ನಟ ರಾಜವರ್ಧನ್ ‘ಗಜರಾಮ’ನಾಗಿ ಅಬ್ಬರಿಸಲು ರೆಡಿಯಾಗಿದ್ದಾರೆ. ಬಿಚ್ಚುಗತ್ತಿಯ ಮೂಲಕ ಸ್ಯಾಂಡಲ್ ವುಡ್ ಸಿನಿರಸಿಕರ ಮನಗೆದ್ದಿರುವ ನಟ ಇವರು. ಯುವ ನಿರ್ದೇಶಕ ಸುನೀಲ್ ಕುಮಾರ್ ವಿ.ಎ. ಕಥೆ ಕೇಳಿದ ರಾಜವರ್ಧನ್ ಗಜರಾಮನಿಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಗಜರಾಮನಿಗೆ ಕೊಡಗಿನ ಬೆಡಗಿ ತಪಸ್ವಿನಿ ಪೂಣಚ್ಚ ನಾಯಕಿಯಾಗಿದ್ದಾರೆ.
‘‘ಹರಿಕಥೆ ಅಲ್ಲ ಗಿರಿಕಥೆ’ ಚಿತ್ರಕ್ಕೆ ನಾನು ಆಯ್ಕೆಯಾಗಿದ್ದೇ ಆಕಸ್ಮಿಕವಾಗಿ. ಸಿನಿಮಾ ಕ್ಷೇತ್ರಕ್ಕೆ ಬರಬೇಕು ಅನ್ನುವುದು ನನ್ನ ಉದ್ದೇಶ ಆಗಿರಲಿಲ್ಲ. ಆದ್ರೆ ಇನ್ಸ್ಟಾಗ್ರಾಂನಲ್ಲಿ ಒಂದು ಫೋಟೋ ನೋಡಿ ಚಿತ್ರತಂಡ ನನ್ನ ಸಂಪರ್ಕ ಮಾಡಿದ್ರು. ಕಥೆ ಕೇಳಿ ಇಷ್ಟ ಆಯ್ತು ಒಪ್ಪಿಕೊಂಡೆ ಇದೀಗ ‘ಗಜರಾಮ’ ಸಿನಿಮಾ ಅವಕಾಶ ಸಿಕ್ಕಿದೆ. ‘ಹರಿಕಥೆ ಅಲ್ಲ ಗಿರಿಕಥೆ’ ಚಿತ್ರದ ನಂತರ ಸಾಕಷ್ಟು ಸಿನಿಮಾ ಅವಕಾಶಗಳು ಬರುತ್ತಿವೆ. ಹಳ್ಳಿ ಹುಡುಗಿಯ ಪಾತ್ರದಲ್ಲಿ ನಾನು ಕಾಣಿಸಿಕೊಳ್ಳುತ್ತಿದ್ದೇನೆ’ ಎಂದರು ತಪಸ್ವಿನಿ.
ಸುನೀಲ್ ಕುಮಾರ್ ‘ಗಜರಾಮ’ ಸಿನಿಮಾ ಮೂಲಕ ಸ್ವತಂತ್ರ ನಿರ್ದೇಶಕರಾಗಿ ಬಡ್ತಿ ಪಡೆಯುತ್ತಿದ್ದಾರೆ. ಈ ಚಿತ್ರಕ್ಕೆ ಮನೋಮೂರ್ತಿ ಸಂಗೀತ, ಕೆ.ಎಸ್.ಚಂದ್ರಶೇಖರ್ ಛಾಯಾಗ್ರಹಣ, ಜ್ಞಾನೇಶ್ ಬಿ. ಮಠದ್ ಸಂಕಲನ, ಧನಂಜಯ್ ನೃತ್ಯ ನಿರ್ದೇಶನ, ಚಿನ್ಮಯ್ ಭಾವಿಕೆರೆ, ಜಯಂತ್ ಕಾಯ್ಕಿಣಿ ಸಾಹಿತ್ಯವಿದೆ. ಲೈಫ್ ಲೈನ್ ಫಿಲ್ಮ್ ಪ್ರೊಡಕ್ಷನ್ ಅಡಿ ನರಸಿಂಹ ಮೂರ್ತಿ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಮಲ್ಲಿಕಾರ್ಜುನ್ ಕಾಶಿ ಮತ್ತು ಕ್ಸೇವಿಯರ್ ಫರ್ನಾಂಡಿಸ್ ಕೂಡ ನಿರ್ಮಾಣದ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ಇದೇ ತಿಂಗಳಾಂತ್ಯಕ್ಕೆ ಸಿನಿಮಾ ಸೆಟ್ಟೇರಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.