ಕ್ಯಾನ್ಸರ್ನಿಂದ ಬಳಲುತ್ತಿರುವ ಬಾಲಿವುಡ್ ನಟ ಸಂಜಯ್ ದತ್ ಅವರು ಈಗಾಗಲೇ ಮುಂಬೈ ಆಸ್ಪತ್ರೆಯಲ್ಲಿಯೇ ಮೊದಲ ಹಂತದ ಕಿಮೊಥೆರಪಿಗೆ ಒಳಗಾಗಿದ್ದಾರೆ. ಇಲ್ಲಿಯೇ ಪ್ರಾಥಮಿಕ ಚಿಕಿತ್ಸೆ ಪಡೆದ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಅಮೆರಿಕಕ್ಕೆ ತೆರಳಲಿದ್ದಾರೆ. ಈ ನಡುವೆಯೇ ಅವರು ಬಾಕಿ ಇರುವ ‘ಶಂಶೇರಾ’, ‘ಕೆಜಿಎಫ್ ಚಾಪ್ಟರ್ 2’ ಸಿನಿಮಾಗಳ ಶೂಟಿಂಗ್ ಅನ್ನು ಪೂರ್ಣಗೊಳಿಸುತ್ತಾರೆಯೇ? ಎಂಬ ಅಭಿಮಾನಿಗಳ ಕುತೂಹಲದ ಪ್ರಶ್ನೆಗೆ ಈಗ ಉತ್ತರ ಸಿಕ್ಕಿದೆ.
ಸಂಜಯ್ ದತ್ ಅವರ ಕಾರು ನಿನ್ನೆ ಸಂಜೆ ಮುಂಬೈನ ಯಶ್ ರಾಜ್ ಸ್ಟುಡಿಯೊದಲ್ಲಿ ಕಾಣಿಸಿಕೊಂಡಿರುವ ಫೋಟೊವೊಂದು ವೈರಲ್ ಆಗಿದೆ. ಯಶ್ ರಾಜ್ ಬ್ಯಾನರ್ನಡಿ ‘ಶಂಶೇರಾ’ ಸಿನಿಮಾ ನಿರ್ಮಿಸಲಾಗುತ್ತಿದೆ. ಕರಣ್ ಮಲ್ಹೋತ್ರ ನಿರ್ದೇಶನದ ಈ ಚಿತ್ರದಲ್ಲಿ ಸಂಜಯ್ ಜೊತೆಗೆ ರಣ್ಬೀರ್ ಕಪೂರ್ ಕೂಡ ನಟಿಸಿದ್ದಾರೆ. ಈ ಡಕಾಯಿಟ್ ಡ್ರಾಮಾದಲ್ಲಿ ದತ್ ಪಾತ್ರದ ಕೆಲವು ಪ್ಯಾಚ್ವರ್ಕ್ಸ್ಗಳ ಚಿತ್ರೀಕರಣ ಪೂರ್ಣಗೊಂಡಿಲ್ಲ. ಸದ್ಯ ಮೊದಲ ಹಂತದ ಕಿಮೊಥೆರಪಿ ಪೂರ್ಣಗೊಳಿಸಿರುವ ಅವರು ಈಗ ಎರಡು ದಿನಗಳ ಶೂಟಿಂಗ್ನಲ್ಲಿ ಭಾಗವಹಿಸಿದ್ದಾರೆ ಎಂಬುದು ಬಾಲಿವುಡ್ ಮೂಲಗಳ ಮಾಹಿತಿ.
ಕೋವಿಡ್–19 ಹಿನ್ನೆಲೆಯಲ್ಲಿ ಎಲ್ಲ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಸಂಜಯ್ ದತ್ ಅವರಿಗೆ ಹೆಚ್ಚಿನ ರಿಸ್ಕ್ ನೀಡಿದೆ ಚಿತ್ರೀಕರಣ ಪೂರ್ಣಗೊಳಿಸಲು ಚಿತ್ರತಂಡ ನಿರ್ಧರಿಸಿದೆ ಎನ್ನುತ್ತವೆ ಮೂಲಗಳು.
ಪ್ರಶಾಂತ್ ನೀಲ್ ನಿರ್ದೇಶನದ ‘ಕೆಜಿಎಫ್ ಚಾಪ್ಟರ್ 2’ ಸಿನಿಮಾದಲ್ಲೂ ಸಂಜಯ್ ದತ್ ನಟಿಸಿದ್ದಾರೆ. ಇದರಲ್ಲಿ ಅವರದು ‘ಅಧೀರ’ನ ಪಾತ್ರ. ಇದರಲ್ಲಿ ಯಶ್ ಮತ್ತು ಸಂಜು ನಡುವಿನ ಮೂರು ದಿನಗಳ ಕ್ಲೈಮ್ಯಾಕ್ಸ್ ಶೂಟಿಂಗ್ ಬಾಕಿ ಇದೆ. ಮುಂದಿನ ವಾರ ಅವರು ಎರಡನೇ ಹಂತದ ಕಿಮೊಥೆರಪಿಗೆ ಒಳಗಾಗಲಿದ್ದಾರೆ. ಹಾಗಾಗಿ, ‘ಕೆಜಿಎಫ್ ಚಾಪ್ಟರ್ 2‘ ಸಿನಿಮಾದ ಬಾಕಿ ಶೂಟಿಂಗ್ ಅನ್ನು ಪೂರ್ಣಗೊಳಿಸಿಕೊಡುತ್ತಾರೆಯೇ ಎಂಬ ಕುತೂಹಲವೂ ಮೂಡಿದೆ. ಆದರೆ, ಹೊಂಬಾಳೆ ಫಿಲ್ಮ್ಸ್ ಇದರ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ.
ಸಂಜಯ್ ದತ್ ನಟಿಸುತ್ತಿರುವ ಮತ್ತೊಂದು ಪ್ರಮುಖ ಚಿತ್ರ ‘ಪೃಥ್ವಿರಾಜ್’. ಇದರಲ್ಲಿ ಅಕ್ಷಯ್ ಕುಮಾರ್ ಮತ್ತು ಮಾನುಷಿ ಚಿಲ್ಲರ್ ನಟಿಸುತ್ತಿದ್ದಾರೆ. ಕೋವಿಡ್–19 ಪರಿಣಾಮ ಮಾರ್ಚ್ನಲ್ಲಿಯೇ ಇದರ ಶೂಟಿಂಗ್ ಸ್ಥಗಿತಗೊಂಡಿದೆ. ಡಾ.ಚಂದ್ರಶೇಖರ್ ದ್ವಿವೇದಿ ನಿರ್ದೇಶನದ ಇದಕ್ಕೆ ಯಶ್ ರಾಜ್ ಫಿಲ್ಮ್ಸ್ ಬಂಡವಾಳ ಹೂಡಿದೆ. ಇದರ ಶೇಕಡ 40ರಷ್ಟು ಚಿತ್ರೀಕರಣವಷ್ಟೇ ಪೂರ್ಣಗೊಂಡಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.