ತೆಲುಗು ಮತ್ತು ಹಿಂದಿ ಸಿನಿಮಾರಂಗದಲ್ಲಿ ಹೆಸರು ಮಾಡಿದ್ದರೂ ನಟಿ ಶ್ರುತಿ ಹಾಸನ್ಗೆ ದೊಡ್ಡ ನಟರ ಜತೆಗೆ ಸಿಕ್ಕ ಅವಕಾಶಗಳು ಕಡಿಮೆಯೇ. ಗಾಯನ ಮತ್ತು ನಟನೆ ಎರಡರಲ್ಲೂ ಪ್ರತಿಭೆ ಮೆರೆದಿರುವ ಈ ಸುಂದರಿ ಈಗ ತೆಲುಗಿನ ಮೆಗಾಸ್ಟಾರ್ ಚಿರಂಜೀವಿ ಜತೆಗೆ ಅಭಿನಯಿಸುವ ಅವಕಾಶ ಪಡೆದಿದ್ದಾರೆ.
ನಿರ್ದೇಶಕ ಕೊರಟಾಲ ಶಿವ ನಿರ್ದೇಶನದ ಇನ್ನೂ ಹೆಸರಿಡದ ಚಿತ್ರಕ್ಕೆ ಶ್ರುತಿ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಅದರಲ್ಲಿ ಚಿರಂಜೀವಿ ನಾಯಕ. ಸದ್ಯಕ್ಕೆ ಸುರೇಂದ್ರ ರೆಡ್ಡಿ ನಿರ್ದೇಶನದ ‘ಸೈ ರಾ ನರಸಿಂಹ ರೆಡ್ಡಿ’ ಸಿನಿಮಾದಲ್ಲಿ ಚಿರು ಬ್ಯುಸಿಯಾಗಿದ್ದು, ಹೊಸ ಸಿನಿಮಾದ ಬಗ್ಗೆ ಎಲ್ಲೂ ಮಾತನಾಡಿಲ್ಲ.
ಕೊರಟಾಲ ಶಿವ ಅವರ ಈ ಚಿತ್ರದಲ್ಲಿ ರಾಮ್ ಚರಣ್ ಕೂಡಾ ಇದ್ದಾರೆ ಅನ್ನುವುದೇ ವಿಶೇಷ. ಪಕ್ಕಾ ಮನರಂಜನಾತ್ಮಕ ಚಿತ್ರ ಇದಾಗಿದ್ದು, ರಾಮ್ ಚರಣ್ ಬ್ಯಾನರ್ ಕೊನಿಡೆಲಾ ಪ್ರೊಡಕ್ಷನ್ ಕಂಪನಿಯೇ ಇದನ್ನು ನಿರ್ಮಿಸುತ್ತಿದೆ. ಮ್ಯಾಟ್ನಿ ಎಂಟರ್ಟೈನ್ಮೆಂಟ್ ಸಹಯೋಗವಿದೆ. ಅಕಸ್ಮಾತ್ ಈ ಯೋಜನೆ ಕಾರ್ಯರೂಪಕ್ಕೆ ಬಂದಲ್ಲಿ ಕೊರಟಾಲ ಶಿವ, ಚಿರು ಮತ್ತು ಶ್ರುತಿ ಅವರ ಕಾಂಬಿನೇಷನ್ನ ಮೊದಲ ಚಿತ್ರ ಇದಾಗಲಿದೆ ಎನ್ನಲಾಗುತ್ತಿದೆ.
ಈ ಮೊದಲು ಶ್ರುತಿ ಬದಲು ತಮಿಳು ನಟಿ ನಯನ ತಾರಾ ಅವರನ್ನು ನಾಯಕಿ ಪಾತ್ರಕ್ಕೆ ಆರಿಸಲಾಗಿತ್ತಾದರೂ, ನಂತರ ದಿನಗಳಲ್ಲಿ ಆ ಸ್ಥಾನಕ್ಕೆ ಸದ್ದಿಲ್ಲದೇ ಶ್ರುತಿಯನ್ನು ಆಯ್ಕೆ ಮಾಡಲಾಗಿದೆ ಎನ್ನುವ ಸುದ್ದಿಗಳು ಟಾಲಿವುಡ್ನಲ್ಲಿ ಹರಿದಾಡುತ್ತಿವೆ.
ಚಿರುವಿನ ಇಮೇಜ್ ಅನ್ನು ಮನಸಿನಲ್ಲಿಟ್ಟುಕೊಂಡು ನಿರ್ದೇಶಕ ಶಿವ ಚಿತ್ರಕತೆ ಬರೆಯುವುದರಲ್ಲಿ ತಲ್ಲೀನರಾಗಿದ್ದು, ‘ಸೈ ರಾ ನರಸಿಂಹ ರೆಡ್ಡಿ’ ಬಿಡುಗಡೆಯ ನಂತರವೇ ಈ ಚಿತ್ರವನ್ನು ಕೈಗೆತ್ತಿಕೊಳ್ಳುವರಂತೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.