ಮುಷ್ತಾಕ್ ಮೊಹಮ್ಮದ್ ಖಾನ್
ಚಿತ್ರಕೃಪೆ: ಎಕ್ಸ್
ಬಿಜ್ನೋರ್/ಮೀರತ್: ನಟ ಮುಷ್ತಾಕ್ ಮೊಹಮ್ಮದ್ ಖಾನ್ ಅವರನ್ನು ದೆಹಲಿ ವಿಮಾನನಿಲ್ದಾಣದಿಂದ ಅಪಹರಿಸಿ, ಒತ್ತೆಯಾಳಾಗಿ ಇರಿಸಿಕೊಂಡು ಹಣಕ್ಕಾಗಿ ಒತ್ತಾಯಿಸಿದ್ದ ನಾಲ್ವರು ಸದಸ್ಯರ ತಂಡವನ್ನು ಪೊಲೀಸರು ಬಂಧಿಸಿದ್ದಾರೆ.
ಮುಷ್ತಾಕ್ ಅವರನ್ನು ದುಷ್ಕರ್ಮಿಗಳು ಉತ್ತರ ಪ್ರದೇಶದ ಬಿಜ್ನೋರ್ ಜಿಲ್ಲೆಯಲ್ಲಿ ಒತ್ತೆಯಾಳಾಗಿ ಇರಿಸಿಕೊಂಡಿದ್ದರು. ಇದೇ ತಂಡ ಬಾಲಿವುಡ್ನ ಹಿರಿಯ ನಟ ಶಕ್ತಿ ಕಪೂರ್ ಅವರನ್ನು ಅಪಹರಿಸಲು ಸಂಚು ನಡೆಸಿತ್ತು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಸಾರ್ಥಕ್ ಚೌಧರಿ, ಸಬಿಯುದ್ದೀನ್, ಅಜೀಂ, ಶಶಾಂಕ್ ಬಂಧಿತರು. ಇವರಿಂದ ₹1.04 ಲಕ್ಷ ವಶಪಡಿಸಿಕೊಳ್ಳಲಾಗಿದೆ. ತಂಡ ಬೇರೆ ಯಾರಾದರೂ ನಟರನ್ನು ಅಪಹರಿಸಿ ಹಣ ವಸೂಲು ಮಾಡಿದೆಯೇ ಎಂದು ತನಿಖೆ ನಡೆಸಲಾಗುತ್ತಿದೆ ಎಂದು ತಿಳಿಸಿದರು.
ಬಿಜ್ನೋರ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಭಿಷೇಕ್ ಝಾ ಅವರು ಶನಿವಾರ ಈ ಕುರಿತ ಮಾಹಿತಿ ಹಂಚಿಕೊಂಡರು. ಮುಷ್ತಾಕ್ ಅಪಹರಣ ಕುರಿತು ಅವರ ಕಾರ್ಯಕ್ರಮ ಮೇಲುಸ್ತುವಾರಿ ವ್ಯವಸ್ಥಾಪಕ ಶಿವಂ ಯಾದವ್ ಅವರು ಡಿ.9ರಂದು ದೂರು ನೀಡಿದ್ದರು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಹ್ವಾನಿಸುವ ಸೋಗಿನಲ್ಲಿ ದೆಹಲಿಗೆ ಕರೆಸಿ ದುಷ್ಕರ್ಮಿಗಳು ಅಪಹರಿಸಿದ್ದರು. ಮೀರತ್–ದೆಹಲಿ ನಡುವೆ ಶಿಕಾಂಜಿ ಎಂಬಲ್ಲಿ ಆರೋಪಿ ಲವಿ ಎಂಬಾತನ ಮನೆಯಲ್ಲಿ ಒತ್ತೆಯಾಳಾಗಿ ಇರಿಸಿಕೊಂಡಿದ್ದರು ಎಂದು ತಿಳಿಸಿದರು.
ನವೆಂಬರ್ 21ರಂದು ಮುಷ್ತಾಕ್ ಖಾನ್ ಅವರ ಬ್ಯಾಂಕ್ ಖಾತೆಯಿಂದ ಒಟ್ಟು ₹ 2.2 ಲಕ್ಷ ಪಡೆದಿದ್ದಲ್ಲದೆ, ಮೀರತ್ ಮತ್ತು ಮುಜಾಫರ್ನಗರ್ನಲ್ಲಿ ಶಾಪಿಂಗ್ ಮಾಡಿದ್ದರು ಎಂದು ಅವರು ವಿವರಿಸಿದರು. ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.