ಕ್ಯಾನ್ಸರ್ ಶಸ್ತ್ರಚಿಕಿತ್ಸೆಯಿಂದ ಚೇತರಿಸಿಕೊಂಡಿರುವ ನಟ ಶಿವರಾಜ್ಕುಮಾರ್ ಮತ್ತೆ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ತಮ್ಮ ಆರೋಗ್ಯ ಮತ್ತು ಚಿತ್ರರಂಗದ ಚಟುವಟಿಕೆ ಕುರಿತು ಅವರು ಇತ್ತೀಚೆಗೆ ಮಾಧ್ಯಮಗಳೊಂದಿಗೆ ಮಾತನಾಡಿದರು.
‘ಆರೋಗ್ಯ ಸುಧಾರಿಸುತ್ತಿದೆ. ಈಗ ಮೊದಲಿನಂತೆ ವಾಕಿಂಗ್ ಮಾಡುತ್ತಿರುವೆ. ಬಹುತೇಕ ಸಹಜ ಜೀವನಕ್ಕೆ ಮರಳಿದ್ದೇನೆ. ಡ್ಯಾನ್ಸ್ ಮಾಡಲು ಶುರು ಮಾಡಿದ್ದೇನೆ. ಸಾಮಾನ್ಯವಾಗಿ ಈ ರೀತಿ ಶಸ್ತ್ರಚಿಕಿತ್ಸೆಗೆ ಒಳಗಾದರೆ ಚೇತರಿಕೆಗೆ ಐದಾರು ತಿಂಗಳು ಬೇಕು. ಆದರೆ ಬೇಗ ಚೇತರಿಕೆಗೊಂಡಿದ್ದೇನೆ. ವೈದ್ಯರು ಪ್ರತಿ ಹತ್ತು ದಿನಕ್ಕೆ ಒಂದು ಸಲ ಫೋನ್ ಮಾಡಿ ಆರೋಗ್ಯ ವಿಚಾರಿಸುತ್ತಾರೆ’ ಎಂದರು ಶಿವಣ್ಣ.
‘ಎರಡು ಜಾಹೀರಾತು ಚಿತ್ರೀಕರಣದಲ್ಲಿ ಭಾಗಿಯಾದೆ. ರಾಮ್ಚರಣ್ ನಟನೆಯ ‘ಪೆದ್ದಿ’ ಚಿತ್ರದ ಚಿತ್ರೀಕರಣದಲ್ಲಿ ಎರಡು ದಿನ ಪಾಲ್ಗೊಂಡೆ. ‘131’ ಚಿತ್ರೀಕರಣ ಮುಗಿಸಿ ಇನ್ನೊಂದು ಚಿತ್ರ ಶುರು ಮಾಡಬೇಕು. ಆ ನಿಟ್ಟಿನಲ್ಲಿ ಕೆಲಸ ನಡೆಯುತ್ತಿದೆ. ಸದ್ಯದಲ್ಲಿ ಪವನ್ ಒಡೆಯರ್ ಜೊತೆ ಸಿನಿಮಾ ಚಿತ್ರೀಕರಣ ಪ್ರಾರಂಭಿಸಬೇಕು’ ಎಂದು ಅವರು ತಿಳಿಸಿದರು.
‘ಪೆದ್ದಿಯಲ್ಲಿ ವಿಶೇಷ ಪಾತ್ರ. ಜನ ನೋಡಿದಾಗ ಕನೆಕ್ಟ್ ಆಗುತ್ತಾರೆ. ನನಗೆ ರಾಮಚರಣ್ ಮೇಲಿರುವ ಪ್ರೀತಿ, ಅವರಿಗೆ ನನ್ನ ಮೇಲಿನ ಪ್ರೀತಿ ಈ ಪಾತ್ರದಲ್ಲಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.