ಹುಬ್ಬಳ್ಳಿ: ವೇದ ಚಲನಚಿತ್ರ ಪ್ರಚಾರಕ್ಕೆ ನಟ ಶಿವರಾಜ್ಕುಮಾರ್ ಬಾರದ ಕಾರಣ ಅಭಿಮಾನಿಗಳು ಶುಕ್ರವಾರ ನಿರಾಸೆಯಿಂದ ಮರಳಿದರು.
ಡಾ. ರಾಜ್ಕುಮಾರ್ ಅಭಿಮಾನಿಗಳ ಸಂಘದ ಒಕ್ಕೂಟದ ವತಿಯಿಂದ ವೇದ ಸಿನಿಮಾ ಪ್ರಚಾರ ರ್ಯಾಲಿಯನ್ನು ದುರ್ಗದಬೈಲ್ನಲ್ಲಿ ಹಮ್ಮಿಕೊಳ್ಳಲಾಗಿತ್ತು. ನೆಚ್ಚಿನ ನಟನನ್ನು ನೋಡಲು ಅಭಿಮಾನಿಗಳು ಸಂಜೆ ನಾಲ್ಕು ಗಂಟೆಗೆ ಜಮಾಯಿಸಿದ್ದರು. ಸಂಜೆ 6 ಗಂಟೆ ಸುಮಾರಿಗೆ ಬಂದ ಶಿವರಾಜ್ಕುಮಾರ್ ಅಭಿಮಾನಿಗಳ ಸಂಘದ ಉಪಾಧ್ಯಕ್ಷ ಶಿವಾನಂದ ಮುತ್ತಣ್ಣವರ ಶಿವರಾಜ್ಕುಮಾರ್ ಅವರು ಮೆರವಣಿಗೆಯಲ್ಲಿ ಪಾಲ್ಗೊಳ್ಳುವುದಿಲ್ಲ, ಅಪ್ಸರಾ ಚಿತ್ರಮಂದಿರದಲ್ಲಿ ಮಾತನಾಡಲಿದ್ದಾರೆ ಎಂದರು.
ಅಲ್ಲಿಂದ ಮೆರವಣಿಗೆ ಮೂಲಕ ಚಿತ್ರಮಂದಿರಕ್ಕೆ ತೆರಳಲಾಯಿತು. ಚಿತ್ರಮಂದಿರ ತಲುಪಿದ ನಂತರ ಮಾತನಾಡಿದ ಮುತ್ತಣ್ಣವರ ‘ಅನಾರೋಗ್ಯದ ಕಾರಣ ಶಿವರಾಜ್ಕುಮಾರ್ ಅವರು ಚಿತ್ರಮಂದಿರಕ್ಕೆ ಭೇಟಿ ನೀಡಿ ಆಗಲೇ ಶಿವಮೊಗ್ಗಕ್ಕೆ ತೆರಳಿದ್ದಾರೆ’ ಎಂದರು. ಭಾರಿ ಸಂಖ್ಯೆಯಲ್ಲಿ ಸೇರಿದ್ದ ಅಭಿಮಾನಿಗಳು ನಿರಾಸೆಯಿಂದ ಅಲ್ಲಿಂದ ಹೊರಟರು.
ಮೆರವಣಿಗೆಯಲ್ಲಿ ಪಾಲ್ಗೊಳ್ಳಲು ಬಂದಿದ್ದ ವಿವಿಧ ಕಲಾತಂಡಗಳು ದುರ್ಗದಬೈಲ್ನಲ್ಲಿ ಸುಮಾರು 2 ಗಂಟೆಗಳ ಕಾಲ ಪ್ರದರ್ಶನ ನೀಡಿದವು. ಮಲ್ಲಕಂಬ ತಂಡದ ಸದಸ್ಯರು ಕ್ರೇನ್ಗೆ ಕಟ್ಟಿದ್ದ ಹಗ್ಗದ ಮೇಲೆ ಕಸರತ್ತು ಪ್ರದರ್ಶಿಸಿ ಗಮನ ಸೆಳೆದರು. ಶಿವರಾಜ್ಕುಮಾರ್ ಅವರಿಗೆ ಹಾಕಲು ದೊಡ್ಡ ಗಾತ್ರದ ಸೇಬಿನ ಹಾರವನ್ನು ಸಹ ತಯಾರಿಸಲಾಗಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.