ಕ್ರೇಜಿಸ್ಟಾರ್ ರವಿಚಂದ್ರನ್ ಪುತ್ರ ಮನೋರಂಜನ್ ಹಾಗೂ ನಟಿ ಕೀರ್ತಿ ಕಲ್ಕೇರೆ ಅವರ ‘ವಿವಾಹ ಆಹ್ವಾನ‘ ಪತ್ರಿಕೆ...ಅಲ್ಲ,‘ಚಿತ್ರಮಂದಿರಕ್ಕೆ ಆಹ್ವಾನ‘ ಪತ್ರಿಕೆ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.
ಮನೋರಂಜನ್ ಹಾಗೂ ನಟಿ ಕೀರ್ತಿ ಅಭಿನಯಿಸಿರುವ ‘ಪ್ರಾರಂಭ‘ ಸಿನಿಮಾ ಬಿಡುಗಡೆಗೆ ಸಿದ್ದವಾಗಿದೆ. ಚಿತ್ರತಂಡವು ಸಿನಿಮಾ ಬಿಡುಗಡೆಯ ಆಹ್ವಾನ ಪತ್ರಿಕೆಯನ್ನು ‘ಮದುವೆ ಆಮಂತ್ರಣ‘ ಪತ್ರಿಕೆ ಮಾದರಿಯಲ್ಲಿ ಬಿಡುಗಡೆಮಾಡಿ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದೆ.
ಮದುವೆ ಪತ್ರಿಕೆಯ ಮಾದರಿಯಲ್ಲೇ ‘ಚಿತ್ರಮಂದಿರಕ್ಕೆ ಆಹ್ವಾನ‘ ಪತ್ರಿಕೆಯನ್ನು ಸಿದ್ದಪಡಿಸಿದೆ. ಇದು ‘ಮದುವೆಯ ಕರೆಯೋಲೆ‘ ರೀತಿಯಲ್ಲಿ ಇರುವುದು ವಿಶೇಷ. ವಧು, ವರರ ಹೆಸರಿರುವ ಸ್ಥಳದಲ್ಲಿ ಮನೋರಂಜನ್ ಹಾಗೂ ನಟಿ ಕೀರ್ತಿಯ ಹೆಸರನ್ನು ಮುದ್ರಿಸಲಾಗಿದೆ.
ರವೀಚಂದ್ರನ್ ಅಶೀರ್ವಾದದೊಂದಿಗೆ ಎಂಬ ಸಾಲನ್ನು ‘ಚಿತ್ರಮಂದಿರಕ್ಕೆ ಆಹ್ವಾನ‘ ಪತ್ರಿಕೆಯಲ್ಲಿ ಮುದ್ರಿಸಲಾಗಿದೆ. ಹಾಗೇ ನಟ, ನಟಿಯ ಪೋಷಕರ ಹೆಸರುಗಳನ್ನು ಹಾಕಲಾಗಿದೆ. ಚಿತ್ರತಂಡದ ಈ ವಿಭಿನ್ನ ಪ್ರಯತ್ನಕ್ಕೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.ಸಾಮಾಜಿಕ ಮಾಧ್ಯಮಗಳಲ್ಲಿ ಈ ಆಹ್ವಾನ ಪ್ರತಿಕೆಯನ್ನು ಅಭಿಮಾನಿಗಳು ಶೇರ್ ಮಾಡುತ್ತಿದ್ದಾರೆ.
ಈ ಚಿತ್ರದ ಟ್ರೇಲರ್ ಹಾಗೂ ಹಾಡುಗಳು ಈಗಾಗಲೇ ಪ್ರೇಕ್ಷಕರ ಮನ ಗೆದ್ದಿದೆ. ವಿಭಿನ್ನ ಕಥಾಹಂದರ ಹೊಂದಿರುವ ಈ ಚಿತ್ರವನ್ನು ಮನು ಕಲ್ಯಾಡಿ ನಿರ್ದೇಶಿಸಿದ್ದಾರೆ. ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಯನ್ನು ಮನು ಕಲ್ಯಾಡಿ ಅವರೇ ಬರೆದಿದ್ದಾರೆ.
ಜೇನುಶ್ರೀ ತನುಷ ಪ್ರೊಡಕ್ಷನ್ಸ್ ಲಾಂಛನದಲ್ಲಿ ಜಗದೀಶ್ ಕಲ್ಯಾಡಿ ಈ ಚಿತ್ರವನ್ನು ನಿರ್ಮಿಸಿದ್ದಾರೆ. ರವಿ ವಡ್ಡೇರಹಳ್ಳಿ ಈ ಚಿತ್ರದ ಸಹ ನಿರ್ಮಾಪಕು. ಪ್ರಜ್ವಲ್ ಪೈ ಸಂಗೀತ ನಿರ್ದೇಶನ, ಸುರೇಶ್ ಬಾಬು ಛಾಯಾಗ್ರಹಣ, ವಿಜಯ್ ಸಂಕಲನ ಹಾಗೂ ಥ್ರಿಲ್ಲರ್ ಮಂಜು, ವಿಕ್ರಮ್ ಮೋರ್ ಅವರ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ.
‘ಪ್ರಾರಂಭ’ ಚಿತ್ರ ಮೇ 13 ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.