ನಟ ಅಲ್ಲು ಅರ್ಜುನ್ ಅಭಿನಯದ ಮುಂದಿನ ಚಿತ್ರ ‘ಪುಷ್ಪಾ’ದಲ್ಲಿ ಬಾಲಿವುಡ್ ಬೆಡಗಿ ಶ್ರದ್ಧಾ ಕಪೂರ್ ನೃತ್ಯವೊಂದಕ್ಕೆ ಹೆಜ್ಜೆ ಹಾಕಲಿದ್ದಾರೆ ಎಂಬ ಗಾಳಿ ಸುದ್ದಿ ಹರಿದಾಡುತ್ತಿದೆ. ಆದರೆ ಈ ಕುರಿತು ಚಿತ್ರತಂಡ ಯಾವುದೇ ಅಧೀಕೃತ ಮಾಹಿತಿ ತಿಳಿಸಿಲ್ಲ.
‘ಪುಷ್ಪಾ’ ಸಿನಿಮಾದ ಮೂಲಕ ಪ್ಯಾನ್ ಇಂಡಿಯನ್ ಸ್ಥಾನಮಾನ ಗಳಿಸುವ ಗುರಿ ಇರಿಸಿಕೊಂಡಿದ್ದಾರೆ ಬನ್ನಿ. ವಿಶೇಷವೆಂದರೆ ಈ ಸಿನಿಮಾದಲ್ಲಿ ಅಲ್ಲು ಪಾತ್ರದ ಹೆಸರು ಪುಷ್ಪರಾಜ್. ಈ ಹಿನ್ನೆಲೆಯಲ್ಲಿ ಸಿನಿಮಾಗೆ ಪುಷ್ಪಾ ಎಂದು ಹೆಸರಿಸಲಾಗಿದೆಯಂತೆ. ವಿಭಿನ್ನ ಕತೆಗಳನ್ನು ತೆರೆ ಮೇಲೆ ತರುವ ಯಶಸ್ವಿ ನಿರ್ದೇಶಕ ಸುಕುಮಾರ್ ಈ ಚಿತ್ರಕ್ಕೂ ಆ್ಯಕ್ಷನ್ ಕಟ್ ಹೇಳಲಿದ್ದಾರೆ. ಸಿನಿಮಾಕ್ಕೆ ದೇವಿಶ್ರಿ ಪ್ರಸಾದ್ ಸಂಗೀತ ನಿರ್ದೇಶನವಿದೆ. ಮೈತ್ರಿ ಮೂವಿ ಮೇಕರ್ಸ್ ಸಿನಿಮಾ ನಿರ್ಮಾಣ ಮಾಡುತ್ತಿದ್ದು, ಮುತ್ತಮ್ಸೆಟ್ಟಿ ಮಾಧ್ಯಮ ಪಾಲುದಾರರಾಗಿದ್ದಾರೆ.
ಸಿನಿಮಾಕ್ಕೆ ಸಂಗೀತ ಸಂಯೋಜನೆ ಮಾಡುತ್ತಿರುವ ಡಿಎಸ್ಪಿ ‘ನಾನು ಈ ಸಿನಿಮಾದ ಸಂಗೀತ ವಿಶೇಷವಾಗಿರಬೇಕು ಎಂಬ ಕಾರಣಕ್ಕೆ ಶ್ರಮ ವಹಿಸುತ್ತಿದ್ದೇನೆ. ಇದರಲ್ಲಿ ಐಟಂ ಹಾಗೂ ಜಾನಪದ ಹಾಡುಗಳು ಸಮ್ಮಿಳಿತವಿದೆ’ ಎನ್ನುವ ಮೂಲಕ ಅಲ್ಲು ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಿಸಿದ್ದಾರೆ. ಡಿಎಪ್ಪಿ ಅನೇಕ ಬ್ಲಾಕ್ಬಸ್ಟರ್ ಸಿನಿಮಾಗಳಿಗೆ ಸಂಗೀತ ನಿರ್ದೇಶನ ಮಾಡಿದ್ದಾರೆ.
‘ಆರ್ಯ’ದಿಂದ ‘ರಂಗಸ್ಥಳಂ’ ಸಿನಿಮಾದವರೆಗೆ ದೇವಿಶ್ರೀ ಪ್ರಸಾದ್ ಹಾಗೂ ಸುಕುಮಾರ್ ಅವರ ಕಾಂಬಿನೇಷನ್ ಹಿಟ್ ಆಗಿತ್ತು. ಎಲ್ಲಾ ಸಿನಿಮಾಗಳಲ್ಲೂ ಉತ್ತಮ ಸಂಗೀತದ ಜೊತೆಗೆ ವಿಶೇಷ ಐಟಂ ಹಾಡುಗಳ ಮೂಲಕ ಅಭಿಮಾನಿಗಳ ಮನ ಗೆದ್ದಿತ್ತು ಈ ಜೋಡಿ.
ಸದ್ಯದ ಸುದ್ದಿಯ ಪ್ರಕಾರ ಸಾಹೋ ಖ್ಯಾತಿ ನಟಿ ಶ್ರದ್ಧಾ ಕಪೂರ್ ವಿಶೇಷ ಹಾಡೊಂದರಲ್ಲಿ ಅಲ್ಲು ಅರ್ಜುನ್ ಜೊತೆ ಹೆಜ್ಜೆ ಹಾಕಲಿದ್ದಾರಂತೆ. ಈ ಕುರಿತು ಸುಕುಮಾರ್ ಶ್ರದ್ಧಾ ಜೊತೆ ಈಗಾಗಲೇ ಮಾತುಕತೆ ಮುಗಿಸಿದ್ದಾರಂತೆ ಎಂಬ ಗಾಳಿಸುದ್ದಿ ಟಾಲಿವುಡ್ನಲ್ಲಿ ಹರಿದಾಡುತ್ತಿದೆ. ಇದು ಗಾಳಿಸುದ್ದಿಯೋ ಅಥವಾ ನಿಜವಾದ ಸುದ್ದಿಯೋ ಎಂಬುದು ಇನ್ನಷ್ಟೇ ತಿಳಿಯಬೇಕಿದೆ.
ಯೋಜನೆಯ ಪ್ರಕಾರ ಈ ಸಿನಿಮಾವೂ ದಸರಾ ಹಬ್ಬದ ಸಮಯದಲ್ಲಿ ಬಿಡುಗಡೆಯಾಗಬೇಕಿತ್ತು. ಆದರೆ ಕೊರೊನಾ ಚಿತ್ರತಂಡದ ಈ ಯೋಜನೆಯನ್ನು ಬುಡಮೇಲು ಮಾಡಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.