ADVERTISEMENT

ಖಿನ್ನತೆಗೆ ಒಳಗಾದ ಪ್ರದೀಪ್ ಮಾಚೀರಾಜು

​ಪ್ರಜಾವಾಣಿ ವಾರ್ತೆ
Published 13 ಮೇ 2020, 19:30 IST
Last Updated 13 ಮೇ 2020, 19:30 IST
ನೀಲಿ ನೀಲಿ ಆಕಾಶಂ ಹಾಡಿನ ದೃಶ್ಯ
ನೀಲಿ ನೀಲಿ ಆಕಾಶಂ ಹಾಡಿನ ದೃಶ್ಯ   

ಪ್ರದೀಪ್ ಮಾಚೀರಾಜು ತೆಲುಗಿನ ಟಾಪ್ ನಿರೂಪಕರಲ್ಲಿ ಒಬ್ಬರು. ‘ಈಟಿವಿ ತೆಲುಗು’ ವಾಹಿನಿಯ ಡಾನ್ಸ್ ರಿಯಾಲಿಟಿ ಷೋ ‘ಡಿ’ ಕಾರ್ಯಕ್ರಮದ ಮೂಲಕ ಅಭಿಮಾನಿ ಬಳಗವನ್ನು ಸೃಷ್ಟಿಸಿಕೊಂಡಿರುವ ಇವರು ಸುಮಾರು 15ಕ್ಕೂ ಹೆಚ್ಚು ಟಿವಿ ಕಾರ್ಯಕ್ರಮಗಳಲ್ಲಿ ನಿರೂಪಕರಾಗಿದ್ದವರು.

‘100% ಲವ್’‌, ‘ಜುಲಾಯಿ’, ‘ಅತ್ತಾರಿಂಟಿಕಿ ದಾರೆದಿ’, ‘ರಾಮಯ್ಯ ವಸ್ತಾವಯ್ಯ’ ಮುಂತಾದ ಹಿಟ್ ಸಿನಿಮಾಗಳಲ್ಲಿ ಸಣ್ಣ ಪುಟ್ಟ ಪಾತ್ರಗಳನ್ನು ನಿರ್ವಹಿಸಿರುವ ಇವರು ಟಾಲಿವುಡ್‌ನಲ್ಲಿ ಹೀರೊ ಎನ್ನಿಸಿಕೊಳ್ಳಲು ಒಳ್ಳೆಯ ಕಥೆಗಾಗಿ ಕಾಯುತ್ತಿದ್ದರು. ಈ ನಡುವೆ ಪ್ರದೀಪ್ ‘30 ರೋಜುಲೊ ಪ್ರೇಮಿಂಚಟಂ ಎಲಾ’ ಎಂಬ ವಿಭಿನ್ನ ಪ್ರೇಮಕಥೆಯುಳ್ಳ ಚಿತ್ರಕ್ಕೆ ಸಹಿ ಮಾಡಿದ್ದರು.

ಸಿನಿಮಾದ ‘ನೀಲಿ ನೀಲಿ ಆಕಾಶಂ ಇದ್ದಾಮನುಕುನ್ನ’ ಹಾಡು ಬರೀ ತೆಲುಗು ಭಾಷಿಕರಷ್ಟೇ ಅಲ್ಲದೇ ಅನ್ಯ ಭಾಷಿಗರು ಕೂಡ ಗುನುಗುವಂತೆ ಮಾಡಿತ್ತು. ಹಾಡಿನ ಕಾರಣದಿಂದಲೇ ಸಿನಿಮಾ ಹೆಚ್ಚು ಸದ್ದು ಮಾಡುತ್ತಿರುವಾಗಲೇ ಕೋವಿಡ್‌– 19 ಕಾರಣದಿಂದ ಲಾಕ್‌ಡೌನ್ ಹೇರಲಾಯಿತು. ಆ ಕಾರಣಕ್ಕೆ ಮುನ್ನ ನಿರ್ದೇಶನದ ಈ ಚಿತ್ರದ ಬಿಡುಗಡೆಯನ್ನು ಮುಂದಕ್ಕೆ ಹಾಕಲಾಯಿತು.

ADVERTISEMENT

ತಾನು ಮೊದಲ ಬಾರಿ ನಾಯಕನಾಗಿ ನಟಿಸಿದ ಸಿನಿಮಾದ ಮೇಲೆ ತುಂಬಾನೇ ಭರವಸೆ ಇಟ್ಟುಕೊಂಡಿದ್ದ ಪ್ರದೀಪ್ ಕಳೆದ 50 ದಿನಗಳಿಂದ ಖಿನ್ನತೆಗೆ ಒಳಗಾಗಿದ್ದಾರೆ ಎಂಬ ಸುದ್ದಿಯೂ ಕೇಳಿಬರುತ್ತಿದೆ. ಲಾಕ್‌ಡೌನ್‌ ಮುಂದಿನ ನಿರ್ಣಯಗಳ ಬಗ್ಗೆ ಸ್ವಷ್ಟವಾದ ಮಾಹಿತಿ ಇಲ್ಲದೇ ಒದ್ದಾಡುತ್ತಿರುವ ಇವರು ಸಿನಿರಂಗದ ಆಪ್ತರ ಬಳಿ ಥಿಯೇಟರ್ ಪುನಃ ತೆರೆಯುವುದರ ಬಗ್ಗೆ ನಿರಂತರವಾಗಿ ವಿಚಾರಿಸುತ್ತಿದ್ದಾರೆ ಎನ್ನಲಾಗುತ್ತಿದೆ.

ಈ ನಡುವೆ ಅವರ ಆಪ್ತರು ‘ನಿನ್ನ ಸಿನಿಮಾಕ್ಕೆ ಯಾವುದೇ ತೊಂದರೆಯಾಗುವುದಿಲ್ಲ’ ಎಂದು ಸಮಾಧಾನ ಪಡಿಸುತ್ತಿದ್ದಾರಂತೆ. ಬೆಂಗಳೂರು ಮೂಲದ ಅಮೃತಾ ಅಯ್ಯರ್ ಈ ಸಿನಿಮಾದಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾಕ್ಕೆ ಅನೂಪ್ ರುಬೆನ್ಸ್ ಸಂಗೀತ ನಿರ್ದೇಶನವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.