ತೆಲುಗಿನಲ್ಲಿ ಯಶಸ್ಸು ಕಂಡ ‘ಎವರು’ಸಿನಿಮಾ ಈಗ ಕನ್ನಡಕ್ಕೆ ರಿಮೇಕ್ ಆಗುತ್ತಿದೆ. ಈ ಚಿತ್ರದಲ್ಲಿ ಸ್ಯಾಂಡಲ್ವುಡ್ ನಟರಾದ ದಿಗಂತ್ ಮತ್ತು ಪ್ರಭು ಮುಂಡ್ಕೂರು ನಟಿಸಲಿದ್ದಾರೆ. ಈ ಚಿತ್ರಕ್ಕೆ ನಾಯಕಿಯರ ಆಯ್ಕೆ ಇನ್ನಷ್ಟೇ ನಡೆಯಬೇಕಿದೆ ಎನ್ನುತ್ತವೆ ಚಿತ್ರತಂಡ.
‘ಎವರು’ ಚಿತ್ರದಲ್ಲಿನ ನವೀನ್ಚಂದ್ರ ಪಾತ್ರವನ್ನು ದಿಗಂತ್ ನಿಭಾಯಿಸಿದರೆ, ಅಡವಿಶೇಷ್ ಪಾತ್ರದಲ್ಲಿ ಪ್ರಭು ಮುಂಡ್ಕೂರು ಕಾಣಿಸಿಕೊಳ್ಳಲಿದ್ದಾರಂತೆ.ಅಶೋಕ್ ತೇಜ್ಈ ಚಿತ್ರವನ್ನುನಿರ್ದೇಶಿಸಲಿದ್ದಾರೆ. ಕನ್ನಡದಲ್ಲಿ ಇನ್ನೂ ಟೈಟಲ್ ಅಂತಿಮವಾಗಿಲ್ಲ. ‘ಎವರು’ಗೆ ಕನ್ನಡದಲ್ಲಿ ‘ಯಾರು’ ಎನ್ನುವ ಅರ್ಥವಿದೆ. ಈ ಚಿತ್ರದಲ್ಲಿ ‘ಯಾರು’ ಅಂಥ ಉಳಿಸಿಕೊಳ್ಳಲಾಗುತ್ತದೆಯೋ ಅಥವಾ ಬೇರೆ ಇನ್ನೇನಾದರೂ ಆಕರ್ಷಕ ಶೀರ್ಷಿಕೆಯನ್ನು ಚಿತ್ರದ ಕಥೆಗೆ ಹೊಂದಿಕೆಯಾಗುವಂತೆ ಹುಡುಕಬೇಕೊ ಎನ್ನುವುದು ಚರ್ಚೆಯಲ್ಲಿದೆಯಂತೆ.
‘ಎವರು ಚಿತ್ರದ ಸ್ಕ್ರಿಪ್ಟ್ ಕೆಲಸಗಳೆಲ್ಲ ಮುಗಿದಿವೆ. ಕೊರೊನಾಕ್ಕೂ ಮೊದಲೇ ಈ ಚಿತ್ರ ಕೈಗೆತ್ತಿಕೊಳ್ಳಲಾಗಿತ್ತು. ಲಾಕ್ಡೌನ್ ಇರದಿದ್ದರೆ ಇಷ್ಟರೊಳಗೆ ಶೂಟಿಂಗ್ ಶುರುವಾಗಬೇಕಿತ್ತು. ಪರಿಸ್ಥಿತಿ ಸಹಜ ಸ್ಥಿತಿಗೆ ಮರಳಿ, ಚಿತ್ರೋದ್ಯಮ ಚಟುವಟಿಕೆಗಳು ಶುರುವಾದರೆ ಈ ಚಿತ್ರದ ಶೂಟಿಂಗ್ ಆರಂಭವಾಗಲಿದೆ’ ಎನ್ನುತ್ತಾರೆ ನಟ ಪ್ರಭು ಮುಂಡ್ಕೂರು.
‘ಈ ಅವಧಿಯಲ್ಲಿ ನಾನೊಂದು ಕಥೆಯನ್ನು ಬರೆಯುತ್ತಿದ್ದೇನೆ. ‘ಊರ್ವಿ’ ಚಿತ್ರದ ನಿರ್ದೇಶಕ ಪ್ರದೀಪ್ ವರ್ಮಾ ಅವರ ಜತೆ ಸೇರಿ ಈ ಕಥೆ ಬರೆಯುತ್ತಿದ್ದೇನೆ. ಈ ಕಥೆ ನನಗಾಗಿಯೇ. ನಾನೇ ಈ ಚಿತ್ರದಲ್ಲಿ ನಾಯಕನಾಗಿ ನಟಿಸಲಿದ್ದೇನೆ. ನಮ್ಮ ‘ರಾಂಚಿ’ ಚಿತ್ರದ ನಿರ್ಮಾಪಕರೇ ಈ ಹೊಸ ಚಿತ್ರವನ್ನು ನಿರ್ಮಾಣ ಮಾಡಲಿದ್ದಾರೆ’ ಎಂದಿದ್ದಾರೆ ಪ್ರಭು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.