ADVERTISEMENT

ಪ್ರಿನ್ಸ್‌ ಸಿನಿಮಾ: ರಾಜಮೌಳಿ ನಿರ್ದೇಶನ

​ಪ್ರಜಾವಾಣಿ ವಾರ್ತೆ
Published 6 ಜನವರಿ 2020, 19:45 IST
Last Updated 6 ಜನವರಿ 2020, 19:45 IST
   

‘ಬಾಹುಬಲಿ’ ಖ್ಯಾತಿಯ ನಿರ್ದೇಶಕ ಎಸ್‌.ಎಸ್‌. ರಾಜಮೌಳಿ, ತಮ್ಮ ಕನಸಿನ ಸಿನಿಮಾ ಪ್ರಾಜೆಕ್ಟ್‌ ‘ಮಹಾಭಾರತ’ ಬಗ್ಗೆ ಮಾತನಾಡಿದ್ದು, ಅದೇ ವೇಳೆ ನಟ ಪ್ರಿನ್ಸ್‌ ಮಹೇಶ್‌ ಬಾಬು ನಟನೆಯ ಸಿನಿಮಾವೊಂದನ್ನು ತಾನು ನಿರ್ದೇಶಿಸಲಿದ್ದೇನೆ ಎಂದು ಹೇಳಿದ್ದಾರೆ. ‌

ಅನೇಕ ದಿನಗಳ ಹಿಂದೆ ರಾಜಮೌಳಿ ಅವರು ಮಹಾಭಾರತ ಪುರಾಣ ಕತೆಯನ್ನು ಸಿನಿಮಾ ಮಾಡುವುದಾಗಿ ಹೇಳಿದ್ದು, ಆದರೆ ಸಿನಿಮಾ ಯಾವಾಗ ಆರಂಭ ಎಂದು ಸ್ಪಷ್ಟವಾಗಿ ತಿಳಿಸಿರಲಿಲ್ಲ. ಹಾಗಾಗಿ ‘ಆರ್‌ಆರ್‌ಆರ್‌’ ಸಿನಿಮಾ ಮುಗಿದ ಕೂಡಲೇ ಅವರು, ಮಹಾಭಾರತ ಸಿನಿಮಾವನ್ನು ಕೈಗೆತ್ತಿಕೊಳ್ಳಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಈಗ ಆ ಸುದ್ದಿಯನ್ನು ಅವರು ಒಪ್ಪಿಕೊಂಡಿದ್ದಾರೆ. ‘ಮಹಾಭಾರತ ಸಿನಿಮಾ ನಿರ್ದೇಶನದ ಬಗ್ಗೆ ಕೇಳಿಬರುತ್ತಿರುವುದು ಗಾಳಿಸುದ್ದಿಯಲ್ಲ. ಮಹಾಭಾರತ ಪೌರಾಣಿಕ ಸಿನಿಮಾವನ್ನು ನಾನು ನಿರ್ದೇಶನ ಮಾಡಲಿದ್ದೇನೆ. ಆದರೆ ಆ ಚಿತ್ರ ಹೇಗಿರಲಿದೆ, ಯಾರೆಲ್ಲಾ ಅಭಿನಯಿಸಲಿದ್ದಾರೆ ಎಂಬ ಬಗ್ಗೆ ಹೇಳಲಾರೆ’ ಎಂದಿದ್ದಾರೆ.

ಹಾಗೇ ತೆಲುಗಿನ ಪ್ರಿನ್ಸ್‌ ಮಹೇಶ್‌ ಬಾಬು ಅವರ ಜೊತೆ ಸಿನಿಮಾ ಮಾಡುತ್ತೇನೆ. ಆದರೆ ಅದಕ್ಕೆ ಈಗ ಯಾವುದೇ ಅವಸರ ಇಲ್ಲ ಎಂದು ಹೇಳಿದ್ದಾರೆ.

ADVERTISEMENT

‘ಈ ಎರಡೂ ಚಿತ್ರಗಳು ನನ್ನ ಮೊದಲ ಆದ್ಯತೆಯಲ್ಲಿವೆ. ಆದರೆ ಈ ಎರಡೂ ಸಿನಿಮಾಗಳಲ್ಲಿ ಯಾವುದು ಮೊದಲು ಆರಂಭವಾಗುತ್ತದೆ ಎಂಬುದು ಗೊತ್ತಿಲ್ಲ’ ಎಂದು ಅವರು ಹೇಳಿದ್ದಾರೆ.

ಕಳೆದ ಕೆಲ ವರ್ಷಗಳಿಂದ ಎಸ್‌.ಎಸ್‌. ರಾಜಮೌಳಿ ಹಾಗೂ ಮಹೇಶ್‌ ಬಾಬು ಜೋಡಿಯ ಸಿನಿಮಾ ಬಗ್ಗೆ ಸುದ್ದಿಗಳು ಹರಿದಾಡುತ್ತಿವೆ. ಈ ಸುದ್ದಿಗಳ ಬಗ್ಗೆ ಇಬ್ಬರೂ ಸಕಾರಾತ್ಮಕವಾಗಿ ಮಾತನಾಡಿ, ಒಟ್ಟಿಗೆ ಸಿನಿಮಾ ಮಾಡುವ ಇಂಗಿತವನ್ನೂ ವ್ಯಕ್ತಪಡಿಸಿದ್ದರು. ಈಗ ಮಹೇಶ್‌ ಬಾಬು ಅಭಿಮಾನಿಗಳು ಈ ಸಿನಿಮಾದ ಅಧಿಕೃತ ಘೋಷಣೆಗೆ ಕಾಯುತ್ತಿದ್ದಾರೆ.

ಮಹೇಶ್‌ ಬಾಬು ಜೊತೆಗಿನ ಸಿನಿಮಾ ಬಗ್ಗೆ ಮಾತನಾಡಿದ ರಾಜಮೌಳಿ, ‘ನಾನು ಹೊಸ ಚಿತ್ರಕತೆ ಇನ್ನೂ ಆರಂಭ ಮಾಡಬೇಕಿದೆ. ಬಳಿಕ ಅದನ್ನು ಮಹೇಶ್‌ ಅವರಿಗೆ ತಿಳಿಸುತ್ತೇನೆ. ಸ್ಕ್ರಿಫ್ಟ್‌ ರೆಡಿಯಾದ ಕೂಡಲೇ ಮಹೇಶ್‌ ಬಾಬು ಜೊತೆ ಮಾತನಾಡುತ್ತೇನೆ. ಅವರ ಜೊತೆ ಸಿನಿಮಾ ಮಾಡಬೇಕು ಎಂದು ಕೆಟ್ಟ ಚಿತ್ರಕತೆ ಬಗ್ಗೆ ಮಾಡುವುದಿಲ್ಲ. ಅವಸರವಿಲ್ಲ’ ಎಂದು ಹೇಳಿದ್ದಾರೆ.

ಸದ್ಯ ರಾಜಮೌಳಿ ‘ಆರ್‌ಆರ್‌ಆರ್‌’ ಚಿತ್ರದ ಕೆಲಸಗಳಲ್ಲಿ ಬ್ಯುಸಿಯಾಗಿದ್ದರೆ, ಮಹೇಶ್‌ ಬಾಬು ‘ಸರಿಲೇರು ನೀಕೆವ್ವರು’ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದಾರೆ. ‘ಸರಿಲೇರು ನೀಕೆವ್ವರು’ ಚಿತ್ರಕ್ಕಾಗಿ ಮಹೇಶ್‌ ಬಾಬು, ತಮನ್ನಾ ಭಾಟಿಯಾ ಮಾಡಿದ
ನೃತ್ಯವು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.