ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು ಪೋಷಾಕಿನಲ್ಲಿ ರಾನಾ ದಗ್ಗುಬಾಟಿ ಚಿತ್ರ ಜಗತ್ತಿನ ಗಮನ ಸೆಳೆದಿದ್ದಾರೆ. ನಿಜ ಜೀವನದ ನಾಯಕರೊಬ್ಬರ ಪಾತ್ರದಲ್ಲಿ ರಾನಾ ಇದೇ ಮೊದಲ ಬಾರಿಗೆ ನಟಿಸಿದ್ದರೂ ಅಮೋಘವಾಗಿ ಮೂಡಿಬಂದಿದೆ ಎಂದು ಮೆಚ್ಚುಗೆಯ ಸುರಿಮಳೆಯಾಗುತ್ತಿದೆ.
ಥಾಯ್ಲೆಂಡ್ನಲ್ಲಿ ಚಿತ್ರೀಕರಣದಲ್ಲಿ ಪಾಲ್ಗೊಂಡಿರುವ ರಾನಾಗೆ ನಿರ್ದೇಶಕ ಗುಣಶೇಖರ್ ಟ್ವೀಟ್ ಮಾಡಿ ಬಾಯ್ತುಂಬ ಹೊಗಳಿದ್ದಾರೆ. ‘ಪ್ರತಿ ಪಾತ್ರದ ಒಳಹೊಕ್ಕು ನಟಿಸುವ ನಿಮ್ಮ ಪ್ರತಿಭೆಗೆ ಹ್ಯಾಟ್ಸಾಫ್. ಎನ್ಟಿಆರ್ ಮಹಾನಾಯಕುಡುನಲ್ಲಿನ ನಿಮ್ಮ ನಟನೆ ಅವಿಸ್ಮರಣೀಯವಾಗಿದೆ’ ಎಂದಿದ್ದಾರೆ.
‘ನಿಜ ಜೀವನದ ನಾಯಕನೊಬ್ಬನ ಪಾತ್ರದಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡಿದ್ದೇನೆ’ ಎಂದು ಮುಜುಗರದಿಂದಲೇ ಹೇಳಿಕೊಂಡಿದ್ದರು, ಕೆಲ ದಿನಗಳ ಹಿಂದೆ ಈ ನಟ ಟ್ವೀಟ್ ಮಾಡಿದ್ದರು.
ರಾನಾಕೈಲಿ ಈಗಾಗಲೇ ಸಾಕಷ್ಟು ಚಿತ್ರಗಳಿವೆ. ಇದೀಗ ಹೊಸ ಚಿತ್ರವೊಂದಕ್ಕೂ ಅವರು ಸಹಿ ಹಾಕಿದ್ದಾರೆ. ಬಾಲಿವುಡ್ ಮತ್ತು ದಕ್ಷಿಣ ಭಾರತೀಯ ಚಿತ್ರಗಳ ಸೆಟ್ಗಳಲ್ಲಿ ಬ್ಯುಸಿಯಾಗಿರುವ ರಾನಾ ಒಪ್ಪಿರುವ ಹೊಸ ಚಿತ್ರ ಮಿಲಿಂದ್ ರಾವ್ ಅವರದ್ದು. ‘ಗೃಹಂ’ ಚಿತ್ರ ಖ್ಯಾತಿಯ ಮಿಲಿಂದ್ ನಿರ್ದೇಶನದ ಈ ಚಿತ್ರಕ್ಕೆ ವಿಶ್ವಭಾರತಿ ಪಿಕ್ಚರ್ಸ್ ಬ್ಯಾನರ್ನಡಿ ಗೋಪಿನಾಥ್ ಅಚಂತ ಬಂಡವಾಳ ಹೂಡಲಿದ್ದಾರೆ. ಚಿತ್ರದ ಶೀರ್ಷಿಕೆ ಇನ್ನೂ ಅಂತಿಮಗೊಂಡಿಲ್ಲ. ಆದರೆ ಆಗಸ್ಟ್ ವೇಳೆಗೆ ಸೆಟ್ಟೇರಲಿದೆ.
ಮೂರು ಭಾಷೆಗಳಲ್ಲಿ ತೆರೆ ಕಾಣಲಿರುವ ‘ಹಾತಿ ಮೇರೆ ಸಾಥಿ’ ಚಿತ್ರದ ಚಿತ್ರೀಕರಣ ಈಗಷ್ಟೇ ಮುಗಿದಿದೆ.
ಅಂದ ಹಾಗೆ,ಗುಣಶೇಖರ್ ನಿರ್ದೇಶನದ ‘ಹಿರಣ್ಯಕಶಿಪು’ ಪಾತ್ರದಲ್ಲಿ ರಾನಾ ನಟಿಸಲಿದ್ದಾರೆ. ₹150 ಕೋಟಿ ಬಜೆಟ್ನ ಈ ಚಿತ್ರದ ನಿರ್ಮಾಣವನ್ನು ರಾನಾ ಅವರ ಸುರೇಶ್ ಪ್ರೊಡಕ್ಷನ್ಸ್ ಮಾಡಲಿದೆ. ತಮಿಳಿನ ಚಿತ್ರವೊಂದಕ್ಕೆ ಕೂಡಾ ರಾನಾ ಸಹಿ ಹಾಕಿದ್ದಾರೆ.
ಹೀಗೆ, ಏಕಕಾಲಕ್ಕೆ ಹಲವು ಚಿತ್ರಗಳಲ್ಲಿ ನಟಿಸಲಿರುವ ರಾನಾ, 2019 ಮತ್ತು 2020ರುದ್ದಕ್ಕೂ ಪೂರ್ತಿ ಬ್ಯುಸಿಯಾಗಿರಲಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.