‘ಯೂ ಟರ್ನ್’ ಚಿತ್ರದ ಮೂಲಕ ಚಂದನವನಕ್ಕೆ ಕಾಲಿಟ್ಟವರು ನಟಿ ಶ್ರದ್ಧಾ ಶ್ರೀನಾಥ್. ಮೊದಲ ಸಿನಿಮಾದಲ್ಲಿಯೇ ಅವರು ಕನ್ನಡಿಗರ ಮನಗೆದ್ದರು. ನಂತರ ‘ಊರ್ವಿ’, ‘ಆಪರೇಷನ್ ಅಲಮೇಲಮ್ಮ’ ಚಿತ್ರಗಳ ಮೂಲಕ ಪ್ರೇಕ್ಷಕರ ಮನಸ್ಸಿಗೆ ಮತ್ತಷ್ಟು ಹತ್ತಿರವಾದರು. ತಮಗೆ ಸಿಕ್ಕಿದ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸುವುದರಲ್ಲಿ ತೋರುವ ಶ್ರದ್ಧೆಯೇ ಅವರು ಕಾಲಿವುಡ್, ಟಾಲಿವುಡ್ಗೂ ಜಿಗಿಯಲು ಸೇತುವೆಯಾಯಿತು.
ಸ್ಯಾಂಡಲ್ವುಡ್ನಲ್ಲಿ ಪರಭಾಷೆಯ ನಟಿಯರ ಅಬ್ಬರ ಜೋರಿದೆ. ನಿರ್ಮಾಪಕರು ಮತ್ತು ನಿರ್ದೇಶಕರು ಮುಂಬೈ ಬೆಡಗಿಯರಿಗೆ ಮಣೆಹಾಕಿ ಇಲ್ಲಿ ಕುಣಿಸುವುದು ನಡೆದೇ ಇದೆ. ಶ್ರದ್ಧಾ ಶ್ರೀನಾಥ್ ಅವರದ್ದು ಈ ವಿಷಯದಲ್ಲಿ ಉಲ್ಟಾ. ಅವರು ದಕ್ಷಿಣ ಭಾರತ ಚಿತ್ರರಂಗದ ಬಹುಬೇಡಿಕೆಯ ನಟಿಯಾಗಿರುವುದು ಹೆಮ್ಮೆಯ ವಿಷಯ.
ತಮಿಳು ಚಿತ್ರರಂಗಕ್ಕೆ ಶ್ರದ್ಧಾ ಪ್ರವೇಶಿಸಿದ್ದು ಖ್ಯಾತ ನಿರ್ದೇಶಕ ಮಣಿರತ್ನಂ ನಿರ್ದೇಶನದ ‘ಕಾಟ್ರು ವೆಳ್ಳಿಯಾಡು’ ಸಿನಿಮಾ ಮೂಲಕ. ಬಳಿಕ ‘ವಿಕ್ರಂ ವೇದ’ ಮತ್ತು ‘ರಿಚ್ಚಿ’ ಚಿತ್ರಗಳಲ್ಲಿ ನಟಿಸಿ ತಮಿಳು ಸಿನಿರಸಿಕರ ಮನಗೆದ್ದರು. ಅಲ್ಲಿ ಅವರಿಗೆ ಈಗ ಅವಕಾಶದ ಹೆಬ್ಬಾಗಿಲು ತೆರೆದಿದೆ. ಹಾಗಾಗಿ, ಚಂದನವನದಿಂದ ಅವರು ದೂರವಾಗುತ್ತಿದ್ದಾರೆಯೇ ಎಂಬ ಗಾಳಿಸುದ್ದಿಯೂ ಹರಿದಾಡುತ್ತಿದೆ. ಇನ್ನೊಂದೆಡೆ ಇದು ಅವರ ಅಭಿಮಾನಿಗಳಲ್ಲಿ ನಿರಾಸೆಗೂ ಕಾರಣವಾಗಿದೆ.
‘ಹ್ಯಾಟ್ರಿಕ್ ಹೀರೊ’ ಶಿವರಾಜ್ಕುಮಾರ್ ಅವರ ‘ರುಸ್ತುಂ’ ಚಿತ್ರದಲ್ಲಿ ಅವರು ನಟಿಸುತ್ತಿದ್ದಾರೆ. ಕನ್ನಡದಲ್ಲಿ ನಟ ನೀನಾಸಂ ಸತೀಶ್ಗೆ ಜೋಡಿಯಾಗಿ ಶ್ರದ್ಧಾ ನಟಿಸಿರುವ ‘ಗೋದ್ರಾ’ ಬಿಡುಗಡೆಗೆ ಸಿದ್ಧವಾಗಿದೆ.
ಈ ವರ್ಷ ಅವರು ನಟಿಸಿರುವ ತಮಿಳಿನ ‘ಮಾರಾ’, ‘ಕೆ 13’ ಮತ್ತು ತೆಲುಗಿನ ‘ಜೆರ್ಸಿ’ ಚಿತ್ರಗಳು ತೆರೆಕಾಣಲಿವೆ. ಹಿಂದಿಯ ‘ಪಿಂಕ್’ ಸಿನಿಮಾ ತಮಿಳಿನಲ್ಲಿ ರೀಮೆಕ್ ಆಗುತ್ತಿದೆ. ಇದರಲ್ಲಿಯೂ ತಮಿಳು ಪ್ರೇಕ್ಷಕರ ಮನಸೆಳೆಯಲು ಶ್ರದ್ಧಾ ಸಜ್ಜಾಗಿದ್ದಾರೆ.ಅಜಿತ್ ಈ ಚಿತ್ರದ ನಾಯಕ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.