾಡುಗಳು ಬಿಡುಗಡೆಯಾಗಿ ಕ್ರೇಜ್ ಮತ್ತಷ್ಟು ಹೆಚ್ಚಿಸಿವೆ. 'ಗರ್ಭದಿ.. ನನ್ನಿರಿಸಿ…ಊರಲಿ ನಡೆಯುತಿರೆ… ತೇರಲಿ ಕುಳಿತಂತೆ, ಅಮ್ಮಾ..' ಎಂಬ ತಾಯಿ ಸೆಂಟಿಮೆಂಟ್ ಹಾಡು ಹಾಗೂ ಅದರ ಸಾಹಿತ್ಯ ಕನ್ನಡಿಗರ ಹೃದಯ ಗೆದ್ದಿದೆ. ಈ ಹಾಡು ಬರೆದ ರಾಜ ಅವರು ಸಿನಿಮಾ ಸಾಹಿತ್ಯ ರಚನೆಕಾರರಾಗಿ ಹೊರ ಹೊಮ್ಮಿದ್ದಾರೆ.

ಹಿಂದುಳಿದ ಜಿಲ್ಲೆಯ ಕಿನ್ನಾಳ ಗ್ರಾಮ ವಿವಿಧ ಕ್ಷೇತ್ರದಲ್ಲಿ ಹೆಸರು ಮಾಡಿದೆ. ರಾಜ ಅವರು ಪ್ರಾಥಮಿಕ ಶಿಕ್ಷಣವನ್ನು ಕಿನ್ನಾಳದಲ್ಲಿಯೇಓದಿದ್ದು,ನಗರದ ಗವಿಸಿದ್ಧೇಶ್ವರ ಕಾಲೇಜಿನಲ್ಲಿಪಿಯುಸಿವರೆಗೆ ಓದಿದ್ದಾರೆ. ಸಿನಿಮಾ ಗೀಳು ಹತ್ತಿಸಿಕೊಂಡ ಅವರು ಎಂಟು ವರ್ಷಗಳಿಂದ ಬೆಂಗಳೂರಿನ ಸ್ಯಾಂಡಲ್ ವುಡ್ ಅಂಗಳದಲ್ಲಿ ಅವಕಾಶಕ್ಕಾಗಿ ಅಲೆದಾಡಿ ಈಗ ನೆಲೆ ಕಂಡುಕೊಂಡಿದ್ದು, ಅವರಲ್ಲಿ ನಿರಾಳತೆ ಮೂಡಿಸಿದೆ.

ADVERTISEMENT

'ಕೆಜಿಎಫ್ ಎಂಬ ದೊಡ್ಡ ಚಿತ್ರದಲ್ಲಿ ನಾನೊಬ್ಬ ಸಾಹಿತಿ ಅಂತಾ ಹೇಳಿಕೊಳ್ಳುವುದಕ್ಕೆ ನನಗೆ ಹೆಮ್ಮೆ ಎನಿಸುತ್ತಿದೆ. ನಿರ್ದೇಶಕ ಪ್ರಶಾಂತ ನೀಲ್ ಹಾಗೂ ಸಂಗೀತ ನಿರ್ದೇಶಕ ರವಿ ಬಸರೂರ ಅವರು ನೀಡಿದ ಅವಕಾಶ ನನ್ನ ಜೀವನದ ದೊಡ್ಡ ಸಾಧನೆ ಎಂದು ಅವರು ’ಪ್ರಜಾವಾಣಿ‘ಗೆ ಪ್ರತಿಕ್ರಿಯೆ ನೀಡಿದರು.

ಗೀತೆ ರಚನೆ ಕುರಿತು ಸಿನಿಮಾ ನಿರ್ದೇಶಕ ಪ್ರಶಾಂತ್ ನೀಲ್ ಅವರು ಒಂದು ಹಾಡಿಗೆ ಸಾಹಿತ್ಯ ಬರೆಯಲು ಹೇಳಿದರಂತೆ. ತಾಯಿ ಮತ್ತು ಮಗನ ನಡುವಿನ ಭಾವನಾತ್ಮಕ ಎಳೆ ಅದು. 'ನಿಮ್ಮ ತಾಯಿಯನ್ನು ಮನದಲ್ಲಿ ಸ್ಮರಿಸಿ ಗೀತೆ ರಚನೆ ಮಾಡಿ' ಎಂದು ಹೇಳಿದ್ದರು. ಅದರಂತೆ ನನ್ನ ಹೃದಯದಿಂದ ಬರೆದ ಗೀತೆ ಇದಾಗಿದೆ' ಎಂದು ಭಾವುಕರಾಗಿ ಹೇಳಿದರು ರಾಜ ಕಿನ್ನಾಳ.

'ಇದೇ ತಿಂಗಳ 21ಕ್ಕೆ ಚಿತ್ರ ಬಿಡುಗಡೆಯಾಗಲಿದೆ. ನೀವು ಎಷ್ಟು ಕುತೂಹಲದಿಂದ ಕಾಯುತ್ತಿದ್ದೀರೋ, ಅಷ್ಟೇ ಕುತೂಹಲದಿಂದ ನಾನು ಕೂಡಾ ನನ್ನ ಹಾಡುನ್ನು ತೆರೆ ಮೇಲೆ ನೋಡಲು ಕಾತುರದಿಂದ ಕಾಯುತ್ತಿದ್ದೇನೆ. ನನ್ನತಂಹ ಹೊಸಬನಿಗೆ ನಿಮ್ಮೆಲ್ಲರ ಪ್ರೊತ್ಸಾಹ ಅಗತ್ಯ' ಎನ್ನುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.