ಬೆಂಗಳೂರು: ಪ್ರಿನ್ಸ್ ಮಹೇಶ್ ಬಾಬು ಅವರ ಅಣ್ಣ ಹಾಗೂ ತೆಲುಗು ಸಿನಿಮಾ ನಿರ್ಮಾಪಕಘಟ್ಟಮನೇನಿ ರಮೇಶ್ ಬಾಬು (56) ಅನಾರೋಗ್ಯದಿಂದಇಂದು ನಿಧನರಾಗಿದ್ದಾರೆ. ಅವರ ನಿಧನಕ್ಕೆ ಟಾಲಿವುಡ್ ಸೇರಿದಂತೆ ಅನೇಕ ಗಣ್ಯರು ಕಂಬನಿ ಮಿಡಿಯುತ್ತಿದ್ದಾರೆ.
ಇನ್ನು ತಮ್ಮ ಪ್ರೀತಿಯ ಅಣ್ಣನಿಗೆ ಮಹೇಶ್ ಬಾಬು ಅವರು ನುಡಿ ನಮನ ಹೇಳಿ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.
‘ಅಣ್ಣಯ್ಯ ನೀನು ನನ್ನ ಸ್ಪೂರ್ತಿ, ಶಕ್ತಿ, ಧೈರ್ಯ ಎಲ್ಲವೂ ಅಗಿದ್ದೆ. ಒಂದು ವೇಳೆ ಆಗದಿದ್ದರೇ ನಾನು ಇಂದು ನಾನಾಗಿರುತ್ತಿರಲಿಲ್ಲ. ನನಗೋಸ್ಕರ ಎಲ್ಲವನ್ನೂ ಮಾಡಿದ್ದಕ್ಕೆ ಧನ್ಯವಾದ. ವಿರಮಿಸು.. ನೀನು ಎಂದೆಂದಿಗೂ ನನ್ನ ಅಣ್ಣಯ್ಯ’ ಎಂದು ಕಂಬನಿ ಮಿಡಿದಿದ್ದಾರೆ.
ರಮೇಶ್ ಬಾಬು ತೆಲುಗು ಹಿರಿಯ ನಟ ಕೃಷ್ಣ ಅವರ ಹಿರಿಯ ಪುತ್ರ. ಅವರು ಕೆಲ ದಿನಗಳಿಂದ ಯಕೃತ್ ತೊಂದರೆಯಿಂದ ಬಳಲುತ್ತಿದ್ದರು.
ಕುಟುಂಬದಿಂದ ಪತ್ರ
ರಮೇಶ್ ಬಾಬು ನಿಧನದ ಹಿನ್ನೆಲೆಯಲ್ಲಿ ಘಟ್ಟಮನೇನಿ ಕುಟುಂಬ ಪತ್ರ ಬರೆದಿದೆ. 'ನಮ್ಮ ಪ್ರೀತಿಯ ರಮೇಶ್ ಬಾಬು ಅವರ ನಿಧನದ ಸಂಗತಿಯನ್ನು ನಾವು ತೀವ್ರ ದುಃಖದಿಂದ ಹೇಳುತ್ತಿದ್ದೇವೆ. ಅವರು ನಮ್ಮೆಲ್ಲರ ಹೃದಯದಲ್ಲಿ ಶಾಶ್ವತವಾಗಿ ಇರುತ್ತಾರೆ. ನಮ್ಮ ಎಲ್ಲಾ ಹಿತೈಷಿಗಳು ಕೋವಿಡ್ ಮಾರ್ಗಸೂಚಿಗಳನ್ನು ಪಾಲಿಸಬೇಕು ಮತ್ತು ಅಂತ್ಯಕ್ರಿಯೆಯ ಸ್ಥಳದಲ್ಲಿ ಗುಂಪು ಸೇರುವುದನ್ನು ತಪ್ಪಿಸುವಂತೆ ನಾವು ವಿನಂತಿ ಮಾಡುತ್ತಿದ್ದೇವೆ' ಎಂದು ಕುಟುಂಬದ ಕಡೆಯಿಂದ ತಿಳಿಸಲಾಗಿದೆ.
ಹಿರಿಯ ನಟ ಕೃಷ್ಣ ಅವರ ಮೊದಲ ಪುತ್ರನಾಗಿದ್ದ ರಮೇಶ್ ಬಾಬು ಬಾಲ ನಟನಾಗಿ ಚಿತ್ರರಂಗ ಪ್ರವೇಶ ಮಾಡಿದ್ದರು. 1974ರಲ್ಲಿ ತೆರೆಕಂಡ 'ಅಲ್ಲೂರಿ ಸೀತಾರಾಮರಾಜು' ಚಿತ್ರದಲ್ಲಿ ಮೊದಲು ಬಣ್ಣ ಹಚ್ಚಿದ್ದರು. ಬಳಿಕ ನಿರ್ಮಾಪಕರಾಗಿ ಕೆಲಸ ಮಾಡಿದ ಅವರು, ಸಹೋದರ ಮಹೇಶ್ ಬಾಬು ಅವರ ಸಿನಿಮಾಗಳನ್ನು ನಿರ್ಮಿಸಿದ್ದರು. ಮಹೇಶ್ ನಟಿಸಿದ್ದ ‘ಅರ್ಜುನ್’, ‘ಅತಿಥಿ’, ‘ಆಗಡು‘ ಚಿತ್ರಗಳನ್ನು ನಿರ್ಮಿಸಿದ್ದರು.
ರಮೇಶ್ ಬಾಬು ನಿಧನಕ್ಕೆ ನಟ ಚಿರಂಜೀವಿ ಸೇರಿದಂತೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.
ಶನಿವಾರ ಮಹೇಶ್ ಬಾಬು (46) ಅವರಿಗೆ ಕೋವಿಡ್ ದೃಢಪಟ್ಟಿತ್ತು. ಮನೆಯಲ್ಲಿಯೇ ಪ್ರತ್ಯೇಕ ವಾಸದಲ್ಲಿದ್ದು, ಸೂಕ್ತ ವೈದ್ಯಕೀಯ ಸಲಹೆಗಳನ್ನು ಪಡೆಯುತ್ತಿರುವುದಾಗಿ ಅವರು ತಿಳಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.