ಕೊರೊನಾ ಸೋಂಕಿನ ಬಿಸಿ ಮಾರ್ಚ್ ಅಂತ್ಯದಲ್ಲಿ ಮತ್ತು ಏಪ್ರಿಲ್ ಮೊದಲ ವಾರದಲ್ಲಿ ಬಿಡುಗಡೆಗೆ ಸಿದ್ಧತೆ ನಡೆಸಿದ್ದ ಸ್ಟಾರ್ ನಟರ ಹಲವು ಚಿತ್ರಗಳಿಗೆ ತಟ್ಟಿದೆ.
ಗುಜರಾತ್ನ ಕಛ್ ಪ್ರದೇಶದಲ್ಲಿ ಕೊನೆಯ ಹಾಡಿನ ಚಿತ್ರೀಕರಣ ಪೂರ್ಣಗೊಳಿಸಿಕೊಂಡು ತರುಣ್ ಸುಧೀರ್ ನಿರ್ದೇಶನದ ದರ್ಶನ್ ನಟನೆಯ ‘ರಾಬರ್ಟ್’ ಚಿತ್ರತಂಡ ಬೆಂಗಳೂರಿಗೆ ಹಿಂದಿರುಗಿತ್ತು. ಪೋಸ್ಟ್ ಪ್ರೊಡಕ್ಷನ್ ಕೆಲಸ ಮುಗಿಸಿರುವ ಈ ಚಿತ್ರ ಏಪ್ರಿಲ್ 9ರಂದು ತೆರೆ ಕಾಣಬೇಕಿತ್ತು. ಕೊರೊನಾ ಸೋಂಕಿನ ಭೀತಿಯಿಂದಾಗಿ ಮೇ 1ರಂದು ಚಿತ್ರ ಬಿಡುಗಡೆಗೆ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ನಿರ್ಧರಿಸಿದ್ದಾರೆ.
‘ದುನಿಯಾ’ ವಿಜಯ್ ನಿರ್ದೇಶನದ ‘ಸಲಗ’ ಶೂಟಿಂಗ್ ಪೂರ್ಣಗೊಂಡಿದೆ. ಮಾರ್ಚ್ ಅಂತ್ಯದಲ್ಲಿ ಅಥವಾ ಏಪ್ರಿಲ್ ಮೊದಲ ವಾರದಲ್ಲಿ ಸಿನಿಮಾ ಬಿಡುಗಡೆಗೆ ಚಿತ್ರತಂಡ ನಿರ್ಧರಿಸಿತ್ತು. ಇದರ ಬಿಡುಗಡೆಯೂ ಮುಂದೂಡಿಕೆಯಾಗಿದೆ.
ಬೇಸಿಗೆ ರಜೆ ವೇಳೆಗೆ ಸಂತೋಷ್ ಆನಂದ್ರಾಮ್ ನಿರ್ದೇಶನದ ಪುನೀತ್ ರಾಜ್ಕುಮಾರ್ ನಟನೆಯ ‘ಯುವರತ್ನ’ ಹಾಗೂ ತರುಣ್ ಸುಧೀರ್ ನಿರ್ದೇಶನದ ಧ್ರುವ ಸರ್ಜಾ ನಟನೆಯ ‘ಪೊಗರು’ ಚಿತ್ರಗಳನ್ನು ತೆರೆಗೆ ತರಲು ಆಯಾ ಚಿತ್ರದ ನಿರ್ಮಾಪಕರು ನಿರ್ಧರಿಸಿದ್ದರು. ಆದರೆ, ಕೊರೊನಾ ಸೋಂಕಿನ ಭೀತಿಯಿಂದ ಈ ಸಿನಿಮಾಗಳ ಹಾಡುಗಳ ಚಿತ್ರೀಕರಣ ಇನ್ನೂ ಪೂರ್ಣಗೊಂಡಿಲ್ಲ. ಹಾಗಾಗಿ, ಈ ಸಿನಿಮಾಗಳ ಬಿಡುಗಡೆ ಎರಡು– ಮೂರು ತಿಂಗಳು ಮುಂದಕ್ಕೆ ಹೋದರೂ ಅಚ್ಚರಿಯಿಲ್ಲ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.