ಭಾರತೀಯ ಯೋಧರ ಯಶೋಗಾಥೆ ಕುರಿತ ಚಿತ್ರಗಳು ಈಗಾಗಲೇ ಸಾಕಷ್ಟು ಬಂದಿವೆ. ‘ರಣಾಂಗಣ’ ಚಿತ್ರ ಇದಕ್ಕೆ ಹೊಸ ಸೇರ್ಪಡೆ. ಎರಡು ಚಾಪ್ಟರ್ನಲ್ಲಿ ಈ ಸಿನಿಮಾ ಮೂಡಿಬರಲಿದ್ದು, ಯೋಧರ ಬದುಕಿನ ನೈಜ ಘಟನೆಯ ಸುತ್ತ ಕಥೆ ಹೊಸೆಯಲಾಗಿದೆ ಎನ್ನುವುದು ಚಿತ್ರತಂಡದ ವಿವರಣೆ.
ಮಂಗಳೂರು ಬಂದರು, ರಾಮೇಶ್ವರ, ಹಿಮಾಚಲ ಪ್ರದೇಶ ಸೇರಿದಂತೆ ಯುರೋಪ್ನಲ್ಲಿ ಚಿತ್ರೀಕರಣ ನಡೆಸಲು ಚಿತ್ರತಂಡ ಯೋಜನೆ ಹಾಕಿಕೊಂಡಿದೆ. ಗಡಿಭಾಗದಲ್ಲಿ ನಡೆದ ಮೂರು ಘಟನೆಗಳ ಸುತ್ತ ಚಿತ್ರಕಥೆ ಸಾಗಲಿದೆಯಂತೆ. ಆದರೆ, ಕಥೆಯ ಬಗ್ಗೆ ಚಿತ್ರತಂಡ ಗೋಪ್ಯ ಕಾಯ್ದುಕೊಂಡಿತು.
ಟಿ.ಎಸ್. ನಾಗಾಭರಣ, ವಾಸು ಅವರ ಬಳಿ ಕೆಲಸ ಮಾಡಿರುವ ರೋಹಿತ್ ರಾವ್ ಮೊದಲ ಬಾರಿಗೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ‘ಪ್ರಸ್ತುತ ಯೋಧರು ಮತ್ತು ರೈತರು ಕಷ್ಟಪಡುತ್ತಿದ್ದಾರೆ. ಅವರು ಕಷ್ಟಪಡುತ್ತಿರುವುದರಿಂದಲೇ ನಾವು ನೆಮ್ಮದಿಯಿಂದ ಇದ್ದೇವೆ. ಈ ಚಿತ್ರ ನೋಡಿದ ಯುವಜನರಿಗೆ ತಾವು ಕೂಡ ಸೈನ್ಯಕ್ಕೆ ಸೇರಬೇಕೆಂಬ ಆಸೆ ಮೂಡುತ್ತದೆ’ ಎಂದು ವಿವರಿಸಿದರು.
ಕನ್ನಡ ಸೇರಿದಂತೆ ಹಿಂದಿ, ತೆಲುಗು ಮತ್ತು ತಮಿಳು ಭಾಷೆಯಲ್ಲಿ ಸಿನಿಮಾ ನಿರ್ಮಾಣವಾಗುತ್ತಿದೆ. ಭಾರತದಲ್ಲಿ ಏಳು ಗಡಿಭಾಗಗಳಿವೆ. ಹಾಗಾಗಿ, ಏಳು ಖಳನಾಯಕರು ನಟಿಸಲಿದ್ದಾರಂತೆ.
ಸ್ಕಂದ ಅಶೋಕ್ ಈ ಚಿತ್ರದ ನಾಯಕ. ಪತ್ರಕರ್ತೆಯಾಗಿ ಬಳಿಕ ಸೇನೆಗೆ ಸೇರುವ ಪಾತ್ರಕ್ಕೆ ನಟಿ ಶಾನ್ವಿ ಶ್ರೀವಾಸ್ತವ ಬಣ್ಣಹಚ್ಚಿದ್ದಾರೆ.
ಜಯಲಕ್ಷ್ಮಿ, ಪವನ್ಕುಮಾರ್, ಪ್ರತೀಶ್ ಶೆಟ್ಟಿ, ಸುಮನ್ ನಗರ್ಕರ್ ತಾರಾಗಣದಲ್ಲಿದ್ದಾರೆ. ಸಾಹಸ ರವಿವರ್ಮ ಅವರದ್ದು. ಹೋರಾಟಗಾರ ಪ್ರವೀಣ್ ಶೆಟ್ಟಿ ಪ್ರಥಮ ದೃಶ್ಯಕ್ಕೆ ಕ್ಲಾಪ್ ಮಾಡಿದರು. ನಿವೃತ್ತ ಐಪಿಎಸ್ ಅಧಿಕಾರಿ ಎಚ್.ಟಿ. ಸಾಂಗ್ಲಿಯಾನ ಕ್ಯಾಮೆರಾ ಚಾಲನೆ ಮಾಡಿದರು. ಅನೂಪ್ ಭಂಡಾರಿಸಿನಿಮಾದ ಫಸ್ಟ್ಲುಕ್ ಅನ್ನು ಲೋಕಾರ್ಪಣೆ ಮಾಡಿದರು. ಹೇಮಂತ್ ಸುವರ್ಣ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.