ಕೆ. ಶಿವರುದ್ರಯ್ಯ ನಿರ್ದೇಶನದ ‘ರಾಮನ ಸವಾರಿ’ ಮಕ್ಕಳ ಚಿತ್ರದ ಶೂಟಿಂಗ್ ಪೂರ್ಣಗೊಂಡಿದೆ. ಸಾಹಿತಿ ಕೆ. ಸದಾಶಿವ ಅವರ ಕಥೆ ಆಧಾರಿತ ಚಿತ್ರ ಇದು.
ಸಾಹಿತಿ ಗಿರೀಶ ಕಾರ್ನಾಡ ಅವರಿಗೆ ಈ ಕಥೆಯನ್ನು ಸಿನಿಮಾ ರೂಪಕ್ಕಿಳಿಸುವ ಆಸೆ ಇತ್ತಂತೆ. ಆದರೆ, ಅದು ಅವರಿಗೆ ಸಾಧ್ಯವಾಗಿರಲಿಲ್ಲ. ಅಲ್ಲದೆ, ನಿರ್ದೇಶಕ ಗಿರೀಶ ಕಾಸರವಳ್ಳಿ ಅವರಿಗೂ ಈ ಕಥೆಯನ್ನು ಸಿನಿಮಾ ಮಾಡುವ ಉದ್ದೇಶ ಇತ್ತಂತೆ. ಕಾರಣಾಂತರದಿಂದ ಅವರಿಗೂ ಅದು ಸಾಧ್ಯವಾಗಿರಲಿಲ್ಲ. ಆದರೆ, ಗಿರೀಶ ಕಾಸರವಳ್ಳಿ ಅವರೇ ಈ ಚಿತ್ರಕ್ಕೆ ಸ್ಕ್ರಿಫ್ಟ್ ಬರೆದಿದ್ದಾರೆ. ಎರಡು ಹಾಡುಗಳಿದ್ದು, ಕೆ. ಕಲ್ಯಾಣ್ ಸಂಗೀತ ಸಂಯೋಜಿಸಿದ್ದಾರೆ. ಛಾಯಾಗ್ರಹಣ ವಿಶ್ವನಾಥ್ ಅವರದ್ದು.
ಆರು ವರ್ಷದ ಆರೊನ್ ಮುಖ್ಯಪಾತ್ರದಲ್ಲಿ ನಟಿಸಿದ್ದಾನೆ. ಶಿವರುದ್ರಯ್ಯ ನಿರ್ದೇಶಿಸಿದ್ದ ರಾಜ್ಯ ಪ್ರಶಸ್ತಿ ಪುರಸ್ಕೃತ ‘ಮಾರಿಕೊಂಡವರು’ ಚಿತ್ರದಲ್ಲಿ ನಟಿ ಸೋನು ಗೌಡ ನಟಿಸಿದ್ದರು. ಅವರೊಟ್ಟಿಗೆ ಎರಡನೇ ಬಾರಿಗೆ ಸೋನು ಕೆಲಸ ಮಾಡುತ್ತಿದ್ದಾರೆ. ಉಳಿದ ಪಾತ್ರಗಳಲ್ಲಿರಾಜೇಶ್, ಸುಧಾ ಬೆಳವಾಡಿ, ಭಾರ್ಗವಿ ನಾರಾಯಣನ್, ಶೃಂಗೇರಿ ರಾಮಣ್ಣ ಕಾಣಿಸಿಕೊಂಡಿದ್ದಾರೆ. ಗಂಡ ಮತ್ತು ಹೆಂಡತಿ ನಡುವೆ ವೈಮನಸ್ಸು ಮೂಡಿದಾಗ ಮಗು ಹೇಗೆ ಮಾನಸಿಕವಾಗಿ ತೊಂದರೆಗೆ ಸಿಲುಕುತ್ತದೆ ಎನ್ನುವುದೇ ಕಥೆಯ ತಿರುಳು.
‘ಹೊಸನಗರದ ಸುತ್ತಮುತ್ತ ಶೂಟಿಂಗ್ ನಡೆಸಲಾಯಿತು. ಈಗ ಎಡಿಟಿಂಗ್ ಕಾರ್ಯ ನಡೆದಿದೆ. ಆರೊನ್ ಅವರ ತಂದೆ ಜೋಸೆಫ್ ಅವರೇ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಬಾಲಕ ನಟನೆ ಬಗ್ಗೆ ಎಲ್ಲಿಯೂ ತರಬೇತಿ ಪಡೆದಿಲ್ಲ. ಆದರೆ, ಅವನ ಅಭಿನಯದ ಬೆರಗು ಮೂಡಿಸುತ್ತದೆ’ ಎಂಬುದು ಶಿವರುದ್ರಯ್ಯ ಅವರ ವಿವರಣೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.