‘ನೀರ್ದೋಸೆ’ ಸಿನಿಮಾ ಖ್ಯಾತಿಯ ನಿರ್ದೇಶಕ ವಿಜಯಪ್ರಸಾದ್ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿರುವ ‘ಸಿದ್ಲಿಂಗು–2’ ಸಿನಿಮಾ ಫೆ.14ರಂದು ಬಿಡುಗಡೆಯಾಗುತ್ತಿದೆ. ಚಿತ್ರದ ಮೊದಲ ಹಾಡು ‘ಕಥೆಯೊಂದು..’ ಇತ್ತೀಚೆಗೆ ಬಿಡುಗಡೆಗೊಂಡಿತು.
ಈ ಹಾಡನ್ನು ಅರಸು ಅಂತಾರೆ ಬರೆದಿದ್ದು, ಅನೂಪ್ ಸೀಳಿನ್ ಸಂಗೀತ ಸಂಯೋಜಿಸುವುದರ ಜೊತೆಗೆ ಹಾಡಿಗೆ ಧ್ವನಿಯಾಗಿದ್ದಾರೆ. ಯೋಗಿ ಮತ್ತು ಸೋನು ಗೌಡ ಅಭಿನಯದಲ್ಲಿ ಈ ಹಾಡು ಮೂಡಿಬಂದಿದೆ.
‘ಇದು ತುಂಬಾ ಅವಮಾನಗಳನ್ನು ಎದುರಿಸಿ ಮಾಡಿರುವ ಸಿನಿಮಾ. ನಿರ್ಮಾಪಕರಾದ ಹರಿ ಮತ್ತು ರಾಜು ನಮ್ಮ ಕಷ್ಟದ ಸಮಯದಲ್ಲಿ ಬಂದು ನಮ್ಮ ಜೊತೆಗೆ ಸಿನಿಮಾ ಮಾಡಿದ್ದಾರೆ. ನನಗೂ, ವಿಜಯಪ್ರಸಾದ್ ಅವರಿಗೂ ಈ ಸಿನಿಮಾದಲ್ಲಿ ಆಗಿರುವ ಜಗಳ, ಇರುಸುಮುರುಸು ಈ ಹಿಂದೆ ಆಗಿಲ್ಲ. ಅದು ಸಿನಿಮಾ ವಿಷಯಕ್ಕೆ ಮಾತ್ರ. ಒಬ್ಬ ಪರಿಪೂರ್ಣ ನಟ ಆಗಬೇಕು ಅಂದರೆ ಅವರ ಜೊತೆಗೆ ಕೆಲಸ ಮಾಡಬೇಕು. ಮುಂದೆಯೂ ಅವರ ಜೊತೆಗೆ ಇನ್ನಷ್ಟು ಕೆಲಸ ಮಾಡುವ ಆಸೆ ಇದೆ’ ಎಂದು ಯೋಗಿ.
‘ಇಡೀ ಸಿನಿಮಾದಲ್ಲಿ ಯೋಗಿ ಇದೇ ವೇಷದಲ್ಲಿರುತ್ತಾರೆ. ಈ ಹಾಡಿನ ಹೀರೊಗಳು ಅನೂಪ್ ಹಾಗೂ ಅರಸು’ ಎಂದರು ವಿಜಯಪ್ರಸಾದ್. ‘ಸಿದ್ಲಿಂಗು 2’ ಚಿತ್ರವನ್ನು ಶ್ರೀಹರಿ ಮತ್ತು ರಾಜು ಶೇರಿಗಾರ್ ನಿರ್ಮಿಸಿದ್ದು, ಸುಮನ್ ರಂಗನಾಥ್, ಗಿರಿಜಾ ಲೋಕೇಶ್, ಮಹಾಂತೇಶ್, ಆ್ಯಂಟೋನಿ ಕಮಲ್, ಮಂಜುನಾಥ ಹೆಗಡೆ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಚಿತ್ರಕ್ಕೆ ಪ್ರಸನ್ನ ಗುರ್ಲಕೆರೆ ಛಾಯಾಚಿತ್ರಗ್ರಹಣ ಮತ್ತು ಅಕ್ಷಯ್ ಪಿ. ರಾವ್ ಸಂಕಲನವಿದೆ. ‘ಭೀಮ’ ಚಿತ್ರದ ನಿರ್ಮಾಪಕ ಜಗದೀಶ್, ಈ ಚಿತ್ರವನ್ನು ರಾಜ್ಯದಾದ್ಯಂತ ಬಿಡುಗಡೆ ಮಾಡುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.