ಬೆಂಗಳೂರು: ದರ್ಶನ್ ನಟನೆಯ ಬಹುನಿರೀಕ್ಷಿತ ‘ದಿ ಡೆವಿಲ್’ ಸಿನಿಮಾ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ಮಿಲನ ಪ್ರಕಾಶ್ ನಿರ್ದೇಶನದ ಈ ಚಿತ್ರದ ಪ್ರಚಾರ ಕಾರ್ಯ ಆರಂಭಿಸಬೇಕು ಎಂದು ಚಿತ್ರತಂಡ ಸಕಲ ಸಿದ್ಧತೆ ಮಾಡಿಕೊಂಡಿತ್ತು. ಅದರ ಮೊದಲ ಹಂತವಾಗಿ ‘ಇದ್ರೆ ನೆಮ್ಮದಿಯಾಗ್ ಇರ್ಬೇಕ್’ ಹಾಡನ್ನು ಆ.15ರಂದು ಬಿಡುಗಡೆ ಮಾಡುವುದಾಗಿ ಚಿತ್ರತಂಡ ಈ ಹಿಂದೆ ಹೇಳಿತ್ತು.
ಗುರುವಾರ ದರ್ಶನ್ ಜಾಮೀನು ರದ್ದಾದ ಬೆನ್ನಲ್ಲೇ ಚಿತ್ರತಂಡ ಹಾಡಿನ ಬಿಡುಗಡೆಯನ್ನೂ ಮುಂದೂಡಿದೆ. ಜಾಮೀನು ರದ್ದು ಸುದ್ದಿ ಹೊರಬರುತ್ತಿದ್ದಂತೆ, ‘ಅನಿವಾರ್ಯ ಕಾರಣದಿಂದ ಹಾಡಿನ ಬಿಡುಗಡೆ ಮುಂದೂಡಿರುವುದಾಗಿ’ ಚಿತ್ರತಂಡ ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಿದೆ.
‘ಕಾಟೇರ’ ಸಿನಿಮಾದ ಯಶಸ್ಸಿನ ಬಳಿಕ ‘ದಿ ಡೆವಿಲ್’ ಸಿನಿಮಾದ ಕೆಲಸಗಳಲ್ಲಿ ದರ್ಶನ್ ತೊಡಗಿಕೊಂಡಿದ್ದರು. ರೇಣುಕಾಸ್ವಾಮಿ ಪ್ರಕರಣದಲ್ಲಿ ಜೈಲಿಗೆ ಹೋಗಿ ಜಾಮೀನಿನಲ್ಲಿ ಹೊರಬರುತ್ತಿದ್ದಂತೆ ದರ್ಶನ್ ಈ ಚಿತ್ರದ ಬಾಕಿ ಉಳಿದಿದ್ದ ಚಿತ್ರೀಕರಣವನ್ನು ಮುಗಿಸಿಕೊಟ್ಟಿದ್ದರು. ಡಬ್ಬಿಂಗ್ ಕೂಡ ಮುಗಿಸಿದ್ದಾರೆ. ಹೀಗಾಗಿ ಪ್ರಚಾರದ ಹೊರತಾಗಿ ದರ್ಶನ್ ಭಾಗದ ಎಲ್ಲ ಕೆಲಸಗಳು ಮುಗಿದಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.