ADVERTISEMENT

Sandalwood: ‘ಚೌಕಿದಾರ್‌’ ಸೇರಿದಂತೆ ಈ ವಾರ ಒಂಬತ್ತು ಸಿನಿಮಾಗಳು ತೆರೆಗೆ

​ಪ್ರಜಾವಾಣಿ ವಾರ್ತೆ
Published 29 ಜನವರಿ 2026, 23:31 IST
Last Updated 29 ಜನವರಿ 2026, 23:31 IST
ಮಹಾಲಕ್ಷ್ಮಿ
ಮಹಾಲಕ್ಷ್ಮಿ   
ಡಿಸೆಂಬರ್‌ ಮೊದಲ ವಾರದಿಂದ ಕನ್ನಡ ಸಿನಿಮಾ ಬಿಡುಗಡೆ ಗಣನೀಯವಾಗಿ ಕುಸಿದಿತ್ತು. ದೊಡ್ಡ ಸಿನಿಮಾಗಳ ಅಬ್ಬರದಿಂದ ಕೆಲ ವಾರ ಸಿನಿಮಾಗಳೇ ಇರಲಿಲ್ಲ. ಈಗ ಚಿತ್ರರಂಗ ಮತ್ತೆ ಹಳೆಯ ಲಯಕ್ಕೆ ಮರಳಿದೆ. ‘ಚೌಕಿದಾರ್‌’ ಸೇರಿದಂತೆ ಒಂಬತ್ತು ಸಿನಿಮಾಗಳು ಈ ವಾರ ತೆರೆ ಕಾಣುತ್ತಿವೆ. 

ರಕ್ತ ಕಾಶ್ಮೀರ

ಎಸ್.ವಿ.ರಾಜೇಂದ್ರಸಿಂಗ್ ಬಾಬು ನಿರ್ದೇಶನದ ಚಿತ್ರವಿದು. ಉಪೇಂದ್ರ ಹಾಗೂ ರಮ್ಯಾ ಮುಖ್ಯಪಾತ್ರದಲ್ಲಿ ನಟಿಸಿದ್ದಾರೆ. 

ಚಿತ್ರದ ಹಾಡೊಂದರಲ್ಲಿ ವಿಷ್ಣುವರ್ಧನ್, ಅಂಬರೀಶ್, ಶ್ರೀನಾಥ್, ಶಿವರಾಜ್‌ಕುಮಾರ್, ಪುನೀತ್ ರಾಜ್‌ಕುಮಾರ್ ಸೇರಿದಂತೆ ಕನ್ನಡದ ದಿಗ್ಗಜ ನಾಯಕರು ಬರುತ್ತಾರೆ. ಈ ಹಾಡನ್ನು ಹಲವು ವರ್ಷಗಳ ಹಿಂದೆ ಚಿತ್ರೀಕರಿಸಲಾಗಿತ್ತು. ಗುರುಕಿರಣ್ ಸಂಗೀತ ನಿರ್ದೇಶನವಿದೆ. ಮುಖೇಶ್ ರಿಶಿ, ದೊಡ್ಡಣ್ಣ, ಓಂಪ್ರಕಾಶ್ ರಾವ್, ಅನಿಲ, ಕುರಿ ಪ್ರತಾಪ್ ಮುಂತಾದವರಿದ್ದಾರೆ.

ಅಮೃತ ಅಂಜನ್:

ಈ ಹಿಂದೆ ‘ಅಮೃತಾಂಜನ್’ ಎಂಬ ಕಿರುಚಿತ್ರ ಮಾಡಿ ಗಮನ ಸೆಳೆದಿದ್ದ ತಂಡದಿಂದ ಸಿದ್ಧಗೊಂಡ ಚಿತ್ರವಿದು. ಜ್ಯೋತಿ ರಾವ್ ಮೋಹಿತ್‌ ಆ್ಯಕ್ಷನ್‌–ಕಟ್‌ ಹೇಳಿದ್ದಾರೆ. 

ADVERTISEMENT

‘ಈ ಸಿನಿಮಾ ಆರಂಭಿಸುವುದಕ್ಕೆ ನನ್ನ ‘ಅಮೃತಾಂಜನ್’ ಕಿರುಚಿತ್ರವೇ ಕಾರಣ. ಈ ಚಿತ್ರದ ಶೀರ್ಷಿಕೆ ವಿಚಾರವಾಗಿ ಬಹಳಷ್ಟು ಸಮಸ್ಯೆಗಳನ್ನು ಎದುರಿಸಿದ್ದೇವೆ. ಹಾಗಾಗಿ ಅಮೃತ ಅಂಜನ್ ಎಂಬ ಹೆಸರಿನೊಂದಿಗೆ ಚಿತ್ರ ನಿರ್ಮಾಣ ಮಾಡಿದ್ದು, ಇದೊಂದು ಸಂಪೂರ್ಣ ಹಾಸ್ಯಮಯ ಚಿತ್ರ’ ಎಂದಿದ್ದಾರೆ ನಿರ್ದೇಶಕ.

ಸುಧಾಕರ್‌ ಗೌಡ, ಗೌರವ ಶೆಟ್ಟಿ, ಪಾಯಲ್ ಚಂಗಪ್ಪ ಮುಖ್ಯಭೂಮಿಕೆಯಲ್ಲಿದ್ದಾರೆ. ನವೀನ್ ಡಿ ಪಡೀಲ್ ತಂದೆಯಾಗಿ ಹಾಗೂ ಮಧುಮತಿ ತಾಯಿಯಾಗಿ ಕಾಣಿಸಿಕೊಂಡಿದ್ದಾರೆ.  ಕಾರ್ತಿಕ್ ರೂವಾರಿ, ಶ್ರೀ ಭವ್ಯ, ಪಲ್ಲವಿ ಪರ್ವ ಸೇರಿದಂತೆ ಹಲವಾರು ಕಲಾವಿದರು ಚಿತ್ರದಲ್ಲಿದ್ದಾರೆ. ಲೋಕೇಶ್ ನಾಗಪ್ಪ ಬಂಡವಾಳ ಹೂಡಿರುವ ಚಿತ್ರಕ್ಕೆ ಸುಮಂತ್ ಆಚಾರ್ಯ ಛಾಯಾಚಿತ್ರಗ್ರಹಣ, ಕಿರಣ್ ಕುಮಾರ್ ಸಂಕಲನ ಹಾಗೂ ರೋಹಿತ್ ಸೋವರ್ ಹಿನ್ನೆಲೆ ಸಂಗೀತವಿದೆ.

ಸೀಟ್‌ ಎಡ್ಜ್‌:

ಯುವನಟ ಸಿದ್ದು ಮೂಲಿಮನಿ ನಾಯಕನಾಗಿ ನಟಿಸಿರುವ ಚಿತ್ರವಿದು. ಡಾರ್ಕ್‌ ಕಾಮಿಡಿಯ ಜೊತೆಗೆ ಹಾರರ್‌-ಥ್ರಿಲ್ಲರ್‌ ಶೈಲಿ ಹೊಂದಿರುವ ಚಿತ್ರಕ್ಕೆ ಚೇತನ್ ಶೆಟ್ಟಿ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿದ್ದಾರೆ. ರವೀಕ್ಷಾ ಶೆಟ್ಟಿ ನಾಯಕಿ.

‘ಇತ್ತೀಚಿನ ದಿನಗಳಲ್ಲಿ ಯುಟ್ಯೂಬ್‌ ಮತ್ತು ಸೋಷಿಯಲ್‌ ಮೀಡಿಯಾಗಳಲ್ಲಿ ಅತಿಹೆಚ್ಚು ವೀವ್ಸ್‌ ಪಡೆಯಲು, ಜನಪ್ರಿಯರಾಗಲು ಯುಟ್ಯೂಬರ್ಸ್‌ ಮತ್ತು ವ್ಲಾಗರ್ಸ್‌ ಏನೇನು ಸಾಹಸಗಳನ್ನು ಮಾಡುತ್ತಾರೆ ಎಂಬ ಎಳೆಯನ್ನು ಇಟ್ಟುಕೊಂಡು ಈ ಸಿನಿಮಾ ಮಾಡಿದ್ದೇವೆ. ಇದು ಎಲ್ಲಾ ಥರದ ಪ್ರೇಕ್ಷಕರಿಗೂ ಕನೆಕ್ಟ್‌ ಆಗುವಂಥ ಸಿನಿಮಾ. ನಮಗೆ ಗೊತ್ತಿಲ್ಲದ ವಿಷಯದಲ್ಲಿ ದುಸ್ಸಾಹಸಕ್ಕೆ ಕೈಹಾಕಿದರೆ, ಏನೇನು ಆಗಬಹುದು ಎಂಬುದನ್ನು ಈ ಸಿನಿಮಾದಲ್ಲಿ ಹೇಳಿದ್ದೇವೆ’ ಎಂದಿದ್ದಾರೆ ನಿರ್ದೇಶಕ. 

ರಘು ರಾಮನಕೊಪ್ಪ, ಗಿರೀಶ್ ಶಿವಣ್ಣ, ಮಿಮಿಕ್ರಿ ಗೋಪಿ, ಲಕ್ಷ್ಮಿ ಸಿದ್ದಯ್ಯ, ಕಿರಣ್, ಪುನೀತ್ ಬಾಬು, ತೇಜು ಪೊನ್ನಪ್ಪ, ಮನಮೋಹನ್ ರೈ ಮೊದಲಾದವರು ಚಿತ್ರದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಎನ್‌.ಆರ್‌. ಸಿನಿಮಾ ಪ್ರೊಡಕ್ಷನ್ಸ್‌ ಬ್ಯಾನರಿನಲ್ಲಿ ಗಿರಿಧರ ಟಿ.ವಸಂತಪುರ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.

ಹೌದ್ದೋ ಹುಲಿಯ

ಉತ್ತರ ಕರ್ನಾಟಕ ಭಾಷೆಯ ಸೊಗಡಿರುವ ಹಾಸ್ಯಮಯ ಸಿನಿಮಾವಿದು. ಚಿತ್ರಮಂದಿರಗಳ ಜತೆಗೆ ಟಾಕೀಸ್ ಆ್ಯಪ್ ಒಟಿಟಿಯಲ್ಲಿಯೂ ಬಿಡುಗಡೆಗೊಳ್ಳುತ್ತಿರುವುದು ವಿಶೇಷ. ಈ ಹಿಂದೆ ‘ದಸ್ಕತ್‌’ ಎಂಬ ತುಳು ಸಿನಿಮಾ ನಿರ್ದೇಶಿಸಿದ ಅನೀಶ್ ಪೂಜಾರಿ ವೇಣೂರು ಈ ಚಿತ್ರಕ್ಕೆ ಆ್ಯಕ್ಷನ್‌ ಕಟ್‌ ಹೇಳಿದ್ದಾರೆ. ಕೆ.ರತ್ನಾಕರ ಕಾಮತ್ ಮತ್ತು ಗಣೇಶ್ ಆರ್. ಕಾಮತ್ ಬಂಡವಾಳ ಹೂಡಿದ್ದಾರೆ. 

‘ಕಾಮಿಡಿ ಕಿಲಾಡಿ’ ಖ್ಯಾತಿಯ ಗೋವಿಂದೇಗೌಡ (ಜಿ.ಜಿ) ಕಥೆ, ಚಿತ್ರಕಥೆ, ಸಂಭಾಷಣೆ ಬರೆದಿದ್ದು, ಸಂತೋಷ್ ಗುಂಪಲಾಜೆ ಮತ್ತು ದೀಕ್ಷಿತ್ ಧರ್ಮಸ್ಥಳ ಛಾಯಾಚಿತ್ರಗ್ರಹಣ, ಕಿಶೋರ್ ಶೆಟ್ಟಿ, ಸಮರ್ಥನ್ ರಾವ್ ಸಂಗೀತವಿದೆ. 

‘ಇದೊಂದು ಸಂಪೂರ್ಣ ಹಾಸ್ಯಮಯ ಚಿತ್ರವಾಗಿದ್ದು, ಕುಟುಂಬ ಸಮೇತರಾಗಿ ನೋಡಬಹುದಾದ ಮನರಂಜನಾತ್ಮಕ ಕಥೆ ಹೊಂದಿದೆ. ಎಲ್ಲ ವಯೋಮಾನದ ಪ್ರೇಕ್ಷಕರನ್ನು ಗಮನದಲ್ಲಿಟ್ಟುಕೊಂಡು ಕಥೆ ಬರೆದಿದ್ದೇವೆ’ ಎಂದಿದೆ ಚಿತ್ರತಂಡ. 

ವೈಜನಾಥ್ ಬಿರಾದಾರ್, ಮಿಮಿಕ್ರಿ ಗೋಪಿ, ಪ್ರಿಯಾ ಸವದಿ, ಸೂರಜ್, ಮಲ್ಯ ಬಾಗಲಕೋಟೆ, ಸಂತೋಷ್ ರೋಣ ಮುಂತಾದವರು ಚಿತ್ರದಲ್ಲಿದ್ದಾರೆ.

ಮಾವುತ

ಲಕ್ಷ್ಮೀಪತಿ ಬಾಲಾಜಿ ನಿರ್ಮಿಸಿ, ನಾಯಕನಾಗಿ ನಟಿಸಿರುವ ಚಿತ್ರ. ರವಿಶಂಕರ್ ನಾಗ್ ನಿರ್ದೇಶನವಿದೆ.

‘ಕಾಡಿನ ಕಥೆ. ಕಾಡಿನಲ್ಲಿ ನಡೆಯುವ ಕೆಲವು ಅಕ್ರಮಗಳನ್ನು ಕಂಡು ಹಿಡಿದು ಕಾಡನ್ನು ಉಳಿಸಿಕೊಳ್ಳುವ ಮಾವುತ ಹಾಗೂ ಆನೆಯ ಕಥೆಯಿದೆ. ಸಾಗರ್ ಎಂಬ ಆನೆ ಕೂಡ ಈ ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿಸಿದೆ. ಮಾವುತ ಹಾಗೂ ಆನೆಯ ಬಾಂಧವ್ಯದ ಸನ್ನಿವೇಶಗಳೇ ಈ ಚಿತ್ರದ ಪ್ರಮುಖಾಂಶ’ ಎಂದಿದೆ ಚಿತ್ರತಂಡ.

ಮಹಾಲಕ್ಷ್ಮಿ, ದಿವ್ಯಶ್ರೀ ಚಿತ್ರದ ನಾಯಕಿಯರು. ಥ್ರಿಲ್ಲರ್‌ ಮಂಜು, ಪದ್ಮಾ ವಾಸಂತಿ, ಬಲ ರಾಜವಾಡಿ ಮುಂತಾದವರು ನಟಿಸಿದ್ದಾರೆ. ವಿನು ಮನಸು ಸಂಗೀತ, ಲಯ ಕೋಕಿಲ, ಕೈಲಾಶ್ ಕುಟ್ಟಪ್ಪ ಹಿನ್ನೆಲೆ ಸಂಗೀತ, ವೀನಸ್‌ ಮೂರ್ತಿ ಛಾಯಾಚಿತ್ರಗ್ರಹಣ, ವೆಂಕಿ ಯುಡಿವಿ ಸಂಕಲನವಿದೆ. 

ವಿಕಲ್ಪ

 ಬಹುತೇಕ ಹೊಸಬರಿಂದಲೇ ಕೂಡಿರುವ ಚಿತ್ರವಿದು. ಸೈಕಾಲಜಿಕಲ್‌, ಥ್ರಿಲ್ಲರ್‌ ಕಥಾಹಂದರದ ಚಿತ್ರಕ್ಕೆ ಪೃಥ್ವಿರಾಜ್‌ ಪಾಟೀಲ್‌ ಆ್ಯಕ್ಷನ್‌ ಕಟ್‌ ಹೇಳುವುದರ ಜತೆಗೆ ನಾಯಕನಾಗಿ ನಟಿಸಿದ್ದಾರೆ. 

ಪೋಸ್ಟ್‌ ಟ್ರಾಮಾಟಿಕ್‌ ಸ್ಟ್ರೆಸ್‌ ಡಿಸಾರ್ಡರ್‌(ಪಿಟಿಎಸ್‌ಡಿ) ಎಂಬ ಮಾನಸಿಕ ರೋಗದ ಎಳೆಯನ್ನು ಆಧರಿಸಿದ ಕಥೆ ಎಂದು ಚಿತ್ರತಂಡ ಹೇಳಿದೆ. ಇಂದಿರಾ ಶಿವಸ್ವಾಮಿ ಬಂಡವಾಳ ಹೂಡಿದ್ದಾರೆ. ನಾಗಶ್ರೀ ಹೆಬ್ಬಾರ್‌, ಹರಿಣಿ ಶ್ರೀಕಾಂತ್‌, ಸಂಧ್ಯಾ ವಿನಾಯಕ್‌, ಗಣಪತಿ ವಡ್ಡಿನಗದ್ದೆ ಮುಂತಾದವರು ಚಿತ್ರದಲ್ಲಿದ್ದಾರೆ. ಚಿತ್ರಕ್ಕೆ ಸಂವತ್ಸರ ಸಂಗೀತ, ಅಭಿರಾಮ್‌ ಗೌಡ ಛಾಯಾಚಿತ್ರಗ್ರಹಣ, ಸುರೇಶ್‌ ಆರ್ಮುಗಂ ಸಂಕಲನವಿದೆ. 

ಶ್ರೀಜಗನ್ನಾಥದಾಸರು–ಭಾಗ 2

ಮಧುಸೂದನ್ ಹವಾಲ್ದಾರ್ ನಿರ್ಮಾಣ ಹಾಗೂ ನಿರ್ದೇಶನದ ಈ ಚಿತ್ರ ಜಗನ್ನಾಥದಾಸರ ಕುರಿತಾದ ಕಥೆ ಹೊಂದಿದೆ. 

‘ಐದು ವರ್ಷಗಳ ಹಿಂದೆ ನಿರ್ಮಾಣವಾಗಿದ್ದ ‘ಶ್ರೀಜಗನ್ನಾಥದಾಸರು’ ಚಿತ್ರಕ್ಕೆ ಎಲ್ಲೆಡೆಯಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಅದರ ಮುಂದುವರಿಕೆ ಕಥೆ ಈ ಭಾಗದಲ್ಲಿದೆ’ ಎಂದಿದ್ದಾರೆ ನಿರ್ದೇಶಕ.

ಶರತ್‌ ಜೋಶಿ, ವಿಷ್ಣುತೀರ್ಥ ಜೋಶಿ, ನಿಶ್ಚಿತ ಶೆಟ್ಟಿ, ಪುಷ್ಕರ್ ದೇಶಪಾಂಡೆ, ಸಚಿನ್ ಪುರೋಹಿತ್, ವಸಂತ್, ಗುರುರಾಜ, ನಾರಾಯಣ ಕುಲಕರ್ಣಿ ಮುಂತಾದವರು ಚಿತ್ರದಲ್ಲಿದ್ದಾರೆ. 

ಇವುಗಳಲ್ಲದೆ ಹೊಸಬರ ‘ಬಾಸ್‌’ ಎಂಬ ಚಿತ್ರ ಕೂಡ ಈ ವಾರ ತೆರೆ ಕಾಣುತ್ತಿದೆ. 

ಪಾಯಲ್‌ ಚಂಗಪ್ಪ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.