ಬೆಂಗಳೂರು: ‘ಕನ್ನಡದ ಮೊದಲ ವಾಕ್ಚಿತ್ರ ‘ಸತಿ ಸುಲೋಚನ’ ಕೇವಲ ಮಾರ್ಚ್ 3ಕ್ಕಷ್ಟೇ ಸೀಮಿತವಾಗಿದೆ. ಇದು ದುರಂತ. ಈ ಸಿನಿಮಾದ ನಾಯಕ ನಟ ಎಂ.ವಿ.ಸುಬ್ಬಯ್ಯ ನಾಯ್ಡು ಅವರ ಸಾಧನೆ ಶಾಶ್ವತವಾಗಿ ಉಳಿಯಬೇಕು’ ಎಂದು ನಟ, ಸುಬ್ಬಯ್ಯ ನಾಯ್ಡು ಮೊಮ್ಮಗ ಸೃಜನ್ ಲೋಕೇಶ್ ಆಗ್ರಹಿಸಿದ್ದಾರೆ.
ಸೋಮವಾರ (ಮಾರ್ಚ್ 3) ಕನ್ನಡದ ಮೊದಲ ವಾಕ್ಚಿತ್ರ ‘ಸತಿ ಸುಲೋಚನ’ ಬಿಡುಗಡೆಯಾಗಿ 91 ವರ್ಷ ತುಂಬಿದ ದಿನ. ಈ ಹಿನ್ನೆಲೆಯಲ್ಲಿ 16ನೇ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ‘ವಿಶ್ವ ಕನ್ನಡ ಸಿನಿಮಾ ದಿನ ಸಂಭ್ರಮ’ ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ಮಾತನಾಡಿದ ಸೃಜನ್, ‘ಯಾರೂ ಒಂದು ಕೆಲಸವನ್ನು ಇತಿಹಾಸ ಸೃಷ್ಟಿಸಲೆಂದೇ ಮಾಡುವುದಿಲ್ಲ. ಭವ್ಯವಾದ ಇತಿಹಾಸವಿರುವುದರಿಂದಲೇ ನಮ್ಮ ಸಂಸ್ಕೃತಿ ಇಷ್ಟೊಂದು ಶ್ರೀಮಂತವಾಗಿದೆ. ‘ಸತಿ ಸುಲೋಚನ’ ಕನ್ನಡದ ಮೊದಲ ವಾಕ್ಚಿತ್ರ ಎನ್ನುವ ಮಾತಷ್ಟೇ ಪುನರುಚ್ಚಾರವಾಗುತ್ತಿದೆ. ಸುಬ್ಬಯ್ಯ ನಾಯ್ಡು ಅವರು ನೀಡಿರುವ ಕೊಡುಗೆಗೆ ಪ್ರತಿಯಾಗಿ ನಾವೇನು ಕೊಟ್ಟಿದ್ದೇವೆ. ಒಂದು ಸ್ಮಾರಕ ಕಟ್ಟಿಸಿದ್ದೇವೆಯೇ? ಒಂದು ರಸ್ತೆಗೆ ಹೆಸರಿಟ್ಟಿದ್ದೇವೆಯೇ? ಸುಬ್ಬಯ್ಯ ನಾಯ್ಡು ಯಾರು ಎಂದರೆ ಹೆಚ್ಚಿನವರಿಗೆ ತಿಳಿದಿಲ್ಲ. ‘ಸತಿ ಸುಲೋಚನ’ ಸಿನಿಮಾದಲ್ಲಿ ದುಡಿದವರಿಗೆ ಪ್ರತಿಯಾಗಿ ಏನು ಕೊಟ್ಟಿದ್ದೇವೆ. ಒಂದು ದಿನ ಜ್ಞಾಪಿಸಿಕೊಂಡರೆ ಸಾಲುವುದಿಲ್ಲ. ಎಲ್ಲಾ ಮಹಾನ್ ಕಲಾವಿದರು, ತಂತ್ರಜ್ಞರನ್ನು ನೆನಪಿಸಿಕೊಳ್ಳಬೇಕು’ ಎಂದರು.
ನಟ ಕಿಶೋರ್ ಮಾತನಾಡಿ, ‘ಸತಿ ಸುಲೋಚನ’ದಂಥ ಭದ್ರ ಬುನಾದಿ ಮೇಲೆ ಕನ್ನಡ ಚಿತ್ರರಂಗ ನಿಂತಿದೆ. ಜನಪರ ಸಿನಿಮಾಗಳನ್ನು ಮಾಡುವುದಕ್ಕೆ, ಮಾಡುತ್ತಿರುವುದಕ್ಕೆ ಬುನಾದಿ ಹಾಕಿದ್ದು ಇಂತಹ ಸಿನಿಮಾಗಳು. ‘ಸರ್ವಜನಾಂಗದ ಶಾಂತಿಯ ತೋಟ’ ಎಂಬ ವಿಷಯದಡಿ ಚಿತ್ರೋತ್ಸವ ನಡೆಯುತ್ತಿದೆ. ಈ ಸಿನಿಮಾದಲ್ಲಿ ಕೆಲಸ ಮಾಡಿದವರ ಹಿನ್ನೆಲೆ ನೋಡಿದರೆ ಯಾರೂ ಕನ್ನಡ ಮೂಲದವರಲ್ಲ. ಬೇರೆ ಭಾಷೆಯವರು ಸೇರಿ ಕನ್ನಡ ಸಿನಿಮಾ ಮಾಡಿದ್ದರು. ಆ ಕಾಲದಲ್ಲಿ ರಾಮನನ್ನು ಇಟ್ಟುಕೊಂಡು ಕಥೆ ಮಾಡಬಹುದಿತ್ತು. ಆದರೆ ‘ಸತಿ ಸುಲೋಚನಾ’ದಲ್ಲಿ ಹೆಣ್ಣನ್ನು ಮುಖ್ಯ ಪಾತ್ರವಾಗಿಟ್ಟುಕೊಂಡು ಹೆಣ್ಣಿನ ದನಿಯಲ್ಲಿ ಯುದ್ಧವನ್ನು ಖಂಡಿಸಿರುವುದು ಹೆಮ್ಮೆ ಎನಿಸಿತು. ಈ ರೀತಿ ಕ್ರಾಂತಿಕಾರಿ ಆಲೋಚನೆ ಆ ಕಾಲದಲ್ಲಿ ಇತ್ತು ಎನ್ನುವುದು ಕಣ್ತೆರೆಸಬೇಕು. ಇವತ್ತು ಏನು ಮಾಡುತ್ತಿದ್ದೇವೆ ಎನ್ನುವುದನ್ನು ಪ್ರಶ್ನಿಸಿಕೊಳ್ಳಬೇಕು’ ಎಂದರು.
ಚಿತ್ರದ ನಿರ್ದೇಶಕ ವೈ.ವಿ.ರಾವ್ ಅವರ ಮೊಮ್ಮಕ್ಕಳು, ಸಾಹಿತ್ಯ ಬರೆದ ಬೆಳ್ಳಾವೆ ನರಹರಿ ಶಾಸ್ತ್ರಿ ಅವರ ಮೊಮ್ಮಕ್ಕಳು ಉಪಸ್ಥಿತರಿದ್ದರು. ರಂಗಗಾಯಕ ಲಕ್ಷ್ಮಣದಾಸ್ ಅವರು ‘ಸತಿ ಸುಲೋಚನಾ’ದ ಹಾಡುಗಳಿಗೆ ಧ್ವನಿಯಾದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.