ADVERTISEMENT

‘ಮನೋರಥ’ ಬಿಡುಗಡೆಗೆ ಸಿದ್ಧ

​ಪ್ರಜಾವಾಣಿ ವಾರ್ತೆ
Published 30 ಜುಲೈ 2018, 7:33 IST
Last Updated 30 ಜುಲೈ 2018, 7:33 IST
‘ಮನೋರಥ’ ಚಿತ್ರದಲ್ಲಿ ಅಂಜಲಿ ಮತ್ತು ರಾಜ್‌ ಚರಣ್
‘ಮನೋರಥ’ ಚಿತ್ರದಲ್ಲಿ ಅಂಜಲಿ ಮತ್ತು ರಾಜ್‌ ಚರಣ್   

ಬದುಕಿನಲ್ಲಿ ಕೆಲವು ವಿಷಯಗಳು ಅತಿರೇಕದ ಹಂತಕ್ಕೆ ತಲುಪುತ್ತವೆ. ಮನಸ್ಸಿನ ಮೇಲೂ ಪರಿಣಾಮ ಬೀರುತ್ತವೆ. ಮಾನಸಿಕ ಸ್ಥಿಮಿತ ಕಳೆದುಕೊಳ್ಳುವ ವ್ಯಕ್ತಿಯ ವರ್ತನೆ ಬದಲಾಗುತ್ತಿರುತ್ತದೆ. ಇದನ್ನೇ ‘ಮನೋರಥ’ ಚಿತ್ರದಲ್ಲಿ ಹೇಳಲು ಮುಂದಾಗಿದ್ದಾರೆ ನಿರ್ದೇಶಕ ಎಂ. ಪ್ರಸನ್ನಕುಮಾರ್.

ಸಿನಿಮಾ ಬಿಡುಗಡೆಗೆ ಸಿದ್ಧವಾಗಿದ್ದು, ಈ ಕುರಿತು ಮಾಹಿತಿ ಹಂಚಿಕೊಳ್ಳಲು ಚಿತ್ರತಂಡ ಸುದ್ದಿಗೋಷ್ಠಿ ಕರೆದಿತ್ತು.

‘ಮಾನಸಿಕ ರೋಗದಿಂದ ಬಳಲುವ ವ್ಯಕ್ತಿಯೊಬ್ಬನ ಕಥೆ ಚಿತ್ರದಲ್ಲಿದೆ. ಅವನನ್ನು ಕಾಪಾಡಿಕೊಳ್ಳಲು ‍ಪ್ರತಿದಿನ ಹೆಣಗಾಟ ನಡೆಸುವ ತಾಯಿಯ ಕಥೆಯೂ ಇದೆ. ವಿಶೇಷವಾಗಿ ಯುವಜನರು ಸೇರಿದಂತೆ ಎಲ್ಲಾ ವರ್ಗದವರಿಗೂ ಚಿತ್ರ ಇಷ್ಟವಾಗಲಿದೆ’ ಎಂದರು ನಿರ್ದೇಶಕರು.

ADVERTISEMENT

ಸೈಕಲಾಜಿಕಲ್‌ ಥ್ರಿಲ್ಲರ್‌ ಅಂಶ ಒಳಗೊಂಡಿರುವ ಚಿತ್ರ ಇದು. ಕಥೆ, ಸಂಭಾಷಣೆಯ ಜವಾಬ್ದಾರಿ ಹೊತ್ತಿರುವ ಪ್ರಸನ್ನಕುಮಾರ್, ಚಿತ್ರಕ್ಕೆ ಬಂಡವಾಳ ಕೂಡ ಹೂಡಿದ್ದಾರೆ.

‘ಪುನರಪಿ’ ಚಿತ್ರದಲ್ಲಿ ನಟಿಸಿದ್ದ ರಾಜ್‌ ಚರಣ್‌ ಈ ಚಿತ್ರದ ನಾಯಕ. ‘ಕೆಲವು ಘಟನೆಗಳು ಮನುಷ್ಯನ ಸುಪ್ತ ಮನಸ್ಸಿನ ಮೇಲೆ ಪರಿಣಾಮ ಬೀರುತ್ತವೆ. ಆಗ ವ್ಯಕ್ತಿ ಹೇಗೆ ವರ್ತಿಸುತ್ತಾನೆ ಎನ್ನುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ’ ಎಂದು ಹೇಳಿದರು.

ನಾಯಕಿ ಅಂಜಲಿಗೆ ಇದು ಮೊದಲ ಚಿತ್ರ. ನಿರೂಪಕಿಯಾಗಿದ್ದ ಅವರಿಗೆ ಸಿನಿಮಾದಲ್ಲಿನ ನಟನೆ ಹೊಸದು. ‘ಎರಡು ಶೇಡ್‌ ಇರುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಇದು ಪ್ರಯೋಗಾತ್ಮಕ ಚಿತ್ರ. ನಿರ್ದೇಶಕರು ಹೊಸ ಕಥೆಯನ್ನು ಭಿನ್ನವಾಗಿ ಹೇಳಿದ್ದಾರೆ. ಮನುಷ್ಯನ ಸುಪ್ತ ಮನಸ್ಸಿನ ಮೇಲೆ ಘಾಸಿಯಾದಾಗ ಕಂಡುಬರುವ ಬದಲಾವಣೆಗಳ ಕುರಿತು ಹೇಳಲಾಗಿದೆ’ ಎಂದು ಹೇಳಿದರು.

ನಟಿ ದಮಯಂತಿ, ‘ಮಾನಸಿಕ ಖಿನ್ನತೆಗೆ ಒಳಗಾದ ಪುತ್ರನನ್ನು ತಾಯಿ ಹೇಗೆ ಸಂಭಾಳಿಸುತ್ತಾಳೆ ಎನ್ನುವುದೇ ನನ್ನ ಪಾತ್ರ’ ಎಂದು ಹೇಳಿದರು.

ಚಂದ್ರು ಓಬಯ್ಯ ಸಂಗೀತ ಸಂಯೋಜನೆ ಚಿತ್ರಕ್ಕಿದೆ. ಛಾಯಾಗ್ರಹಣ ಮುರಳಿ ಕ್ರಿಶ್‌ ಅವರದ್ದು. ರಾಘು ರಾಮನಕೊಪ್ಪ, ನಾಗೇಂದ್ರ, ವಿಠಲ ಭಟ್‌ ತಾರಾಗಣದಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.