ಠಾಣೆ(ಮುಂಬೈ): ಬಾಲಿವುಡ್ ನಟ ಸೈಫ್ ಅಲಿ ಖಾನ್ ಚಾಕು ಇರಿತ ಪ್ರಕರಣ ಸಂಬಂಧ ಮತ್ತೊಬ್ಬ ಆರೋಪಿಯನ್ನು ಭಾನುವಾರ ಮುಂಜಾನೆ ಮುಂಬೈನ ಠಾಣೆಯಲ್ಲಿ ಪೊಲೀಸರು ಬಂಧಿಸಿದ್ದಾರೆ.
ಶಂಕಿತನನ್ನು ವಿಜಯ ದಾಸ್ ಎಂದು ಗುರುತಿಸಲಾಗಿದ್ದು, ರೆಸ್ಟೋರೆಂಟ್ವೊಂದರಲ್ಲಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ. ಸಿಕ್ಕಿಬೀಳುವ ಭಯದಲ್ಲಿ ಆರೋಪಿಯು ಬೇರೆ ಬೇರೆ ಹೆಸರಿನಲ್ಲಿ ಗುರುತಿಸಿಕೊಂಡಿದ್ದ ಎಂದು ತಿಳಿದುಬಂದಿದೆ.
ಸೈಫ್ ಅವರ ನಿವಾಸದಿಂದ ಸುಮಾರು 35 ಕಿ.ಮೀ ದೂರದಲ್ಲಿರುವ ಕಾಸರ್ವಾದವಲಿಯ ಹಿರಾನಂದನಿ ಎಸ್ಟೇಟ್ ಬಳಿ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ‘ಎನ್ಡಿಟಿವಿ’ ವರದಿ ಮಾಡಿದೆ.
ಬುಧವಾರ ತಡರಾತ್ರಿ ಸೈಫ್ ಅವರ ನಿವಾಸಕ್ಕೆ ನುಗ್ಗಿದ್ದ ದುಷ್ಕರ್ಮಿಯು ಅವರ ಮೇಲೆ ಹಲ್ಲೆ ನಡೆಸಿದ್ದನು. ಘಟನೆಯಲ್ಲಿ ಸೈಫ್ ಅವರ ಕುತ್ತಿಗೆ ಮತ್ತು ಬೆನ್ನಿಗೆ ತೀವ್ರ ಗಾಯವಾಗಿತ್ತು. ತಕ್ಷಣ ಆಸ್ಪತ್ರೆಗೆ ಕರೆದೊಯ್ದಿದ್ದು, ಇದೀಗ ಅವರು ಚೇತರಿಸಿಕೊಂಡಿದ್ದಾರೆ.
ಆರೋಪಿಯ ಜಾಡು ಹಿಡಿದು ಹೋದ ಪೊಲೀಸರು ಶನಿವಾರ ಛತ್ತೀಸಗಢದ ದುರ್ಗ್ ರೈಲ್ವೆ ನಿಲ್ದಾಣದಲ್ಲಿ ಆಕಾಶ್ ಕೈಲಾಶ್ ಕನ್ನೋಜಿಯಾ ಎಂಬಾತನನ್ನು ವಶಕ್ಕೆ ಪಡೆದಿದ್ದರು. ಇದೀಗ ಈ ಪ್ರಕರಣದಲ್ಲಿ ಇಬ್ಬರು ಆರೋಪಿಗಳ ಬಂಧನವಾಗಿದೆ.
ಏತನ್ಮಧ್ಯೆ, ಸೈಫ್ ಅವರ ನಿವಾಸದಿಂದ ಚಾಕುವಿನ ತುಂಡನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.