ADVERTISEMENT

23 ವರ್ಷಗಳ ಬಳಿಕ ಚಿತ್ರಮಂದಿರಗಳಲ್ಲಿ ‘ಅಪ್ಪು’ ಸಂಭ್ರಮಾಚರಣೆ

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2025, 23:30 IST
Last Updated 14 ಮಾರ್ಚ್ 2025, 23:30 IST
ವೀರೇಶ್‌ ಚಿತ್ರಮಂದಿರದೊಳಗೆ ಅಭಿಮಾನಿಗಳ ಸಂಭ್ರಮ 
ವೀರೇಶ್‌ ಚಿತ್ರಮಂದಿರದೊಳಗೆ ಅಭಿಮಾನಿಗಳ ಸಂಭ್ರಮ    

ಬೆಂಗಳೂರು: 23 ವರ್ಷಗಳ ಬಳಿಕ ‘ಅಪ್ಪು’ವನ್ನು ಸಂಭ್ರಮಿಸುವ ಗಳಿಗೆ ಹತ್ತಿರವಾಗುತ್ತಿತ್ತು... ಚಿತ್ರಮಂದಿರಗಳೆದುರು ಸೇರಿದ್ದ ನೂರಾರು ಅಭಿಮಾನಿಗಳಿಗೆ ತಮ್ಮ ನೆಚ್ಚಿನ ನಟನನ್ನು ಮತ್ತೆ ತೆರೆ ಮೇಲೆ ನೋಡುವ ಕಾತರ...ಪ್ರತಿಧ್ವನಿಸುವ ‘ಅಪ್ಪು..ಅಪ್ಪು..’ ಜೈಕಾರದ ನಡುವೆ ಪಟಾಕಿಯ ಸದ್ದು, ‘ಅಪ್ಪು’ ಸಿನಿಮಾದ ಹಾಡುಗಳಿಗೆ ಅಭಿಮಾನಿಗಳ ಹೆಜ್ಜೆ...ನಟ ದಿವಂಗತ ಪುನೀತ್‌ ರಾಜ್‌ಕುಮಾರ್‌ ನಾಯಕರಾಗಿ ನಟಿಸಿದ್ದ ಮೊದಲ ಸಿನಿಮಾ ‘ಅಪ್ಪು’ ಶುಕ್ರವಾರ(ಮಾರ್ಚ್‌ 14) ಮರುಬಿಡುಗಡೆಯಾದ ಸಂದರ್ಭದಲ್ಲಿ ಕಂಡ ದೃಶ್ಯಗಳಿವು.       

ಸೋಮವಾರ (ಮಾರ್ಚ್‌ 17) ಪುನೀತ್‌ ಅವರ 50ನೇ ಜನ್ಮದಿನ. ಈ ಹೊಸ್ತಿಲಲ್ಲಿ ಪುರಿ ಜಗನ್ನಾಥ್‌ ನಿರ್ದೇಶನದ ‘ಅಪ್ಪು’ ಕರ್ನಾಟಕದಾದ್ಯಂತ 100ಕ್ಕೂ ಅಧಿಕ ಏಕಪರದೆ ಚಿತ್ರಮಂದಿರಗಳು ಹಾಗೂ ಮಲ್ಟಿಪ್ಲೆಕ್ಸ್‌ಗಳಲ್ಲಿ ಮರು ಬಿಡುಗಡೆಯಾಯಿತು. ಈ ಸಂಭ್ರಮಕ್ಕೆ ‘ಅಪ್ಪು’ ಚಿತ್ರದ ನಾಯಕಿ ರಕ್ಷಿತಾ, ಸಂಗೀತ ನಿರ್ದೇಶಕ ಗುರುಕಿರಣ್‌, ನಟರಾದ ರಾಘವೇಂದ್ರ ರಾಜ್‌ಕುಮಾರ್‌, ಯುವರಾಜ್‌ಕುಮಾರ್‌, ಕಾರ್ತಿಕ್‌ ಮಹೇಶ್‌, ನಿರ್ದೇಶಕರಾದ ಸಂತೋಷ್‌ ಆನಂದರಾಮ್‌, ಸಿಂಪಲ್‌ ಸುನಿ, ಚೇತನ್‌, ನಟಿ ಅನುಶ್ರೀ ಸೇರಿದಂತೆ ಚಿತ್ರರಂಗದ ಹಲವರು ಜೊತೆಯಾದರು. 

‘ನೋವು–ದುಃಖ ಎರಡೂ ಈ ಸಂದರ್ಭದಲ್ಲಾಗುತ್ತಿದೆ. ಈ ಸಿನಿಮಾ ಬಿಡುಗಡೆಗೊಂಡಾಗ ಅಮ್ಮ, ಅಪ್ಪಾಜಿ, ಅಪ್ಪು ಎಲ್ಲರೂ ಇದ್ದರು. ಈ ದಿನ ಮತ್ತೆ ಬರಬೇಕು ಎಂದೆನಿಸುತ್ತಿದೆ. 23 ವರ್ಷ ಕಳೆದರೂ ಜನ ಈ ಸಿನಿಮಾದ ಡೈಲಾಗ್‌, ಹಾಡುಗಳನ್ನು ಮರೆತಿಲ್ಲ. ಅಪ್ಪುವನ್ನು ಜನರ ಜೊತೆಗೂಡಿ ಸಂಭ್ರಮಿಸಿದೆ. ಸಿನಿಮಾ ನೋಡಿದಾಗ ಆತ ಬಂದೇ ಬಿಡುತ್ತಾನೆ ಎಂದೆನಿಸಿತು’ ಎನ್ನುವಾಗ ರಾಘವೇಂದ್ರ ರಾಜ್‌ಕುಮಾರ್‌ ಭಾವುಕರಾದರು. 

ADVERTISEMENT

‘ಇಷ್ಟು ವರ್ಷಗಳು ಉರುಳಿದರೂ ಈ ಸಿನಿಮಾ ಇನ್ನೂ ತಾಜಾತನದಿಂದ ಕೂಡಿದೆ. ನಾನು ಮೊದಲ ಬಾರಿ ‘ಅಪ್ಪು’ ಸಿನಿಮಾವನ್ನು ಪೂರ್ತಿಯಾಗಿ ನೋಡಿದ್ದು. ಓರ್ವ ಅಭಿಮಾನಿಯಾಗಿ ನಾನು ಇಂದು ಸಿನಿಮಾ ನೋಡಿದೆ. ಹಲವು ನೆನಪುಗಳು ಈ ಸಿನಿಮಾದಲ್ಲಿವೆ’ ಎಂದರು ನಟಿ ರಕ್ಷಿತಾ.   

ಪುನೀತ್‌ ಅವರ ನೆನಪಿನಲ್ಲಿ ಹಲವೆಡೆ ಅಭಿಮಾನಿಗಳು ಅನ್ನದಾನ, ರಕ್ತದಾನ ಮಾಡಿದರು. ನೇತ್ರದಾನದ ಪ್ರತಿಜ್ಞೆಯನ್ನೂ ತೆಗೆದುಕೊಂಡರು.  

‘ಅಪ್ಪು’ ಚಿತ್ರ ನೋಡಲು ವೀರೇಶ್‌ ಚಿತ್ರಮಂದಿರಕ್ಕೆ ಆಗಮಿಸಿದ ನಟಿ ರಕ್ಷಿತಾ 

ಆರು ಶೋ ಹೌಸ್‌ಫುಲ್‌

ಮಾಗಡಿ ರಸ್ತೆಯ ವೀರೇಶ್‌ ‘ಅಪ್ಪು’ ಮುಖ್ಯ ಚಿತ್ರಮಂದಿರಗಳಲ್ಲಿ ಒಂದಾಗಿತ್ತು. ಇಲ್ಲಿ ಶುಕ್ರವಾರ ಒಟ್ಟು ಆರು ಪ್ರದರ್ಶನಗಳು ನಡೆದಿದ್ದು ಒಟ್ಟು 5700 ಜನರು ‘ಅಪ್ಪು’ ವೀಕ್ಷಿಸಿದ್ದಾರೆ. ಈ ಕುರಿತು ಮಾತನಾಡಿರುವ ಚಿತ್ರಮಂದಿರದ ಮಾಲೀಕ ಕೆ.ವಿ.ಚಂದ್ರಶೇಖರ್‌ ‘ಶುಕ್ರವಾರ ಎಲ್ಲಾ ಶೋ ಹೌಸ್‌ಫುಲ್‌ ಆಗಿತ್ತು. ಬೆಂಗಳೂರಿನಲ್ಲೇ 37 ಏಕಪರದೆ ಚಿತ್ರಮಂದಿರಗಳಲ್ಲಿ ಸಿನಿಮಾ ರೀ ರಿಲೀಸ್‌ ಆಗಿದೆ. ಅಭಿಮಾನ ಪ್ರೀತಿ ಕಮ್ಮಿ ಆಗಿಲ್ಲ ಆಗುವುದೂ ಇಲ್ಲ ಎನ್ನುವುದಕ್ಕೆ ಇದು ಸಾಕ್ಷಿ. 23 ವರ್ಷಗಳ ಹಿಂದೆ ಇಷ್ಟು ಚಿತ್ರಮಂದಿರಗಳಲ್ಲಿ ‘ಅಪ್ಪು’ ಸಿನಿಮಾ ರಿಲೀಸ್‌ ಆಗಿರಲಿಲ್ಲ. ಚಿತ್ರ ನೂರು ದಿನದ ಸಂಭ್ರಮ ಆಚರಿಸಿದ್ದಾಗ ನಾನೇ ವಾಣಿಜ್ಯ ಮಂಡಳಿ ಅಧ್ಯಕ್ಷ ಆಗಿದ್ದೆ. ಆ ನೆನಪುಗಳು ಮತ್ತೆ ಕಣ್ಣ ಮುಂದೆ ಬಂದವು. ಸಿನಿಮಾವನ್ನು ಪ್ರಿಂಟ್‌ನಿಂದ ಡಿಜಿಟಲ್‌ಗೆ ವರ್ಗಾಯಿಸಿದ್ದಾರೆ. ಇದರಿಂದ ಗುಣಮಟ್ಟ ಹೆಚ್ಚಾಗಿದೆ. ಅತ್ಯುತ್ತಮ ಕನ್ನಡ ಸಿನಿಮಾಗಳನ್ನು ಡಿಜಿಟಲ್‌ ರೂಪ ನೀಡಿ ರೀ ರಿಲೀಸ್‌ ಮಾಡುವುದಕ್ಕೆ ಸರ್ಕಾರ ವಾಣಿಜ್ಯ ಮಂಡಳಿಯು ಆದ್ಯತೆ ನೀಡಬೇಕು’ ಎಂದರು.   

ಈ ಸಿನಿಮಾ ರಿಲೀಸ್‌ ಆಗುತ್ತಿದೆಯೋ ರೀ ರಿಲೀಸ್‌ ಆಗುತ್ತಿದೆಯೋ ತಿಳಿಯುತ್ತಿಲ್ಲ. ಜನರ ಸಂಭ್ರಮ ಅಷ್ಟಿದೆ. 23 ವರ್ಷಗಳ ಬಳಿಕವೂ ಸಿನಿಮಾ ಹೊಸದಾಗಿಯೇ ಉಳಿದಿದೆ.
–ಯುವರಾಜ್‌ಕುಮಾರ್‌ ನಟ
ಪುನೀತ್‌ ಅವರ ಜೊತೆ ನಾನು ಮಾಡಿದ ಎರಡು ಸಿನಿಮಾಗಳು ಜನರ ಮೇಲೆ ಬಹಳಷ್ಟು ಪರಿಣಾಮ ಬೀರಿದೆ. ಅಪ್ಪು ಅವರ ಚರಿತ್ರೆಯನ್ನು ಬಯೋಪಿಕ್‌ ಮಾದರಿಯಲ್ಲಿ ತೆರೆ ಮೇಲೆ ತರಬೇಕು ಎನ್ನುವ ಆಲೋಚನೆಯನ್ನು ಗಂಭೀರವಾಗಿ ಮಾಡಿದ್ದೇನೆ.
–ಸಂತೋಷ್‌ ಆನಂದರಾಮ್‌ ನಿರ್ದೇಶಕ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.