ADVERTISEMENT

ಬೈ ಬೈ 2018...

ಮಾನಸ ಬಿ.ಆರ್‌
Published 31 ಡಿಸೆಂಬರ್ 2018, 8:57 IST
Last Updated 31 ಡಿಸೆಂಬರ್ 2018, 8:57 IST
ಚಿತ್ರ: ರಂಜು ಪಿ.
ಚಿತ್ರ: ರಂಜು ಪಿ.   

ದಿನದ ಬಹುತೇಕ ಸಮಯವನ್ನು ಶೂಟಿಂಗ್‌ನಲ್ಲಿಯೇ ಕಳೆಯುವ ನಟ, ನಟಿಯರು, ಕಿರುತೆರೆ ಕಲಾವಿದರು ಹಾಗೂ ಬಿಡುವಿಲ್ಲದೇ ಕೆಲಸದಲ್ಲಿ ತೊಡಗಿರುವ ರಂಗಭೂಮಿ ಕಲಾವಿದರು, ಕ್ರೀಡಾಪಟುಗಳು 2019ರ ಹೊಸ ವರ್ಷವನ್ನು ಹೇಗೆಲ್ಲಾ ಸ್ವಾಗತಿಸಲಿದ್ದಾರೆ ಹಾಗೂ 2018ರಲ್ಲಿ ಏನೆಲ್ಲಾ ಮಿಸ್‌ ಮಾಡಿಕೊಂಡರು ಎಂಬುದನ್ನು ತಮ್ಮ ಮಾತುಗಳಲ್ಲೇ ‘ಮೆಟ್ರೊ’ ದೊಂದಿಗೆ ಹಂಚಿಕೊಂಡಿದ್ದಾರೆ.

*


ಚಿರು ಜೊತೆ ಸಮಯ ಕಳೆಯೋದೆ ಹಬ್ಬ ಇದ್ದಂತೆ. ಶೂಟಿಂಗ್‌ ಮುಗಿಸಿ ಹೊಸವರ್ಷಕ್ಕೆ ಸರಿಯಾಗಿ ಮನೆಗೆ ಬರುತ್ತಿದ್ದಾರೆ. ಅವರೊಂದಿಗೆ ಸಮಯ ಕಳೆಯುತ್ತಿದ್ದೇನೆ. ಮನೆಯಿಂದ ಹೊರಗೆ ಹೋಗುವ ಯೋಜನೆ ಇಲ್ಲ.

ADVERTISEMENT

2018ರಲ್ಲಿ ನಾನು ಮಿಸ್‌ ಮಾಡಿಕೊಂಡಿದ್ದು ಅಂಬರೀಷ್‌ ಅಂಕಲ್‌ ಅವರನ್ನು. ಅವರ ಸಾವನ್ನು ನನಗೆ ಅರಗಿಸಿಕೊಳ್ಳೋಕೆ ಇನ್ನೂ ಆಗಿಲ್ಲ. ಅವರ ಹುಟ್ಟುಹಬ್ಬ ಆಚರಣೆಗೆ ಹೋದಾಗ, ನನ್ನ ಮತ್ತು ಚಿರು ಅವರನ್ನು ಕೂರಿಸಿಕೊಂಡು ಬುದ್ದಿ ಹೇಳಿದ್ದರು. ‘ಸಂಸಾರ ಅಂದರೆ ಸುಮ್ನೆ ಮದುವೆ ಆಗೋದು ಅಲ್ಲ ಕಣೋ, ಅದರಿಂದ ಆಚೆಯಾದ ಬದುಕು ದೊಡ್ಡದಿದೆ. ಚೆನ್ನಾಗಿರಿ’ ಎಂದು ಪ್ರೀತಿಯಿಂದ ಹೇಳಿದ್ದರು. ಇದೆಲ್ಲಾಮರೆಯೋದು ಕಷ್ಟ.
–ಮೇಘನಾ ರಾಜ್‌, ನಟಿ

*


ಈ ವರ್ಷ ನಾನು ಸ್ನೇಹಿತರ ಜೊತೆ ಪ್ರವಾಸ ಹೋಗುತ್ತಿದ್ದೇನೆ. ಅಲ್ಲಿ ಹೊಸವರ್ಷಾಚರಣೆಯಲ್ಲಿ ಭಾಗಿ ಆಗುತ್ತಿದ್ದೇನೆ. ಕಳೆದ ವರ್ಷ ಬಿಗ್‌ಬಾಸ್‌ ಮನೆಯಲ್ಲಿ ಆಚರಿಸಿದ್ದೆ. ಅದು ಮರೆಯಲಾಗದ ಕ್ಷಣ. ನನಗೆ 2018 ಅತ್ಯಂತ ಅದೃಷ್ಟದ ವರ್ಷ. ನಾನು ಕಳೆದುಕೊಂಡಿದ್ದು ಏನೂ ಇಲ್ಲ. ಪಡೆದುಕೊಂಡದ್ದೇ ಹೆಚ್ಚು.
–ಅನುಪಮಾ, ಕಿರುತೆರೆ ನಟಿ

*
ಹೊಸವರ್ಷದ ದಿನ ತಪ್ಪದೇ ದೇವಸ್ಥಾನಕ್ಕೆ ಹೋಗುವ ರೂಢಿ ಇದೆ. ಸ್ನೇಹಿತರ ಜೊತೆ ಸುತ್ತೋಕೂ ಹೋಗುತ್ತೇನೆ. ಅದರ ಜೊತೆ ವರ್ಕೌಟ್‌ ಮಾಡಲೇಬೇಕು.2018 ಚೆನ್ನಾಗಿತ್ತು. ಕಾಮನ್‌ವೆಲ್ತ್‌ಗೆ ಆಯ್ಕೆಯಾಗಿದ್ದೆ. ಸೀನಿಯರ್‌ ನ್ಯಾಷನಲ್‌ ಕ್ಯಾಂಪ್‌ನಲ್ಲಿ ಅವಕಾಶ ಸಿಕ್ಕಿತ್ತು.
–ಬಾಂಧವ್ಯ, ಬ್ಯಾಸ್ಕೆಟ್‌ಬಾಲ್‌ ಆಟಗಾರ್ತಿ

*


ಕೆಲಸದಲ್ಲೇ ಹೊಸವರ್ಷವನ್ನು ಕಾಣಲಿದ್ದೇನೆ. ಸಾಕಷ್ಟು ಕೆಲಸಗಳು ಬಾಕಿ ಇವೆ. ‘ರಕ್ತ ಚಂದನ’ ವೆಬ್‌ ಸೀರಿಸ್‌ ಕೆಲಸದಲ್ಲಿ ತೊಡಗಿಕೊಂಡಿದ್ದೇನೆ. ಸಿನಿಮಾ ಕೆಲಸ ಕೂಡ ಆರಂಭವಾಗಿದೆ.2018ರಲ್ಲಿ ಯಾವುದೇ ಸಿನಿಮಾ ಮಾಡೋಕೆ ಆಗಿಲ್ಲ. ನಾಟಕ ಹಾಗೂ ವೆಬ್‌ಸೀರಿಸ್‌ನಲ್ಲಿ ಬ್ಯುಸಿಯಾಗಿದ್ದೆ.
–ಗಿರಿರಾಜ್‌, ಸಿನಿಮಾ ನಿರ್ದೇಶಕ

*
ನಾನು ಹೊಸವರ್ಷದ ದಿನ ಕೂಡ ಜಿಮ್‌ನಲ್ಲಿ ಬೆವರು ಹರಿಸಲಿದ್ದೇನೆ. ಹೊಸವರ್ಷಕ್ಕೆ ನನ್ನದೇ ಆದ ಕೆಲವು ಗುರಿಗಳಿವೆ. ನನ್ನ ಲುಕ್‌ ಬದಲಿಸಿಕೊಳ್ಳುವ ಚಾಲೆಂಜ್‌ ನನ್ನ ಮುಂದಿದೆ. ಆದಷ್ಟು ಅದರ ಕಡೆ ಗಮನ ಕೊಡಲಿದ್ದೇನೆ.2018 ನನಗೆ ಅತ್ಯುತ್ತಮ ವರ್ಷ. ನಾಲ್ಕು ಸಿನಿಮಾ ಬಿಡುಗಡೆಯಾಗಿವೆ. ಒಳ್ಳೆ ಅವಕಾಶಗಳೂ ಸಿಕ್ಕವು.
–ಶಿಲ್ಪಾ ಮಂಜುನಾಥ್, ನಟಿ

*
ಹೊಸ ವರ್ಷದ ದಿನ ಮಾಗಡಿ ರಸ್ತೆಯಲ್ಲಿರುವ ‘ಅಶ್ವಿನಿ ಅಂಗಡಿ’ ಆಶ್ರಮಕ್ಕೆ ಭೇಟಿ ನೀಡಲಿದ್ದೇನೆ. ಅಲ್ಲಿಯ ಮಕ್ಕಳೊಂದಿಗೆ ಹೊಸ ವರ್ಷ ಆಚರಿಸುತ್ತೇನೆ. ಹೋದ ವರ್ಷ ಗಿಡ ನೆಟ್ಟಿದ್ದು ಇನ್ನೂ ನೆನಪಿದೆ.2018ರಲ್ಲಿ ದೊಡ್ಡ ಬಜೆಟ್‌ನ ಸಿನಿಮಾವೊಂದರಲ್ಲಿ ಅವಕಾಶ ಸಿಗುವುದರಲ್ಲಿ ಇತ್ತು. ಮಿಸ್‌ ಆಯಿತು. ಅಂಬರೀಷ್‌ ಅವರನ್ನು ಕಳೆದುಕೊಂಡಿದ್ದು ಮರೆಯಲು ಸಾಧ್ಯವಿಲ್ಲ.
–ನಟರಾಜ್‌, ನಟ

*
ಪ್ರತಿ ವರ್ಷಸ್ನೇಹಿತರೊಟ್ಟಿಗೆ ಹೋಗಿ ಹೊಸವರ್ಷಾಚರಣೆ ಮಾಡುತ್ತಿದ್ದೆ. ಆದರೆ ಈಗ ಹೋಗಲು ಆಗುತ್ತಿಲ್ಲ. ಮನೆಯ ಬಾಲ್ಕನಿಯಲ್ಲೇ ಎಲ್ಲರೂ ಸೇರುತ್ತಿದ್ದೇವೆ. ಪಾರ್ಟಿ ಮಾಡಿ ಡಾನ್ಸ್‌ ಮಾಡಲು ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ.2018ರಲ್ಲಿ ನನ್ನದು ನಾಲ್ಕು ಸಿನಿಮಾ ಬರಬೇಕಿತ್ತು. ಎಲ್ಲವೂ ತಡ ಆಯಿತು. 2019ರಲ್ಲಿ ಒಟ್ಟಿಗೆ ಸಾಕಷ್ಟು ಸಿನಿಮಾ ಬಿಡುಗಡೆ ಆಗುತ್ತಿರುವುದೇ ಖುಷಿ.
–ಧರ್ಮಣ್ಣ, ನಟ

*
ಸ್ನೇಹಿತರ ಜೊತೆ ಹೊರಗೆ ಹೋಗಿ, ಊಟ ಮಾಡಿ ಹೊಸವರ್ಷ ಆಚರಿಸುತ್ತೇನೆ. ಶೂಟಿಂಗ್‌ ಬ್ಯುಸಿಯಲ್ಲಿ ಮನೆಯವರಿಗೆ ಸಮಯ ಕೊಡೋಕೆ ಆಗಿಲ್ಲ. ಈ ಸಮಯದಲ್ಲಿ ಮನೆಯಲ್ಲಿ ಹೆಚ್ಚು ಇರುತ್ತೇನೆ. 2018ರಲ್ಲಿ ಯಾವುದೇ ಸಿನಿಮಾ ಬಿಡುಗಡೆಯಾಗಲಿಲ್ಲ. ಈಗ ‘ಕವಲು ದಾರಿ’ ಬಿಡುಗಡೆಗೆ ಸಜ್ಜಾಗಿದೆ.
–ರಿಷಿ, ನಟ

*
ಕಳೆದ ವರ್ಷ ಸಿನಿಮಾ–ರಂಗಭೂಮಿಯಲ್ಲಿ ಬ್ಯುಸಿಯಾಗಿದ್ದೆ. ಹಾಗಾಗಿ, ಹೆಂಡ್ತಿ, ಮಕ್ಕಳ ಜತೆ ಹೆಚ್ಚು ಸಮಯ ಕಳೆಯಲು ಆಗಿರಲಿಲ್ಲ. ಹೊಸ ವರ್ಷಾಚರಣೆಯನ್ನು ಕುಟುಂಬದೊಂದಿಗೆ ಆಚರಿಸುವೆ. 2018 ನನ್ನ ಪಾಲಿಗೆ ಒಳಿತನ್ನೇ ಮಾಡಿದೆ. ‘ಕೆಜಿಎಫ್‌’ನಲ್ಲಿ ನನ್ನದು ಗಣಿ ಕೂಲಿಕಾರ್ಮಿಕನ ಪಾತ್ರ. 15 ನಿಮಿಷಗಳಷ್ಟೇ ಪರದೆ ಮೇಲೆ ಕಾಣಿಸಿಕೊಳ್ಳುವ ಪಾತ್ರವದು.ಅಲ್ಪಾವಧಿಯಲ್ಲೇ ಆ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿರುವ ಕುರಿತು ಅನೇಕರಿಂದ ಮೆಚ್ಚುಗೆ ವ್ಯಕ್ತವಾಯಿತು. 2019ರಲ್ಲಿ ಜನಪದ ಸಾಂಸ್ಕೃತಿಕ ನಾಯಕರ ಕುರಿತು ಒಂದು ನಾಟಕವನ್ನು ನಿರ್ದೇಶಿಸಬೇಕೆಂಬ ಆಸೆ ಇದೆ. ಹೇಮಂತ್ ರಾವ್ ನಿರ್ದೇಶನದ ‘ಕವಲು ದಾರಿ’, ವಿನೋದ್ ದಯಾಳನ್ ನಿರ್ದೇಶನದ ‘ಜೋರ್ಡಾನ್’ ಸಿನಿಮಾಗಳು ಬಿಡುಗಡೆಯಾಗಲಿವೆ.
–ಸಂಪತ್ ಕುಮಾರ್, ನಟ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.