ADVERTISEMENT

ಯುವ ಸಂಭ್ರಮದ ಬದಲು ಜಿಲ್ಲೆಗಳಿಗೆ ಭೇಟಿ: ಪುನೀತ್‌

ಹುಟ್ಟುಹಬ್ಬದಂದು ದೇವಸ್ಥಾನ ಭೇಟಿ: ಫೇಸ್‌ಬುಕ್‌ ಲೈವ್‌ನಲ್ಲಿ ಅಭಿಮಾನಿಗಳಿಗೆ ಸಂದೇಶ

​ಪ್ರಜಾವಾಣಿ ವಾರ್ತೆ
Published 15 ಮಾರ್ಚ್ 2021, 15:03 IST
Last Updated 15 ಮಾರ್ಚ್ 2021, 15:03 IST
ಪುನೀತ್‌ ರಾಜ್‌ಕುಮಾರ್‌
ಪುನೀತ್‌ ರಾಜ್‌ಕುಮಾರ್‌    

ಬೆಂಗಳೂರು: ಮಾರ್ಚ್‌ 20ರಂದು ಮೈಸೂರಿನಲ್ಲಿ ಯುವರತ್ನ ಸಿನಿಮಾ ಬಿಡುಗಡೆಗಾಗಿ ನಡೆಸಲು ಉದ್ದೇಶಿಸಿರುವ ‘ಯುವ ಸಂಭ್ರಮ’ ನಡೆಸುತ್ತಿಲ್ಲ. ಬದಲಾಗಿ ವಿವಿಧ ಜಿಲ್ಲಾ ಕೇಂದ್ರಗಳಿಗೆ, ಆಯ್ದ ಊರುಗಳಿಗೆ ತೆರಳಿ ಅಭಿಮಾನಿಗಳನ್ನು ಭೇಟಿಯಾಗುವುದಾಗಿ ನಟ ಪುನೀತ್‌ ರಾಜ್‌ಕುಮಾರ್‌ ಹೇಳಿದರು.

ಸೋಮವಾರ ಫೇಸ್‌ಬುಕ್‌ ಲೈವ್‌ನಲ್ಲಿ ಕಾಣಿಸಿಕೊಂಡ ಅವರು, ‘ಮಾರ್ಚ್‌ 20ರಂದು ಒಂದೇ ಊರಿನಲ್ಲಿ ಕಾರ್ಯಕ್ರಮ ಮಾಡುವ ಬದಲಾಗಿ ಎಲ್ಲ ಊರುಗಳಿಗೂ ನಾವು ತಲುಪಬೇಕಿದೆ. ಮಾರ್ಚ್‌ 21ರಿಂದ 23ರವರೆಗೆ ಬೇರೆ ಬೇರೆ ಜಿಲ್ಲಾ ಕೇಂದ್ರಗಳಿಗೆ ಭೇಟಿ ನೀಡುತ್ತೇನೆ. ಕಾರ್ಯಕ್ರಮದ ವೇಳಾಪಟ್ಟಿಯನ್ನು ನಮ್ಮ ತಂಡದವರು ನೀಡಲಿದ್ದಾರೆ’ ಎಂದು ಹೇಳಿದರು.

ಹುಟ್ಟುಹಬ್ಬದ ಸಂಭ್ರಮ ಇಲ್ಲ

ADVERTISEMENT

‘ಹುಟ್ಟುಹಬ್ಬದ ದಿನವಾದ ಮಾರ್ಚ್‌ 17ರಂದು ನಾವು ಮನೆಯಲ್ಲಿ ಇರುವುದಿಲ್ಲ. ಕುಟುಂಬ ಸಮೇತ ದೇವಸ್ಥಾನಗಳಿಗೆ ಭೇಟಿ ನೀಡಬೇಕು ಎಂದುಕೊಂಡಿದ್ದೇವೆ. ಆದ್ದರಿಂದ ಯಾರೂ ಮನೆಯ ಬಳಿ ಬರಬೇಡಿ. ಬದಲಾಗಿ ನೀವಿದ್ದಲ್ಲಿಗೆ ನಾನೇ ಬರುತ್ತೇನೆ’ ಎಂದರು.

‘ಫಿಟ್ನೆಸ್‌ ಸಂಬಂಧಿಸಿ ನಿಮಗೆ (ಅಭಿಮಾನಿಗಳಿಗೆ) ಸ್ಫೂರ್ತಿ ನೀಡುವುದು ಮತ್ತು ನಿಮ್ಮಿಂದ ನಾನೂ ಸ್ಫೂರ್ತಿ ಪಡೆಯಲಿಕ್ಕಾಗಿ ಆ ವಿಡಿಯೋಗಳನ್ನು ಬಿಡುಗಡೆ ಮಾಡುತ್ತಿದ್ದೇನೆ’ ಎಂದ ಅವರು, ‘ಸುರಕ್ಷತಾ ಕ್ರಮಗಳನ್ನು ಅನುಸರಿಸಿಕೊಂಡು ಚಿತ್ರಮಂದಿರಗಳಿಗೆ ಬಂದು ಚಿತ್ರ ನೋಡಿ’ ಎಂದು ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.