ಬೆಂಗಳೂರು: ಹಾಸ್ಯ ನಟ ಮನದೀಪ್ ರಾಯ್ (73) ಅವರು ಭಾನುವಾರ ಹೃದಯಾಘಾತದಿಂದ ನಿಧನರಾದರು. ಕೆಲ ದಿನಗಳ ಹಿಂದೆಯೂ ಹೃದಯಾಘಾತಕ್ಕೀಡಾಗಿದ್ದ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು.
ಮನ್ದೀಪ್ ಅವರು ಬಾಲ್ಯದಿಂದಲೂ ರಂಗಭೂಮಿಯತ್ತಲೇ ಆಕರ್ಷಿತರಾಗಿದ್ದರು. ಮುಂಬೈ ರಂಗಭೂಮಿಯಲ್ಲಿ ಸಕ್ರಿಯರಾಗಿದ್ದ ಅವರಿಗೆ ಶಂಕರ್ನಾಗ್ ಒಡನಾಟ ಸಿಕ್ಕಿತು. ಸಾಕಷ್ಟು ರಂಗಪ್ರಯೋಗಗಳಲ್ಲಿ ರಾಯ್ ಅಭಿನಯಿಸಿದ್ದರು. ಮುಂದೆ ಶಂಕರ್ನಾಗ್ ಜೊತೆ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟರು. ಕೆಲಕಾಲ ಶಂಕರ್ನಾಗ್, ಅನಂತನಾಗ್ ಜೊತೆಗೇ ದುಡಿದರು. ಕನ್ನಡ ಕಲಿತು ಕನ್ನಡ ಚಿತ್ರರಂಗದಲ್ಲಿ ದುಡಿದರು.
ಸುಮಾರು 500ರಷ್ಟು ಚಿತ್ರಗಳಲ್ಲಿ ಹಾಸ್ಯ ಹಾಗೂ ಪೋಷಕ ಪಾತ್ರಗಳಿಗೆ ಬಣ್ಣ ಹಚ್ಚಿದ ಹೆಗ್ಗಳಿಕೆ ಅವರದ್ದು. ಕಿರುತೆರೆ ಧಾರಾವಾಹಿಗಳಲ್ಲಿಯೂ ಅವರು ಅಭಿನಯಿಸಿದ್ದರು.
ಮಿಂಚಿನ ಓಟ, ಬಾಡದ ಹೂವು, ಆಕಸ್ಮಿಕ, ಅಗ್ನಿ ಐಪಿಎಸ್, ದೀಪಾವಳಿ, ಅಯ್ಯ, ಅಪೂರ್ವ ಸಂಗಮ, ಪ್ರೀತ್ಸೋದ್ ತಪ್ಪಾ, ಏಳು ಸುತ್ತಿನ ಕೋಟೆ, ಗಜಪತಿ ಗರ್ವಭಂಗ, ಆಸೆಗೊಬ್ಬ ಮೀಸೆಗೊಬ್ಬ ಅವರು ನಟಿಸಿದ ಪ್ರಮುಖ ಚಿತ್ರಗಳು.
ಮನ್ದೀಪ್ ಅವರಿಗೆ ಪತ್ನಿ, ಪುತ್ರಿ ಇದ್ದಾರೆ. ಅಂತ್ಯಕ್ರಿಯೆ ಹೆಬ್ಬಾಳದ ಚಿತಾಗಾರದಲ್ಲಿ ನಡೆಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.