ಶಿವಮೊಗ್ಗದ ನಟಿ ರಜನಿ ಹಲವು ಕನಸುಗಳನ್ನು ಕಟ್ಟಿಕೊಂಡು ಬಣ್ಣದ ಬದುಕಿಗೆ ಕಾಲಿಡುತ್ತಿದ್ದಾರೆ. ತ್ರಿಭಾಷೆಯ ಚಿತ್ರದಲ್ಲಿ ಅವರು ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದು, ಈ ಚಿತ್ರಕ್ಕೆ ಅವರ ತಂದೆ ಶಿವಮೊಗ್ಗದ ಗಣೇಶ್ ಬಂಡವಾಳ ಹೂಡುತ್ತಿದ್ದಾರೆ.
ಸಿನಿಮಾ ನಿರ್ಮಾಣದ ಗುರಿ ಸಾಧಿಸಲು ಎಚ್.ಕೆ.ಆರ್. ಪ್ರೊಡಕ್ಷನ್ ಸಂಸ್ಥೆಯನ್ನು ಗಣೇಶ್ ಹುಟ್ಟುಹಾಕಿದ್ದಾರೆ. ತಮ್ಮ ಸಂಸ್ಥೆಯ ಮೊದಲ ಚಿತ್ರದಲ್ಲಿ ತಮ್ಮ ಪುತ್ರಿಯನ್ನೇ ನಾಯಕಿಯಾಗಿಸಿ ಅವರು ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಕೌಟುಂಬಿಕ ಕಥಾಹಂದರದ ಈ ಚಿತ್ರವನ್ನು ಕನ್ನಡ, ತಮಿಳು ಹಾಗೂ ಮರಾಠಿ ಭಾಷೆಯಲ್ಲಿ ನಿರ್ಮಾಣ ಮಾಡಲಾಗುತ್ತಿದೆ. ‘ಹಲವು ಮಂದಿ ನಿರ್ದೇಶಕರು ಮತ್ತು ಪರಿಣತರೊಂದಿಗೆ ಕಥೆಯ ಬಗ್ಗೆ ಚರ್ಚೆ ನಡೆಸಿದ್ದು, ಇಡೀ ಕುಟುಂಬ ಸಮೇತ ಕುಳಿತು ಪ್ರೇಕ್ಷಕರು ನೋಡಬಹುದಾದಂತಹ ಕಥೆಯನ್ನು ಚಿತ್ರಕ್ಕೆ ಆಯ್ಕೆ ಮಾಡಿಕೊಂಡಿದ್ದೇವೆ’ ಎನ್ನುವುದು ಗಣೇಶ್ ನುಡಿ.
ಬೆಂಗಳೂರಿನಲ್ಲಿ ಎರಡುಮೂರು ಅಭಿನಯ ತರಬೇತಿ ಶಾಲೆಗಳಲ್ಲಿ ನಟನೆ ಮತ್ತು ಹಲವು ಬಗೆಯ ನೃತ್ಯಕಲಿತುಕೊಂಡೇ ರಜನಿ ಬಣ್ಣದ ಬದುಕಿಗೆ ಪ್ರವೇಶ ನೀಡುತ್ತಿದ್ದಾರೆ.
ಕನ್ನಡ ಹಾಗೂ ತಮಿಳು ಚಿತ್ರರಂಗದಲ್ಲೂ ಕೆಲಸ ಮಾಡಿರುವ ಸತ್ಯಸಾಮ್ರಾಟ್ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಇವರು ನಿರ್ದೇಶಿಸಿದ ಪ್ರಮುಖ ಚಿತ್ರಗಳು ‘ಇಷ್ಟಾರ್ಥ’, ‘ಗಾಯತ್ರಿ’ ಹಾಗೂ ‘ವೀರಾಧಿವೀರ ರಾಜಾಧಿರಾಜ’.
ಚಿತ್ರಕ್ಕೆ ಇನ್ನಷ್ಟೆ ನಾಯಕ ಮತ್ತು ಇನ್ನುಳಿದ ಕಲಾವಿದರು ಹಾಗೂ ತಾಂತ್ರಿಕ ವರ್ಗದ ಆಯ್ಕೆ ನಡೆಯಬೇಕಿದೆ. ಬೆಂಗಳೂರು ಹಾಗೂ ಸುತ್ತಮುತ್ತಲ ತಾಣಗಳಲ್ಲಿ ಆಗಸ್ಟ್ನಿಂದ ಚಿತ್ರೀಕರಣ ಆರಂಭಿಸುವ ಯೋಜನೆ ಚಿತ್ರತಂಡದ್ದು..
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.