ADVERTISEMENT

ಕರ್ನಾಟಕದಲ್ಲೂ ಚಿತ್ರಮಂದಿರ ಭರ್ತಿ?: ಸಿಎಂಗೆ ಚಿತ್ರೋದ್ಯಮದ ಮನವಿ

​ಪ್ರಜಾವಾಣಿ ವಾರ್ತೆ
Published 6 ಜನವರಿ 2021, 17:02 IST
Last Updated 6 ಜನವರಿ 2021, 17:02 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ರಾಜ್ಯದ ಚಿತ್ರಮಂದಿರಗಳಲ್ಲಿ ಶೇ 100ರಷ್ಟು ಆಸನ ಭರ್ತಿಗೆ ಅವಕಾಶ ಕೊಡಬೇಕು ಎಂದು ಕೋರಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಡಿ.ಆರ್‌. ಜೈರಾಜ್‌ ನೇತೃತ್ವದ ನಿಯೋಗ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರಿಗೆ ಮನವಿ ಸಲ್ಲಿಸಿದೆ.

ಮನವಿಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ, ಪೂರ್ಣ ಪ್ರಮಾಣದ ಆಸನ ಭರ್ತಿ ಸಾಧ್ಯತೆ ಬಗ್ಗೆ ಪರಿಶೀಲಿಸುವಂತೆ ಅವರು ಅಧಿಕಾರಿಗಳಿಗೆ ಮೌಖಿಕ ಸೂಚನೆ ನೀಡಿದರು ಎಂದು ಜೈರಾಜ್‌ ಹೇಳಿದರು.

ಜೈರಾಜ್‌

ಜೈರಾಜ್‌ ಮಾತನಾಡಿ, ‘ಶೇ 50ರ ಆಸನ ಭರ್ತಿಯ ಕಾರಣದಿಂದಾಗಿ ಹೊಸ ಸಿನಿಮಾಗಳು ಬಿಡುಗಡೆ ಆಗುತ್ತಿಲ್ಲ. ಶೇ 50ರಷ್ಟು ಆಸನ ಭರ್ತಿ ಮಾಡಿ ಪ್ರದರ್ಶನ ಮಾಡಿದರೆ ನಮ್ಮ ವೆಚ್ಚವೇನೂ ಕಡಿಮೆ ಆಗುವುದಿಲ್ಲ. ಅದು ಶೇ 100ರ ಪ್ರದರ್ಶನದಷ್ಟೇ ಇರುತ್ತದೆ. ನಿರ್ಮಾಪಕರೂ ಚಿತ್ರಗಳನ್ನು ಬಿಡುಗಡೆ ಮಾಡದೇ ಹೋದರೆ ಪ್ರದರ್ಶನದಲ್ಲಿ ನಿರಂತರತೆ (ಒಂದು ಚಿತ್ರದ ಪ್ರದರ್ಶನ ಅವಧಿ ಮುಗಿದ ಬಳಿಕ ಇನ್ನೊಂದು ಚಿತ್ರ) ಕಾಯ್ದುಕೊಳ್ಳಲು ಅಸಾಧ್ಯ. ಒಟ್ಟಿನಲ್ಲಿ ಪರಿಸ್ಥಿತಿ ಹೀಗೇ ಮುಂದುವರಿದರೆ ಚಿತ್ರೋದ್ಯಮದ ಚೇತರಿಕೆ ಅಸಾಧ್ಯ’ ಎಂದು ಅವರು ಹೇಳಿದರು.

ADVERTISEMENT

ಮಕರ ಸಂಕ್ರಾಂತಿ ಬಳಿಕ ಚಿತ್ರಮಂದಿರಗಳಲ್ಲಿ ಪೂರ್ಣ ಪ್ರಮಾಣದ ಆಸನ ಭರ್ತಿಗೆ ಸರ್ಕಾರ ಅವಕಾಶ ಕೊಡಬಹುದು ಎಂಬ ನಿರೀಕ್ಷೆಯನ್ನು ಚಿತ್ರೋದ್ಯಮದ ಮೂಲಗಳು ವ್ಯಕ್ತಪಡಿಸಿವೆ. ಕೆಜಿಎಫ್‌ ಚಾಪ್ಟರ್–2 ಸಹಿತ ದೊಡ್ಡ ಬಜೆಟ್‌, ನಟರನ್ನೊಳಗೊಂಡ ಹಲವಾರು ಚಿತ್ರಗಳು ಬಿಡುಗಡೆಗೆ ಕಾದು ನಿಂತಿವೆ. ಮಾರುಕಟ್ಟೆ (ಪೂರ್ಣ ಪ್ರಮಾಣದ ಪ್ರೇಕ್ಷಕರು) ಬೆಳವಣಿಗೆ ನೋಡಿಕೊಂಡೇ ಮುಂದಿನ ಹೆಜ್ಜೆ ಇಡಲು ನಿರ್ಮಾಪಕರು ಆಲೋಚಿಸಿದ್ದಾರೆ.

ಅನ್‌ಲಾಕ್‌ 5.0 ಬಳಿಕ ಕನ್ನಡದಲ್ಲಿ ಆ್ಯಕ್ಟ್‌–1978, ಕಿಲಾಡಿಗಳು ಚಿತ್ರಗಳು ಬಿಡುಗಡೆಯಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.