ಹಿರಿಯ ನಟ ರಾಮಕೃಷ್ಣ ಅವರು ವಿಶೇಷ ಪಾತ್ರವೊಂದರಲ್ಲಿ ನಟಿಸಿರುವ ‘ಲಕ್ಷ್ಯ’ ಚಿತ್ರಕ್ಕೆ ಪ್ರಾದೇಶಿಕ ಚಲನಚಿತ್ರ ಪ್ರಮಾಣೀಕರಣ ಮಂಡಳಿಯು ‘ಯು’ ಪ್ರಮಾಣಪತ್ರ ನೀಡಿದೆ.
‘ಮಂಡಳಿಯ ಸದಸ್ಯರು ನಮ್ಮನ್ನು ಉದ್ದೇಶಿಸಿ ಪ್ರೋತ್ಸಾಹಕ ಮಾತುಗಳನ್ನು ಆಡಿದ್ದಾರೆ’ ಎಂದು ಸಿನಿಮಾ ತಂಡ ಹೇಳಿದೆ. ‘ಜನಸಾಮಾನ್ಯರಿಗೆ ಆಪ್ತವೆನಿಸುವ, ಅವರ ಅನುಭವಕ್ಕೆ ನಾಟುವ ಗಟ್ಟಿಯಾದ ಕಥಾವಸ್ತು ಈ ಚಿತ್ರದಲ್ಲಿದೆ’ ಎಂಬ ಮಾತನ್ನೂ ತಂಡ ಹೇಳಿದೆ.
ಕಿರುತೆರೆ ನಟ ಶ್ರೀಹರಿ, ಸಂತೋಷ್ ರಾಜ್ ಝಾವರೆ, ನಿತಿ ನದ್ವಿ, ಮಾಲತಿಶ್ರೀ ಸೇರಿದಂತೆ ಹಲವರು ತಾರಾಬಳಗದಲ್ಲಿ ಇದ್ದಾರೆ. ಮಹಾಂತೇಶ ತಾಂವಶಿ ಅವರು ಇದರ ನಿರ್ಮಾಪಕರು.
ಕಥೆ ಮತ್ತು ನಿರ್ದೇಶನದ ಕೆಲಸ ರವಿ ಸಾಸನೂರ್ ಅವರದ್ದು. ಜುವಿನ್ ಸಿಂಗ್ ಸಂಗೀತ, ಆನಂದು ಚಂದ್ರಸಬು ಛಾಯಾಗ್ರಹಣ ಚಿತ್ರಕ್ಕಿದೆ. ‘ಇಂದಿನ ಯುವ ಪೀಳಿಗೆಯ ಮನಸ್ಸಿಗೆ ನಾಟುವಂತಹ, ನೈಜ ಘಟನೆ ಆಧಾರಿತ ಕಮರ್ಷಿಯಲ್ ಚಿತ್ರ ಇದು’ ಎಂದು ಸಿನಿತಂಡ ಹೇಳಿದೆಯಾದರೂ, ಕಥೆಯ ಎಳೆಯನ್ನು ಗುಟ್ಟಾಗಿಯೇ ಇರಿಸಿದೆ. ಈ ಚಿತ್ರವು ಶೀಘ್ರವೇ ತೆರೆಗೆ ಬರುವ ನಿರೀಕ್ಷೆ ಇದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.