ನಟ ದರ್ಶನ್ ಅಭಿನಯದ ‘ಯಜಮಾನ’ ಚಿತ್ರವು 2019ರಲ್ಲಿ ಗಲ್ಲಾಪೆಟ್ಟಿಗೆಯಲ್ಲಿ ಸದ್ದು ಮಾಡಿತ್ತು. ಇದೀಗ ಇದೇ ಚಿತ್ರತಂಡ ಮತ್ತೆ ಒಂದಾಗಿದೆ. ದರ್ಶನ್ ನಟನೆಯ 55ನೇ ಸಿನಿಮಾವನ್ನು ಶೈಲಜಾ ನಾಗ್ ಹಾಗೂ ಬಿ.ಸುರೇಶ್ ನಿರ್ಮಾಣ ಮಾಡುತ್ತಿದ್ದು, ವಿ.ಹರಿಕೃಷ್ಣ ನಿರ್ದೇಶಿಸಲಿದ್ದಾರೆ.
ಈ ಕುರಿತು ಶೈಲಜಾ ನಾಗ್ ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಮಾಹಿತಿ ನೀಡಿದ್ದು, ‘ಅಭಿಮಾನದಿಂದ ಡಿ55 ಟೇಕ್ಆಫ್ ಆಗಿದೆ’ ಎಂದು ಉಲ್ಲೇಖಿಸಿದ್ದಾರೆ. ಇದರ ಜೊತೆಗೆ ದರ್ಶನ್ ಅವರ ಜೊತೆಗಿನ ಸೆಲ್ಫಿಯನ್ನೂ ಶೈಲಜಾ ನಾಗ್ ಅಪ್ಲೋಡ್ ಮಾಡಿದ್ದಾರೆ. ಚಿತ್ರದ ಹೆಸರು ಇನ್ನೂ ಘೋಷಣೆಯಾಗಿಲ್ಲ.
ಗಾಣ ನಂಬಿ ಬದುಕು ಕಟ್ಟಿಕೊಂಡ ಹಳ್ಳಿಗರು. ಇವರ ಬದುಕಿಗೆ ಕೊಳ್ಳಿ ಇಡುವ ಎಣ್ಣೆ ಉದ್ಯಮದಲ್ಲಿ ತೊಡಗಿಸಿಕೊಂಡ ಖಳನಾಯಕನ ವಿರುದ್ಧ ತೊಡೆತಟ್ಟುವ ನಾಯಕ, ಮಹಾನಗರಕ್ಕೆ ತೆರಳಿ ಸ್ವಂತ ಬ್ರ್ಯಾಂಡ್ ಉಳಿಸಿಕೊಳ್ಳುವ ಹರಸಾಹಸವೇ ‘ಯಜಮಾನ’ ಚಿತ್ರದ ಕಥಾಹಂದರ. ದರ್ಶನ್ ಅವರ ಭರ್ಜರಿ ಡೈಲಾಗ್ಗಳು ಹಾಗೂ ಸಾಹಸ ದೃಶ್ಯಗಳಿಂದ ಈ ಚಿತ್ರ ಯಶಸ್ಸು ಕಂಡಿತ್ತು. ನಿರ್ದೇಶನದ ಜೊತೆಗೆ ವಿ. ಹರಿಕೃಷ್ಣ ಅವರ ಸಂಗೀತ ಸಂಯೋಜನೆಯಿದ್ದ ಈ ಚಿತ್ರದ ಎಲ್ಲಾ ಹಾಡುಗಳು ಹಿಟ್ ಆಗಿದ್ದವು.
2019ರಲ್ಲಿ ದರ್ಶನ್ ಅಭಿನಯದ ‘ಯಜಮಾನ’, ‘ಕುರುಕ್ಷೇತ್ರ’ ಮತ್ತು ‘ಒಡೆಯ’ ಸಿನಿಮಾಗಳು ತೆರೆಕಂಡಿದ್ದವು. 2021ರ ಮಾರ್ಚ್ನಲ್ಲಿ ತೆರೆಕಂಡ ‘ರಾಬರ್ಟ್’ ದರ್ಶನ್ ನಟನೆಯ 53ನೇ ಸಿನಿಮಾ. ಪ್ರಸ್ತುತ ದರ್ಶನ್, ಎಸ್.ವಿ. ರಾಜೇಂದ್ರಸಿಂಗ್ ಬಾಬು ನಿರ್ದೇಶಿಸಿರುವ ‘ರಾಜವೀರ ಮದಕರಿ ನಾಯಕ’ ಚಿತ್ರದಲ್ಲಿ ನಟಿಸುತ್ತಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.