ADVERTISEMENT

ಚಿತ್ರಮಂದಿರ ಶೇ 100 ರಷ್ಟು ಭರ್ತಿ: ಚರ್ಚಿಸಿ ತೀರ್ಮಾನ ಎಂದ ಸಚಿವ ಸುಧಾಕರ್

​ಪ್ರಜಾವಾಣಿ ವಾರ್ತೆ
Published 6 ಏಪ್ರಿಲ್ 2021, 20:44 IST
Last Updated 6 ಏಪ್ರಿಲ್ 2021, 20:44 IST
ಡಾ.ಸುಧಾಕರ್
ಡಾ.ಸುಧಾಕರ್   

ಬೆಂಗಳೂರು: ‘ಚಿತ್ರಮಂದಿರಗಳಲ್ಲಿ ಏ. 7ರ ನಂತರವೂ ಶೇ 100ರಷ್ಟು ಪ್ರೇಕ್ಷಕರಿಗೆ (ಆಸನಗಳ ಭರ್ತಿ) ಅವಕಾಶ ನೀಡಬೇಕೆಂಬ ಚಿತ್ರ ನಿರ್ಮಾಪಕರ ಸಂಘದ ಬೇಡಿಕೆ ಬಗ್ಗೆ ಮುಖ್ಯಮಂತ್ರಿ ಜೊತೆ ಚರ್ಚಿಸಿ ತೀರ್ಮಾನಿಸಲಾಗುವುದು’ ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್‌ ಹೇಳಿದರು.

ಸಚಿವರನ್ನು ಮಂಗಳವಾರ ಭೇಟಿ ಮಾಡಿದ ಚಿತ್ರ ನಿರ್ಮಾಪಕ ಸಂಘದ ಸದಸ್ಯರು, ‘ಏ. 7ರವರೆಗೆ ಮಾತ್ರ ಶೇ 100ರಷ್ಟು ಪ್ರೇಕ್ಷಕರಿಗೆ ಅವಕಾಶ ಕಲ್ಪಿಸಲಾಗಿದೆ. ಈಗಾಗಲೇ ಚಿತ್ರ ನಿರ್ಮಾಪಕರು ತೀವ್ರ ಸಂಕಷ್ಟದಲ್ಲಿದ್ದಾರೆ. ಹೀಗಾಗಿ, ಆ ನಂತರವೂ ಪೂರ್ಣ ಪ್ರಮಾಣದಲ್ಲಿ ಆಸನಗಳ ಭರ್ತಿಗೆ ಅವಕಾಶ ನೀಡಬೇಕು’ ಎಂದು ಒತ್ತಾಯಿಸಿದರು.

ಈ ವೇಳೆ ಮಾತನಾಡಿದ ಸುಧಾಕರ್‌, ‘ಚಿತ್ರಮಂದಿರಗಳಲ್ಲಿ ಮುಂಗಡ ಟಿಕೆಟ್‌ ಬುಕ್ಕಿಂಗ್ ಪಡೆಯಲಾಗಿರುತ್ತದೆ‌. ಬುಕ್ಕಿಂಗ್ ಹಣ ವಾಪಸು ಕೊಡಲೂ‌ ಆಗುವುದಿಲ್ಲ. ಹೀಗಾಗಿ, ಏ. 7ರವರೆಗೆ ಅವಕಾಶ ಕೊಡಿ ಎಂದು ಈ ಹಿಂದೆ ಚಿತ್ರ ನಿರ್ಮಾಪಕರು ಒತ್ತಾಯಿಸಿದ್ದರು. ಆ ನಂತರವೂ ಶೇ 100ರಷ್ಟು ಪ್ರೇಕ್ಷಕರಿಗೆ ಅವಕಾಶ ಮಾಡಿಕೊಡಬೇಕೆಂಬ ಬೇಡಿಕೆ ಬಗ್ಗೆ ಮುಖ್ಯಮಂತ್ರಿ ಜೊತೆ ಮಾತನಾಡಿ ತಿಳಿಸುತ್ತೇನೆ. ತಾಂತ್ರಿಕ‌ ಸಲಹಾ ಸಮಿತಿಯ ಸಲಹೆ ಪಡೆಯುತ್ತೇವೆ’ ಎಂದರು.

ADVERTISEMENT

ಚಿತ್ರ ನಿರ್ಮಾಪಕರ ಸಂಘದ ಕಾರ್ಯದರ್ಶಿ ಕೆ. ಮಂಜು ಮಾತನಾಡಿ, ‘ಸಿನಿಮಾ ಬಿಡುಗಡೆಯ ಮೊದಲ ದಿನ‘ಚಿತ್ರಮಂದಿರಗಳಲ್ಲಿ ಪ್ರೇಕ್ಷಕರು ಭರ್ತಿ ಆಗಬಹುದು. ನಂತರ ಶೇ 40ರಿಂದ 50ರಷ್ಟು ಮಾತ್ರ ಇರುತ್ತಾರೆ. ಹೀಗಾಗಿ, ಶೇ 50 ಸೀಟುಗಳಿಗೆ ನಿರ್ಬಂಧ ಮಾಡಬೇಡಿ. ನೀವು ಖುದ್ದಾಗಿ ಚಿತ್ರಮಂದಿರಗಳಿಗೆ ಬಂದು ನೋಡಿ’ ಎಂದು ಸಚಿವರಲ್ಲಿ ಮನವಿ ಮಾಡಿದರು.

ನಿರ್ಮಾಪಕರ ಸಂಘದ ಅಧ್ಯಕ್ಷ ಪ್ರವೀಣ್, ಪದಾಧಿಕಾರಿಗಳಾದ ರಮೇಶ್ ಯಾದವ್, ರಾಮಮೂರ್ತಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.