
‘ಕಾಮಿಡಿ ಕಿಲಾಡಿಗಳು’ ರಿಯಾಲಿಟಿ ಶೋನ ಹಲವು ಕಲಾವಿದರು ನಟಿಸಿರುವ ‘ಸಾಲಗಾರರ ಸಹಕಾರ ಸಂಘ’ ಚಿತ್ರದ ಹಾಡು ಇತ್ತೀಚೆಗಷ್ಟೇ ಬಿಡುಗಡೆಗೊಂಡಿದೆ. ಈ ಶೀರ್ಷಿಕೆ ಗೀತೆಗೆ ನಟ ಶರಣ್ ಧ್ವನಿಯಾಗಿದ್ದಾರೆ. ವಿಕ್ರಮ್ ಧನಂಜಯ್.ಆರ್ ಕಥೆ, ಚಿತ್ರಕಥೆ ಬರೆದು ಆ್ಯಕ್ಷನ್ ಕಟ್ ಹೇಳಿದ್ದಾರೆ. ಕುಮಾರೇಶ್.ಎ ಮತ್ತು ಸುನಿಲ್ ಕುಮಾರ್ ಬಂಡವಾಳ ಹೂಡಿದ್ದಾರೆ.
‘ಶೀರ್ಷಿಕೆ ನೋಂದಣಿ ಮಾಡಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಾಗ ವಿವಿಧ ರೀತಿಯ ಪ್ರತಿಕ್ರಿಯೆಗಳು ಬಂದವು. ಅದರ ಬಳಿಕ ಕಥೆ ಸಿದ್ಧವಾಯಿತು. ನಾಲ್ಕು ನಿರುದ್ಯೋಗಿ ಯುವಕರು ಕಾರಣವಿಲ್ಲದೆ ಸಾಲ ಮಾಡುತ್ತಾರೆ. ನಂತರ ಬಡ್ಡಿ ಕಟ್ಟಲು ಮತ್ತೆ ಸಾಲದ ಹಿಂದೆ ಹೋಗುತ್ತಾರೆ. ಅಸಹಾಯಕ ಪರಿಸ್ಥಿತಿ ಬಂದಾಗ ಅವರಂತೆ ಸಾಲ ಮಾಡಿರುವವರನ್ನು ಒಗ್ಗೂಡಿಸಿ ಸಂಘ ಶುರು ಮಾಡಿ, ಸರ್ಕಾರಕ್ಕೆ ಒಂದಷ್ಟು ಬೇಡಿಕೆ ಇಡುತ್ತಾರೆ. ಅದು ಏನು? ಸರ್ಕಾರವು ಯಾವ ರೀತಿ ಸ್ಪಂದಿಸುತ್ತದೆ ಎಂಬುದೇ ಚಿತ್ರಕಥೆ. ಸಂಪೂರ್ಣ ಹಾಸ್ಯಮಯ ಚಿತ್ರ’ ಎಂದರು ನಿರ್ದೇಶಕ.
ಕೆಂಪೇಗೌಡ, ಜಾಲಿ ಜಾಲಿ ಜಾಕ್, ಕಾಮಿಡಿ ಕಿಲಾಡಿಗಳು ಖ್ಯಾತಿಯ ಲೋಕೇಶ್ ಮತ್ತು ಪ್ರವೀಣ್ ಕುಮಾರ್, ಪೂಜಾ ಪ್ರಮುಖ ಪಾತ್ರಗಳಲ್ಲಿದ್ದಾರೆ. ರಂಗಾಯಣ ರಘು, ಹೊನ್ನವಳ್ಳಿ ಕೃಷ್ಣ, ಲಕ್ಷೀ ಸಿದ್ಧಯ್ಯ ಮುಂತಾದವರು ನಟಿಸಿದ್ದಾರೆ.
ಎಂ.ಎಂ.ತ್ಯಾಗರಾಜ್ ಸಂಗೀತವಿದೆ. ಹಾಡುಗಳಿಗೆ ವಿ.ಹರಿಕೃಷ್ಣ, ಜೋಗಿ ಪ್ರೇಮ್, ನವೀನ್ ಸಜ್ಜು ಹಾಗೂ ಎಂ.ಎಂ.ತ್ಯಾಗರಾಜ್ ಧ್ವನಿಯಾಗಿದ್ದಾರೆ. ಅನಿರುದ್ದ್ ಛಾಯಾಚಿತ್ರಗ್ರಹಣ, ಗಣೇಶ್ ನಿರ್ಚಾಲ್-ಶೇಷಾಚಲ ಕುಲಕರ್ಣಿ ಸಂಕಲನವಿದೆ. ಬೆಂಗಳೂರು, ತೀರ್ಥಹಳ್ಳಿ, ಚಿಕ್ಕಮಗಳೂರು ಮುಂತಾದೆಡೆ ಚಿತ್ರೀಕರಣಗೊಂಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.