ಎಂ. ಜಿ. ಶ್ರೀಕುಮಾರ್
ಚಿತ್ರ: ಇನ್ಸ್ಟಾಗ್ರಾಂ
ಕೊಚ್ಚಿ(ಕೇರಳ): ಕೊಚ್ಚಿ ಹಿನ್ನೀರಿಗೆ ಕಸದ ಚೀಲ ಎಸೆದ ಆರೋಪದ ಮೇಲೆ ಖ್ಯಾತ ಹಿನ್ನೆಲೆ ಗಾಯಕ ಎಂ. ಜಿ. ಶ್ರೀಕುಮಾರ್ ಅವರಿಗೆ ಇಲ್ಲಿನ ಸ್ಥಳೀಯ ಸಂಸ್ಥೆ ₹25 ಸಾವಿರ ದಂಡ ವಿಧಿಸಿದೆ.
ಈ ಸಂಬಂಧ ಗಾಯಕನಿಗೆ ನೋಟಿಸ್ ಜಾರಿ ಮಾಡಿರುವ ಮುಳವುಕಾಡ್ ಗ್ರಾಮ ಪಂಚಾಯತ್, 15 ದಿನಗಳಲ್ಲಿ ದಂಡವನ್ನು ಪಾವತಿಸುವಂತೆ ಸೂಚಿಸಿದೆ ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.
ಶ್ರೀಕುಮಾರ್ ಅವರ ಮನೆಯ ಕೆಲಸದವರು ಕೊಚ್ಚಿ ಹಿನ್ನೀರಿಗೆ ಕಸದ ಚೀಲವನ್ನು ಎಸೆಯುತ್ತಿರುವದನ್ನು ಪ್ರವಾಸಿಗೊಬ್ಬರು ತಮ್ಮ ಮೊಬೈಲ್ ಫೋನ್ನಲ್ಲಿ ವಿಡಿಯೊ ಮಾಡಿಕೊಂಡಿದ್ದು, ಅದನ್ನು ಸಚಿವ ಎಂ.ಬಿ.ರಾಜೇಶ್ ಅವರನ್ನು ಟ್ಯಾಗ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು.
ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ಸಚಿವರು, ಕಸ ಎಸೆದಿರುವ ಬಗ್ಗೆ ದೂರನ್ನು ಸಾಕ್ಷಿ ಸಮೇತ ಸರ್ಕಾರಿ ವಾಟ್ಸಾಪ್ ಸಂಖ್ಯೆಗೆ ಸಲ್ಲಿಸುವಂತೆ ಸೂಚಿಸಿದ್ದರು.
ದೂರು ಸ್ವೀಕರಿಸಿದ ನಿಯಂತ್ರಣ ಕೊಠಡಿಯು, ಸ್ಥಳ ಪರಿಶೀಲಿಸಿ ವರದಿ ನೀಡುವಂತೆ ಅಧಿಕಾರಿಗಳಿಗೆ ನಿರ್ದೇಶಿಸಿದೆ. ನಂತರ ದಂಡ ಪಾವತಿಸುವಂತೆ ಗಾಯಕನಿಗೆ ನೋಟಿಸ್ ನೀಡಿದೆ ಎಂದು ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.