‘ಬಡ್ಡೀಸ್’ ಸಿನಿಮಾ ಮೂಲಕ ಬೆಳ್ಳಿತೆರೆಯಲ್ಲಿ ಮಿಂಚಿದ ನಟ ಕಿರಣ್ ರಾಜ್, ‘ಕನ್ನಡತಿ’ ಧಾರಾವಾಹಿ ನಂತರ ಏನು ಮಾಡಲಿದ್ದಾರೆ ಎನ್ನುವ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಗುರುತೇಜ್ ಶೆಟ್ಟಿ ನಿರ್ದೇಶಿಸುತ್ತಿರುವ ಹೊಸ ಚಿತ್ರ ‘ರಾನಿ’ಯಲ್ಲಿ ಕಿರಣ್ ರಾಜ್ ನಾಯಕರಾಗಿ ನಟಿಸುತ್ತಿದ್ದಾರೆ.
ಸಾಮಾನ್ಯವಾಗಿ ನಾಯಕ ನಟನೊಬ್ಬ ಸಿನಿಮಾದಲ್ಲಿ ಬರುವ ಸಾಹಸ ಸನ್ನಿವೇಶಗಳಲ್ಲಿ ಅಪಾಯವನ್ನು ಮೈಗೆಳೆದುಕೊಳ್ಳುವುದನ್ನು ನೋಡಿದ್ದೇವೆ. ಆದರೆ ಇಲ್ಲಿ ಕಿರಣ್ ರಾಜ್, ಚಿತ್ರದ ಶೀರ್ಷಿಕೆಯನ್ನು ಘೋಷಿಸಲೆಂದೇ ಸಾಹಸಕ್ಕೆ ಕೈ ಹಾಕಿದ್ದಾರೆ. ದುಬೈಗೆ ತೆರಳಿ ಸುಮಾರು ಹದಿಮೂರು ಸಾವಿರ ಅಡಿ ಮೇಲಿಂದ ಸ್ಕೈ ಡ್ರೈವ್ ಮಾಡಿ ತಮ್ಮ ನೂತನ ಚಿತ್ರದ ಶೀರ್ಷಿಕೆ ಅನಾವರಣ ಮಾಡಿದ್ದಾರೆ.
‘ನನಗೆ ಸಿನಿಮಾ ಎಂದರೆ ಕನಸು. ಹಾಗಾಗಿ ಚಿತ್ರ ಆರಂಭದಿಂದಲೂ ಸ್ವಲ್ಪ ವಿಶೇಷವಾಗಿರಬೇಕು ಎಂದು ಬಯಸುತ್ತೇನೆ. ‘ರಾನಿ’ ಈ ಚಿತ್ರದ ಹೆಸರು. ನನ್ನ ಈ ಸಾಹಸಕ್ಕೆ ಮನೆಯವರಿಂದ, ಸ್ನೇಹಿತರಿಂದ ವಿರೋಧ ವ್ಯಕ್ತವಾಯಿತು. ಆದರೂ ನಾನು ಅಲ್ಲಿನ ಪರಿಣಿತರಿಂದ ತರಬೇತಿ ಪಡೆದು ಈ ಸಾಹಸಕ್ಕೆ ಮುಂದಾದೆ. ಇದು ಸಾಹಸ ಪ್ರಧಾನ ಚಿತ್ರವಾಗಿದೆ’ ಎನ್ನುತ್ತಾರೆ ಕಿರಣ್. ‘ಬಡ್ಡೀಸ್’ ನಂತರ ಗುರುತೇಜ್–ಕಿರಣ್ ಕಾಂಬಿನೇಷನ್ನಲ್ಲಿ ಈ ಚಿತ್ರ ಬರುತ್ತಿದೆ. ಚಂದ್ರಕಾಂತ್ ಪೂಜಾರಿ ಹಾಗೂ ಉಮೇಶ್ ಹೆಗಡೆ ಜಂಟಿಯಾಗಿ ಈ ಸಿನಿಮಾ ನಿರ್ಮಾಣ ಮಾಡಲಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.