ಕುಣಿಗಲ್: ತಾಲ್ಲೂಕಿನ ತೆಪ್ಪಸಂದ್ರ ಯುವಕರು ನಿರ್ಮಿಸಿದ ನಮ್ಮೂರು ಕುಣಿಗಲ್ ಚಲನಚಿತ್ರ ಪಟ್ಟಣದ ಆಕಾಶ್ ಚಿತ್ರಮಂದಿರದಲ್ಲಿ ಶುಕ್ರವಾರ ಬಿಡುಗಡೆಯಾಯಿತು.
ಚಿತ್ರದ ನಿರ್ದೇಶಕ ಗಗನ್ ರೇವಣ್ಣ, ನಾಯಕ ನಟ ಪ್ರಸನ್ನ ಮತ್ತು ತಂಡದವರು ಚಿತ್ರಮಂದಿರದ ಮುಂಭಾಗ ನೆರೆದಿದ್ದ ಪ್ರೇಕ್ಷಕರನ್ನು ಸ್ವಾಗತಿಸಿದರು. ಮೊದಲ ಪ್ರದರ್ಶನ ಬೆಳಗಿನ ಆಟ ಪ್ರಾರಂಭವಾಗುವ ಸಮಯಕ್ಕೆ ಚಿತ್ರಮಂದಿರ ತುಂಬಿದ್ದು ತಂಡದ ಸಂತೋಷಕ್ಕೆ ಕಾರಣವಾಯಿತಿ.
ಹಿರಿಯ ರಂಗಕಲಾವಿದ ಹುಲಿವಾನ ಗಂಗಾಧರಯ್ಯ, ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ದಿನೇಶ್ ಕುಮಾರ್ ಬೆಳ್ಳಿ ಪರದೆಗೆ ಪೂಜೆ ಸಲ್ಲಿಸಿ ಚಿತ್ರ ತಂಡಕ್ಕೆ ಶುಭಹಾರೈಸಿದರು.
ಮೊದಲ ಪ್ರದರ್ಶನದ ನಂತರ ಅಭಿಮಾನಿಗಳು ನಾಯಕ ನಟ ಪ್ರಸನ್ನ ಅವರನ್ನು ಸನ್ಮಾನಿಸಿದರು.
ಚಿತ್ರವನ್ನು ವೀಕ್ಷಿಸಿ ಅಭಿಪ್ರಾಯ ವ್ಯಕ್ತಪಡಿಸಿದ ಹುಲಿವಾನ ಗಂಗಾಧರಯ್ಯ, ‘ಗ್ರಾಮೀಣ ಪ್ರದೇಶದ ಸೊಗಡನ್ನು, ಸಮಸ್ಯೆಗಳನ್ನು ಸತ್ಯಕ್ಕೆ ಹತ್ತಿರವಾಗಿ ಬಿಂಬಿಸಲಾಗಿದೆ. ನಿರ್ದೇಶಕ ಗಗನ್ ರೇವಣ್ಣ ನೈಪುಣ್ಯತೆ ಪ್ರತಿ ದೃಶ್ಯದಲ್ಲೂ ಎದ್ದು ಕಾಣುತ್ತಿದೆ. ಗ್ರಾಮೀಣ ಪ್ರದೇಶದ ಹೊಸ ಕಲಾವಿದರ ಹೊಸ ಪ್ರಯತ್ನಕ್ಕೆ ಬೆಂಬಲ ಸಿಗಬೇಕಿದೆ. ಚಿತ್ರದ ಹೆಸರು ನಮ್ಮೂರು ಕುಣಿಗಲ್ ಎಂದಾದರೂ ಚಿತ್ರದಲ್ಲಿ ದೇಶದ ರೈತರ ಮತ್ತು ಗ್ರಾಮೀಣ ಸಮಸ್ಯೆಗಳನ್ನು ಸಹಜತೆಗೆ ಹೊಂದಿಕೊಂಡಂತೆ ಚಿತ್ರಸಲಾಗಿದೆ’ ಎಂದು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.