ಮೀಸೆ ಬಿಡುವುದು ಕೆಲವರಿಗೆ ಹೆಮ್ಮೆಯ ವಿಷಯ. ಉದ್ದದ ಮೀಸೆ ಬಿಟ್ಟು ಆಗಾಗ ತಿರುವಿಕೊಂಡು ಖುಷಿಪಡುವವರೂ ಇದ್ದಾರೆ. ಗಾಂಧಿನಗರದಲ್ಲಿ ಹೊಸಬರ ತಂಡವೊಂದು ಮೀಸೆ ತಿರುವಲು ಸಜ್ಜಾಗಿದೆ. ಈ ತಂಡ ಸಿನಿಮಾಕ್ಕೆ ಇಟ್ಟಿರುವ ಹೆಸರು ‘ತಿರುಗಿಸೋ ಮೀಸೆ’. ಕೃಷ್ಣ ವಿಜಯ್ ನಿರ್ದೇಶನದ ಈ ಚಿತ್ರ ಬಿಡುಗಡೆಗೆ ಸಿದ್ಧವಾಗಿದ್ದು, ಇದರ ಪೂರ್ವಭಾವಿಯಾಗಿ ಚಿತ್ರತಂಡ ಆಡಿಯೊ ಬಿಡುಗಡೆಗೊಳಿಸಿತು.
ಪಬ್ವೊಂದರಲ್ಲಿ ನಾಯಕನದು ಡಿಜೆ ಪ್ಲೇಯರ್ ಕೆಲಸ. ಚಿಕ್ಕವಯಸ್ಸಿನಲ್ಲಿಯೇ ಕೆಟ್ಟ ಚಾಳಿಗೆ ಸಿಲುಕಿ ಆತನ ಬದುಕು ದಾರಿತಪ್ಪಿರುತ್ತದೆ. ಬಳಿಕ ಸಾಹಸಭರಿತ ಪ್ರಯಾಣ ಕೈಗೊಂಡು ಹೇಗೆ ತನ್ನ ಬದುಕನ್ನು ರೂಪಿಸಿಕೊಳ್ಳುತ್ತಾನೆ ಎನ್ನುವುದೇ ಚಿತ್ರದ ಕಥಾಹಂದರ. ತಾಯಿಯ ಸೆಂಟಿಮೆಂಟ್, ಆ್ಯಕ್ಷನ್, ಲವ್ ಕೂಡ ಚಿತ್ರದಲ್ಲಿ ಇದೆಯಂತೆ. ತೆಲಂಗಾಣದ ಶ್ರೀವಿಷ್ಣು ಈ ಚಿತ್ರದ ನಾಯಕ. ಅವರಿಗೆ ಬಾಂಬೆ ಮೂಲದ ನಿಕ್ಕಿ ತಂಬೋಲಿ ಜೋಡಿಯಾಗಿದ್ದಾರೆ. ಬೆಂಗಳೂರು, ಹಿಂದೂಪುರ, ಅನಂತಪುರ ಹಾಗೂ ಹೈದರಾಬಾದ್ನಲ್ಲಿ ಶೂಟಿಂಗ್ ನಡೆಸಲಾಗಿದೆ.
ಚಿತ್ರದ ನಾಲ್ಕು ಹಾಡುಗಳಿಗೆ ಸುರೇಶ್ ಬಾಬ್ಲಿ ಸಂಗೀತ ಸಂಯೋಜಿಸಿದ್ದಾರೆ. ಸಿದ್ದು ಅವರ ಛಾಯಾಗ್ರಹಣವಿದೆ. ವಿ. ಮನೋಹರ್, ರಾಘವೇಂದ್ರ ಕಾಮತ್, ಆರ್. ಚಂದ್ರಶೇಖರ್ ಹಾಡುಗಳನ್ನು ರಚಿಸಿದ್ದಾರೆ. ಶ್ರೀನಿವಾಸ ಮೂವೀಸ್ ಹಾಗೂ ರಿಜ್ವಾನ್ ಎಂಟರ್ಟೈನ್ಮೆಂಟ್ ಲಾಂಛನದಡಿ ಶ್ರೀನಿವಾಸ್ ಜಿ. ಹಾಗೂ ರಿಜ್ವಾನ್ ಬಂಡವಾಳ ಹೂಡಿದ್ದಾರೆ. ರವಿಪ್ರಕಾಶ್, ರವಿವರ್ಮ, ದಿ.ರಘುವೀರನ್ ಅವರ ಪತ್ನಿ ರೋಹಿಣಿ, ಶ್ರೀಕಾಂತ್ ಅಯ್ಯಂಗಾರ್ ತಾರಾಗಣದಲ್ಲಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.