ADVERTISEMENT

ಕನ್ನಡಕ್ಕಾಗಿ ಡಬ್ಬಿಂಗ್‌ ಎನ್ನುತ್ತಿದ್ದಾರೆ ಜಾಕ್‌ ಮಂಜು

ವಿಜಯ್ ಜೋಷಿ
Published 10 ಜನವರಿ 2019, 19:45 IST
Last Updated 10 ಜನವರಿ 2019, 19:45 IST
‘ಪೆಟ್ಟ’ ಚಿತ್ರದಲ್ಲಿ ರಜನೀಕಾಂತ್ ಮತ್ತು ಸಿಮ್ರನ್
‘ಪೆಟ್ಟ’ ಚಿತ್ರದಲ್ಲಿ ರಜನೀಕಾಂತ್ ಮತ್ತು ಸಿಮ್ರನ್   

‘ಪೆಟ್ಟಾ ಚಿತ್ರವನ್ನು ರಜನೀಕಾಂತ್ ದನಿಯಲ್ಲಿ ಕನ್ನಡಕ್ಕೆ ಡಬ್ ಮಾಡುವ ಯತ್ನ ನಡೆಸಿದ್ದೇನೆ’ ಎಂದು ಘೋಷಿಸಿರುವ ನಿರ್ಮಾಪಕ, ವಿತರಕ ಜಾಕ್ ಮಂಜು ‘ಡಬ್ಬಿಂಗ್ ಎಂಬುದು ಕನ್ನಡದ ಪರ’ ಎಂಬ ನಿಲುವು ತಾಳಿದ್ದಾರೆ.

ವೀಕ್ಷಕರಿಗೆ ಬೇಕು ಎಂದಾದರೆ, ಕನ್ನಡಕ್ಕೆ ಒಳ್ಳೆಯದಾಗುತ್ತದೆ ಎಂದಾದರೆ ಡಬ್ಬಿಂಗ್‌ಗೆ ತಮ್ಮ ವಿರೋಧ ಇಲ್ಲ ಎಂದು ನಟರಾದ ಶಿವರಾಜ್ ಕುಮಾರ್, ಯಶ್ ಹಾಗೂ ಜಗ್ಗೇಶ್ ಹೇಳಿದ ನಂತರ ಸೂಪರ್‌ಸ್ಟಾರ್‌ ನಟನ ಸಿನಿಮಾವನ್ನು ಕನ್ನಡಕ್ಕೆ ಡಬ್ ಮಾಡಲು ಮುಂದಾಗಿರುವ ಜಾಕ್‌ ಮಂಜು ‘ಸಿನಿಮಾ ಪುರವಣಿ’ ಜೊತೆ ಮಾತಿಗೆ ಸಿಕ್ಕಿದ್ದರು.

‘ಕನ್ನಡಿಗರು ತಮ್ಮ ಭಾಷೆಯಲ್ಲೇ ಸಿನಿಮಾ ನೋಡಬೇಕು. ಕನ್ನಡ ಬೆಳೆಯಬೇಕು. ನನ್ನ ಮಗನಿಗೆ ರಜನಿ ಇಷ್ಟ. ಅವನಿಗೆ ಕನ್ನಡದಲ್ಲೇ ಸಿನಿಮಾ ನೋಡುವ ಅವಕಾಶ ಬೇಕಲ್ಲವೆ? ಅವನೇಕೆ ತಮಿಳಿನಲ್ಲಿ ಸಿನಿಮಾ ನೋಡಬೇಕು? ಕನ್ನಡಕ್ಕಾಗಿ ಡಬ್ಬಿಂಗ್ ಬೇಕು ಎಂಬುದು ನನ್ನ ತಾತ್ವಿಕ ನಿಲುವು’ ಎನ್ನುತ್ತಾರೆ ಮಂಜು.

ADVERTISEMENT

ಡಬ್ಬಿಂಗ್ ವಿರೋಧಿಸಿ ಹಿಂದೆ ತೀವ್ರ ಪ್ರತಿಭಟನೆಗಳು ನಡೆದಿದ್ದವಾದರೂ ಈಗ ಯಾವ ಆತಂಕವೂ ಇಲ್ಲ ಎನ್ನುತ್ತಿದ್ದಾರೆ ಅವರು.

ಜಾಕ್ ಮಂಜು

‘ಹೊಸದೇನಾದರೂ ಮಾಡಲು ಹೊರಟಾಗ ತೊಂದರೆ ಬರುವ ಸಾಧ್ಯತೆ ಇರುತ್ತದೆ. ಅದನ್ನು ಎದುರಿಸಲು ಬೇಕಿರುವ ಕಾನೂನು ಕ್ರಮ ತೆಗೆದುಕೊಳ್ಳುವೆ. ಡಬ್ಬಿಂಗ್ ವಿಚಾರದಲ್ಲಿ ನನ್ನ ಜೊತೆ ದೊಡ್ಡವರೂ ಇದ್ದಾರೆ. ಯಾರಾದರೂ ಡಬ್ಬಿಂಗ್ ಕೆಲಸ ಶುರು ಮಾಡಲಿ ಎಂದು ಅವರು ಕಾಯುತ್ತಿದ್ದಾರೆ. ನನಗೆ ಬೆಂಬಲ ಸೂಚಿಸಿ ಕೆಲವು ದೊಡ್ಡ ಸಂಘಟನೆಗಳವರೂ ಕರೆ ಮಾಡಿದ್ದಾರೆ’ ಎಂಬುದು ಅವರು ನೀಡುವ ವಿವರಣೆ.

ಡಬ್ ಆಗಿರುವ ಸಿನಿಮಾಗಳಲ್ಲಿ ಕನ್ನಡದ ಸೊಗಡು ಇರುವುದಿಲ್ಲ ಎಂಬ ಆಕ್ಷೇಪದ ಬಗ್ಗೆ ಪ್ರಸ್ತಾಪಿಸಿದಾಗ, ‘ಇಂದು ಕನ್ನಡ ರಾಜ್ಯದ ಮೂಲೆ

ಮೂಲೆಗಳಲ್ಲಿ ತಮಿಳು ಸಿನಿಮಾ ಬಿಡುಗಡೆ ಆಗುತ್ತಿದೆ. ತಮಿಳು ಅರ್ಥವಾಗದವರ ಊರಿನಲ್ಲೂ ಬಿಡುಗಡೆ ಆಗಿ, ಅಲ್ಲಿನವರು ತಮಿಳು ಕಲಿಯುವ ಸ್ಥಿತಿ ಇದೆ. ಅದರ ಬದಲು ಅವರು ಕನ್ನಡದಲ್ಲೇ ಬೇರೆ ಸಿನಿಮಾಗಳನ್ನು ನೋಡುವಂತೆ ಆಗಬೇಕು. ವ್ಯಾಪಾರದಲ್ಲಿ ಲಾಭ, ನಷ್ಟ ಇದ್ದಿದ್ದೇ. ಆದರೆ, ಕನ್ನಡ ಭಾಷೆಗೆ ಒಳ್ಳೆಯದಾಗಬೇಕು ಎಂಬ ಕಾರಣಕ್ಕೇ ನಾನು ಡಬ್ಬಿಂಗ್ ಪರ ನಿಂತಿದ್ದೇನೆ’ ಎಂದು ಉತ್ತರಿಸಿದರು.

ಹಣಕಾಸಿನ ಲಾಭ?: ‘ನಾನು ಇದನ್ನು ಈ ಹಂತದಲ್ಲಿ‌‌ ಲಾಭ, ನಷ್ಟದ ನೆಲೆಯಲ್ಲಿ ನೋಡುತ್ತಿಲ್ಲ. ಒಂದು ಒಳ್ಳೆಯ ಪ್ರಯತ್ನ ನಮ್ಮಿಂದ ನಡೆಯಬೇಕು ಎನ್ನುವ ದೃಷ್ಟಿಯಿಂದ ಈ ಕೆಲಸ ಮಾಡುತ್ತಿದ್ದೇನೆ. ಲಾಭ ಆಗಬೇಕು ಎಂಬ ದೃಷ್ಟಿ ಇರುತ್ತದೆ ಖಂಡಿತ ಇರುತ್ತದೆ. ಲಾಭ ಆಗಬಹುದು ಎಂಬ ನಿರೀಕ್ಷೆಯೂ ಇದೆ’ ಎನ್ನುತ್ತಾರೆ ಅವರು.

ಆಜ್ಞೆಯೇನೂ ಇಲ್ಲವಲ್ಲ...
ಡಬ್ ಆಗಿರುವ ಚಿತ್ರಗಳು ಕನ್ನಡಕ್ಕೆ ಬರಬಾರದು ಎನ್ನುವ ಲಿಖಿತ ಆದೇಶ ಎಲ್ಲಿಯೂ ಇಲ್ಲ. ರಾಜ್ಯ ಸರ್ಕಾರವು ಸಾಂಸ್ಕೃತಿಕ ನೀತಿಯಲ್ಲಿ ‘ಡಬ್ಬಿಂಗ್ ಮಾಡಬಾರದು’ ಎಂದು ಹೇಳಿಲ್ಲ. ಕಲಾವಿದರ ಸಂಘ ಅಥವಾ ಚಲನಚಿತ್ರ ವಾಣಿಜ್ಯ ಮಂಡಳಿ ಕೂಡ ಅಂತಹ ಆಜ್ಞೆ ಹೊರಡಿಸಿಲ್ಲ ಎಂದು ಮಂಜು ತಿಳಿಸಿದು.

‘ಯಂಡಮೂರಿ ವಿರೇಂದ್ರನಾಥ್ ಕಾದಂಬರಿ ಕನ್ನಡಕ್ಕೆ ಅನುವಾದ ಆಗಬಹುದಾದರೆ, ಬೇರೆ ಭಾಷೆಯ ಸಿನಿಮಾ ಯಾಕೆ ಕನ್ನಡಕ್ಕೆ ಅನುವಾದ ಆಗಬಾರದು’ ಎಂದು ಅವರು ಪ್ರಶ್ನಿಸುತ್ತಾರೆ.

ಕಾರ್ತಿಕ್ ಸುಬ್ಬರಾಜ್

200ಕ್ಕೂ ಹೆಚ್ಚು ಮಂದಿರಗಳಲ್ಲಿ ಪೆಟ್ಟಾ
‘ಪೆಟ್ಟಾ’ ಚಿತ್ರದ ಹಿಂದಿ, ತಮಿಳು ಮತ್ತು ತೆಲುಗು ಆವೃತ್ತಿಗಳು ರಾಜ್ಯದಲ್ಲಿ 200ಕ್ಕೂ ಹೆಚ್ಚಿನ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿವೆ. ಎರಡು ತಾಸು, ಮೂವತ್ತು ನಿಮಿಷಗಳ ಈ ಸಿನಿಮಾದ ಕಥೆಯನ್ನು ನಿಭಾಯಿಸಿರುವ ರೀತಿ ವಿಭಿನ್ನವಾಗಿದೆ ಎಂದು ಚಿತ್ರತಂಡ ಹೇಳಿಕೊಂಡಿದೆ.

ಸಿನಿಮಾ ಬಗ್ಗೆ ಮಾಹಿತಿ ನೀಡಲು ಕಾರ್ತಿಕ್ ಸುಬ್ಬರಾಜ್ ಅವರು ಬೆಂಗಳೂರಿಗೆ ಬಂದಿದ್ದರು. ‘ರಜನಿ ಸಿನಿಮಾಗಳನ್ನು ನೋಡುತ್ತಲೇ ನಾನು ಸಿನಿಮಾ ಜಗತ್ತಿನ ಬಗ್ಗೆ ಕೌತುಕ ಬೆಳೆಸಿಕೊಂಡೆ. ಆದರೆ, ಅವರು ಅಭಿನಯಿಸಿದ ಚಿತ್ರವನ್ನು ನಾನು ನಿರ್ದೇಶನ ಮಾಡುತ್ತೇನೆ ಎಂಬುದಾಗಿ ಕನಸಿನಲ್ಲೂ ಅಂದುಕೊಂಡಿರಲಿಲ್ಲ’ ಎಂದರು ಕಾರ್ತಿಕ್. ಚಿತ್ರದಲ್ಲಿ ಭಾವುಕ ಸನ್ನಿವೇಶಗಳು ಕೂಡ ಸಾಕಷ್ಟಿವೆ. ರಜನಿ ಅಭಿನಯದ ‘2.0’ ಇನ್ನೂ ಚಿತ್ರಮಂದಿರಗಳಲ್ಲಿ ಇರುವಾಗಲೇ, ಪೆಟ್ಟಾ ಕೂಡ ತೆರೆಗೆ ಬರುತ್ತಿರುವುದು ಅಭಿಮಾನಿಗಳಿಗೆ ಸಂತಸ ತಂದಿದೆ. ಅಭಿಮಾನಿಗಳು ಹಳೆಯ ದಿನಗಳನ್ನು ನೆನಪಿಸಿಕೊಳ್ಳುತ್ತಿದ್ದಾರೆ ಎಂದು ತಮ್ಮ ಖುಷಿ ಹಂಚಿಕೊಂಡರು ಕಾರ್ತಿಕ್. ಅದಕ್ಕಿಂತ ಕುತೂಹಲದ ವಿಷಯವೆಂದರೆ, ‘ಈ ಕಥೆಯನ್ನು ನಾನು ರಜನಿ ಅವರಿಗಾಗಿಯೇ ಸೃಷ್ಟಿಸಿದ್ದೇನೆ. ಇದರಲ್ಲಿ ರಜನಿಯಿಸಂ ಇದೆ’ ಎಂದು ಕಾರ್ತಿಕ್ ಹೇಳಿರುವುದು. ಅಂದರೆ ಇದೊಂದು ‘ರಜನಿಯಿಸಿಂ ಕಲ್ಟ್‌ ಸಿನಿಮಾ’ ಸ್ವರೂಪವನ್ನೂ ಹೊಂದಿರಬಹುದೆ?!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.