ಬಾಲಿವುಡ್ ‘ಬಾದ್ಶಾ’ ಶಾರುಕ್ ಖಾನ್ ಅವರ ಮುಂಬೈನಲ್ಲಿರುವ ಭವ್ಯ ಬಂಗಲೆ ‘ಮನ್ನತ್’ ಮುಸುಕು ಹಾಕಿಕೊಂಡಿದೆ!
ಇಡೀ ಬಂಗಲೆಯನ್ನು ಪಾರದರ್ಶಕ ಪ್ಲಾಸ್ಟಿಕ್ ಹೊದಿಕೆ ಹೊದಿಸಲಾಗಿದೆ. ಶಾರುಕ್ ಅಭಿಮಾನಿಗಳು ‘ಮನ್ನತ್’ ಹೊಸ ಅವತಾರವನ್ನು ಸೆರೆ ಹಿಡಿದು ಜಾಲತಾಣಗಳಲ್ಲಿ ಹರಿ ಬಿಟ್ಟಿದ್ದಾರೆ.ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಶಾರುಕ್ ಬಂಗಲೆಗೆ ಪ್ಲಾಸ್ಟಿಕ್ ಹಾಳೆ ಹೊದಿಸಿದ್ದು ಏಕೆ ಎಂಬ ಬಗ್ಗೆ ಚರ್ಚೆಗಳು ಆರಂಭವಾಗಿವೆ.
‘ಇದು ಕೊರೊನಾ ಸೋಂಕು ತಡೆಯುವ ಹೊಸ ಪ್ರಯತ್ನವಿರಬಹುದು’ ಎಂದು ಹೆಚ್ಚಿನವರು ಅಭಿಪ್ರಾಯಪಟ್ಟಿದ್ದಾರೆ. ‘ಪ್ರತಿ ವರ್ಷ ಮಾನ್ಸೂನ್ ಋತುವಿನ ವೇಳೆ ಮಳೆಯಿಂದ ರಕ್ಷಿಸಿಕೊಳ್ಳಲು ಖಾನ್ ದಂಪತಿ ಮನೆಯ ಬಾಲ್ಕನಿ, ಕಿಟಕಿಗಳನ್ನು ಪ್ಲಾಸ್ಟಿಕ್ ಹಾಳೆಗಳಿಂದ ಮುಚ್ಚುವುದು ಸಾಮಾನ್ಯ. ಇದೇನು ಹೊಸದಲ್ಲ’ ಎಂದು ಕೆಲವು ಅಭಿಮಾನಿಗಳು ಸಮಜಾಯಿಷಿ ನೀಡಿದ್ದಾರೆ. ಆದರೆ, ‘ಮನ್ನತ್’ ಮುಸುಕು ಹೊದ್ದುಕೊಂಡ ನಿಜವಾದ ಕಾರಣಇದುವರೆಗೂ ತಿಳಿದಿಲ್ಲ. ಆದರೆ, ಈ ಬಗ್ಗೆ ಎರಡು ಮೂರು ದಿನಗಳಿಂದ ಬಿಸಿಬಿಸಿ ಚರ್ಚೆಗಳು ನಡೆಯುತ್ತಿವೆ.
ಶಾರುಕ್ ಕನಸಿನ ಸೌಧವನ್ನು ಅಂದಾಜು ₹200 ಕೋಟಿ ರೂಪಾಯಿ ವೆಚ್ಚದಲ್ಲಿಸಮುದ್ರಕ್ಕೆ ಅಭಿಮುಖವಾಗಿ ಎತ್ತರದ ಪ್ರದೇಶದಲ್ಲಿ ನಿರ್ಮಿಸಲಾಗಿದೆ. ಮುಂಬೈನಲ್ಲಿ ಪ್ರಮುಖ ಆಕರ್ಷಣೀಯ ಸ್ಥಳಗಳಲ್ಲಿ ‘ಮನ್ನತ್’ ಕೂಡ ಒಂದು. ಅನಿಲ್ ಅಂಬಾನಿ ಭವ್ಯ ಬಂಗಲೆ ‘ಅಂಟಾಲಿಯಾ’ ಮತ್ತು ಬಚ್ಚನ್ ಕುಟುಂಬದ ‘ಜಲ್ಸಾ’ದಷ್ಟೇ ‘ಮನ್ನತ್’ ಕೂಡ ಜನಾಕರ್ಷಣೆಯ ಕೇಂದ್ರ.
ಲಾಕ್ಡೌನ್ ತೆರವಾದ ನಂತರ ‘ರೆಡ್ ಚಿಲ್ಲೀಸ್’ ಕಚೇರಿಯಿಂದ ಕೆಲಸ ಆರಂಭಿಸುವ ಮುನ್ನ ಕಚೇರಿಯ ಒಳಾಂಗಣ ವಿನ್ಯಾಸ ಬದಲಿಸುವಂತೆ ಶಾರುಕ್ ತಮ್ಮ ಪತ್ನಿ ಗೌರಿ ಖಾನ್ ಅವರನ್ನು ಕೇಳಿದ್ದಾರೆ. ಗೌರಿ ಪ್ರಸಿದ್ಧ ಒಳಾಂಗಣ ವಿನ್ಯಾಸಗಾರ್ತಿಯೂ ಹೌದು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.